
ನಾಗರಹೊಳೆ ಕಾಡಿನಂಚಿನ ವೀರನಹೊಸಹಳ್ಳಿಯಲ್ಲಿ ಸಂಪ್ರದಾಯಬದ್ಧ ಪೂಜೆ ಹಾಗೂ ಪುಷ್ಪಾರ್ಚನೆ ಸಲ್ಲಿಸಿ 2026ರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಗಜಪಯಣಕ್ಕೆ ಇಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಭಕ್ತಿಪೂರ್ವಕ ಚಾಲನೆ ನೀಡಿದರು. ಸತತ ಆರು ಬಾರಿ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದ ಕ್ಯಾಪ್ಟನ್ ಅಭಿಮನ್ಯುವಿಗೆ ಗೌರವಪೂರ್ವಕ ಬೀಳ್ಕೊಡುಗೆ ನೀಡಲಾಯಿತು.
ಮೈತುಂಬಾ ಶಂಖ, ಚಕ್ರ, ಗಂಡಭೇರುಂಡ ಮತ್ತು ನವಿರಾದ ಹೂವಿನ ಚಿತ್ತಾರಗಳಿಂದ ಸಿಂಗಾರಗೊಂಡಿದ್ದ ಕ್ಯಾಪ್ಟನ್ ಅಭಿಮನ್ಯು, ಗಜಪಯಣದ ಪ್ರಧಾನ ಆಕರ್ಷಣೆಯಾಗಿದ್ದ. ವಿಶೇಷ ಪೂಜೆ ಸಲ್ಲಿಸಿ, ಫಲತಾಂಬೂಲ ಹಾಗೂ ತಿಂಡಿ-ತಿನಿಸುಗಳ ನೈವೇದ್ಯ ಅರ್ಪಿಸಿ ಗಜಪಡೆಗೆ ಗಣ್ಯರು ಪುಷ್ಪಾರ್ಚನೆ ಮಾಡಿದರು.
ಈ ಬಾರಿಯ ಗಜಪಯಣ ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು. ಸತತ ಆರು ಬಾರಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ರಾಜಗಾಂಭೀರ್ಯದಿಂದ ಹೊತ್ತು ಕನ್ನಡಿಗರ ಹೆಮ್ಮೆಯಾಗಿದ್ದ 60 ವರ್ಷದ ನೆಚ್ಚಿನ 'ಕ್ಯಾಪ್ಟನ್ ಅಭಿಮನ್ಯು'ವಿಗೆ ದಸರಾ ಸೇವೆಯಿಂದ ಗೌರವಪೂರ್ವಕ ಹಾಗೂ ಭಾವುಕ ವಿದಾಯ ಹೇಳಲಾಯಿತು.
ಕೂಂಬಿಂಗ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿದ್ದ ಅಭಿಮನ್ಯುವಿನ ಬೀಳ್ಕೊಡುಗೆ ವೇಳೆ ಸಿಬ್ಬಂದಿ ದಾರಿಯುದ್ದಕ್ಕೂ ಹೂಮಳೆ ಸುರಿಸಿದರೆ, ಅಕ್ಕಪಕ್ಕ ನಿಂತಿದ್ದ ದಸರಾ ಆನೆಗಳು ಮತ್ತು ಮಾವುತರು ಪುಷ್ಪವೃಷ್ಟಿ ಮಾಡಿ ತಮ್ಮ ನೆಚ್ಚಿನ ಅಭಿಮನ್ಯುವಿಗೆ ಗೌರವ ಸಲ್ಲಿಸಿದರು.
ಅಭಿಮನ್ಯುವಿನ ನಿವೃತ್ತಿಯ ಬೆನ್ನಲ್ಲೇ ಧನಂಜಯ, ಮಹೇಂದ್ರ, ಗೋಪಿ, ಶ್ರೀಕಂಠ, ಲಕ್ಷ್ಮಿ ಹಾಗೂ ಕಾವೇರಿ ಸೇರಿದಂತೆ ಒಟ್ಟು 9 ಆನೆಗಳ ಮೊದಲ ತಂಡ ಪೊಲೀಸ್ ಭದ್ರತೆಯಲ್ಲಿ ಸಾಂಸ್ಕೃತಿಕ ನಗರಿಯತ್ತ ರಾಜಗಾಂಭೀರ್ಯದ ಹೆಜ್ಜೆ ಇಟ್ಟಿವೆ.
ವೀರನಹೊಸಹಳ್ಳಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿಳಿದ 9 ಆನೆಗಳ ಮೊದಲ ತಂಡಕ್ಕೆ ಅರಣ್ಯ ಭವನದ ಆವರಣದಲ್ಲಿ ಅಧಿಕಾರಿಗಳು, ಸಿಬ್ಬಂದಿ ಆದರದಿಂದ ಬರಮಾಡಿಕೊಂಡು ವಾಸ್ತವ್ಯಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿದರು.
ಆಗಸ್ಟ್ 28ರಂದು ಅರಣ್ಯ ಭವನದಿಂದ ಅರಮನೆ ಪ್ರವೇಶಿಸಲಿರುವ ಗಜಪಡೆಗೆ ಭಾರ ಹೊರುವ ತಾಲೀಮು ಆರಂಭವಾಗಲಿದೆ. ಸದ್ಯ ಅಭಿಮನ್ಯುವಿನ ನಂತರ ತಾಯಿ ಚಾಮುಂಡೇಶ್ವರಿಯ ಸ್ವರ್ಣ ಸಿಂಹಾಸನ ಹೊರಲಿರುವ ನೂತನ ಅಂಬಾರಿ ಆನೆ ಯಾವುದು ಎಂಬ ಕುತೂಹಲ ಗರಿಗೆದರಿದೆ.