ಧಾರವಾಡದಲ್ಲಿ ರಾಷ್ಟ್ರೀಯ ಮಟ್ಟದ ಬೈಕ್ ಡರ್ಟ್ ಟ್ರ್ಯಾಕ್ ಚಾಂಪಿಯನ್ ಶಿಪ್; ಇಲ್ಲಿವೆ ರೋಮಾಂಚನಕಾರಿ ರೇಸ್ನ ಫೋಟೋಗಳು
ಅಲ್ಲಿ ಜಿದ್ದಿಗೆ ಬಿದ್ದು ಬೈಕ್ ಓಡಿಸುತ್ತಿದ್ದರು. ಹೀಗೆ ಓಡಿಸುವಾಗ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಮೇಲೆದ್ದು ಮತ್ತೆ ಫೀನಿಕ್ಸ್ ಹಕ್ಕಿಯಂತೆ ಎದ್ದು ನಿಂತು, ಬೈಕ್ ಮೇಲೆ ಹತ್ತಿ ಸ್ಪರ್ಧೆಯಲ್ಲಿ ಮುಂದುವರೆಯುತ್ತಿದ್ದರು. ಇಂಥ ರೋಮಾಂಚನವಾದ ಸ್ಪರ್ಧೆಗೆ ಸಾಕ್ಷಿಯಾಗಿದ್ದು ವಿದ್ಯಾಕಾಶಿ ಧಾರವಾಡ. ಹೌದು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಬಳಿ ರಾಷ್ಟ್ರೀಯ ಮಟ್ಟದ ಬೈಕ್ ಡರ್ಟ್ ಟ್ರ್ಯಾಕ್ ಚಾಂಪಿಯನ್ ಶಿಪ್ ಆಯೋಜನೆ ಮಾಡಲಾಗಿತ್ತು.
Updated on: Aug 27, 2023 | 4:12 PM

ಸ್ಪರ್ಧೆಗೆ ಸಿದ್ಧರಾಗಿ ನಿಂತ ಬೈಕ್ ಸವಾರರು, ವಿಭಿನ್ನವಾದ ಮತ್ತು ಪವರ್ ಫುಲ್ ಆಗಿರುವ ಬೈಕ್ಗಳ ಎಕ್ಸ್ಲೇಟರ್ ನೀಡಿ ರೇಸ್ಗೆ ಸಿದ್ಧರಾಗಿ ನಿಂತ ಸ್ಪರ್ಧಾಳುಗಳು. ಅವರಿಗೆ ಹುರಿದುಂಬಿಸುತ್ತಿರುವ ರೇಸ್ ಪ್ರೀಯರು. ಬೈಕ್ ರೇಸ್ ಸ್ಪರ್ಧೆಯ ರೋಮಾಂಚನ ಘಳಿಗೆಗೆ ಸಾಕ್ಷಿಯಾಗಿ ನಿಲ್ಲಲು ಸಿದ್ಧಗೊಂಡಿರುವ ಹಾವಿನಂತೆ ಅಂಕುಡೊಂಕಾಗಿರುವ ರೇಸ್ ಟ್ರ್ಯಾಕ್. ಇದೆಲ್ಲ ಕಂಡು ಬಂದಿದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಳಿಯ ಮೈದಾನದಲ್ಲಿ.

ಹೀಗೆ ಬೈಕ್ಗಳು ಒಂದರ ಹಿಂದೆ ಒಂದು ಜಿದ್ದಿಗೆ ಬಿದ್ದು ಮುನ್ನುಗ್ಗುತ್ತಿದ್ದರೆ, ನೆರೆದವರ ಎದೆ ಒಂದು ಕ್ಷಣ ಝಲ್ ಎನ್ನುತ್ತಿತ್ತು. ಬೈಕ್ಗಳು ಸದ್ದು ಮಾಡುತ್ತಾ ರೇಸ್ನಲ್ಲಿ ಭಾಗಿಯಾಗಿದ್ದ ಈ ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ರೀತಿಯ ರೋಮಾಂಚನ!

ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಮಟ್ಟದ ಬೈಕ್ ಡರ್ಟ್ ಟ್ರ್ಯಾಕ್ ಚಾಂಪಿಯನ್ ಶಿಪ್ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಯುವಕ-ಯುವತಿಯರು ಸೇರಿದಂತೆ ಚಿಕ್ಕ ಚಿಕ್ಕ ಪುಟಾಣಿ ಮಕ್ಕಳು ಕೂಡ ರೇಸ್ನಲ್ಲಿ ಭಾಗವಹಿಸಿದ್ದರು.

ಮೊದಲ ಬಾರಿಗೆ ಧಾರವಾಡದಲ್ಲಿ ಈ ರೀತಿಯ ಬೈಕ್ ಚಾಂಪಿಯನ್ ಆಯೋಜನೆಗೊಂಡಿತ್ತು. ಈ ಬೈಕ್ ರೇಸ್ಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಆಯೋಜಕರಿಗೆ ಸಂತಸ ತಂದಿತ್ತು.

ಒಟ್ಟು 120 ಬೈಕ್ ರೈಡರ್ಸ್ ಈ ರೇಸ್ನಲ್ಲಿ ಭಾಗಿಯಾಗಿದ್ದರು. ಈ ಸ್ಪರ್ಧೆಯು ಒಟ್ಟು 5 ಹಂತಗಳಲ್ಲಿ ನಡೆಯುತ್ತದೆ. ಮೂರನೇ ಹಂತದ ಸ್ಪರ್ಧೆಯನ್ನು ಧಾರವಾಡದಲ್ಲಿ ಆಯೋಜಿಸಲಾಗಿತ್ತು. ಈಗಾಗಲೇ ಕೊಯಿಮತ್ತೂರ್, ಕೊಲ್ಲಾಪುರದಲ್ಲಿ ಎರಡು ಹಂತಗಳಲ್ಲಿ ಸ್ಪರ್ಧೆ ಮುಗಿದಿದ್ದು, ಇದೀಗ ಧಾರವಾಡದಲ್ಲಿ ಮೂರನೇ ಹಂತದ ಸ್ಪರ್ಧೆ ಮುಗಿಸಿ ಪುಣೆ ಹಾಗೂ ಬೆಂಗಳೂರಿನಲ್ಲಿ ಫೈನಲ್ ಸ್ಪರ್ಧೆಯನ್ನು ಆಯೋಜಿಸಲು ಆಯೋಜಕರು ನಿರ್ಧರಿಸಿದ್ದಾರೆ.

ಐದು ಹಂತಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸ್ಪರ್ಧಾಳುಗಳಿಗೆ ರೂ. 2.50 ಲಕ್ಷ ನಗದು ಬಹುಮಾನವನ್ನು ನೀಡಲಾಗುತ್ತೆ. 60 ಸಿಸಿ ಬೈಕ್ಗಳಿಂದ 350 ಸಿಸಿ ವರೆಗಿನ ಬೈಕ್ಗಳು ಸ್ಪರ್ಧೆಯಲ್ಲಿ ಭಾಗಿಯಾದ್ದವು. ಬೈಕ್ ರೇಸ್ ಕಣ್ತುಂಬಿಕೊಳ್ಳಲು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಮೊದಲ ಬಾರಿಗೆ ಧಾರವಾಡಕ್ಕೆ ಇಂತಹ ರೇಸ್ ಬಂದಿದ್ದು ಖುಷಿ ತಂದಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು. ಬೈಕ್ ರೈಡರ್ಸ್ ಬೈಕ್ ವೇಗವನ್ನು ಹೆಚ್ಚಿಸಿ, ಬ್ಯಾಲೆನ್ಸ್ ನಿಭಾಯಿಸಿಕೊಂಡು ಬೈಕ್ ಚಲಾಯಿಸುತ್ತಿದ್ದರೆ ನೆರೆದಿದ್ದ ಬೈಕ್ ರೇಸ್ ಪ್ರಿಯರು ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದರು.

ದೈತ್ಯ ಶಕ್ತಿಯ ಬೈಕ್ಗಳು ಕುದುರೆಯಂತೆ ಹಾರುತ್ತಾ ಸಾಗುತ್ತಿದ್ದರೆ, ಅಲ್ಲಿ ನೆರೆದಿದ್ದ ಎಲ್ಲರಿಗೂ ರೋಮಾಂಚನಕಾರಿ ಅನುಭವ ಉಂಟಾಗುತ್ತಿತ್ತು. ಬೈಕ್ಗಳ ಸದ್ದಿನೊಂದಿಗೆ ಜನರ ಹರ್ಷೋದ್ಗಾರವೂ ಮುಗಿಲು ಮುಟ್ಟುತ್ತಿತ್ತು. ಒಟ್ಟಿನಲ್ಲಿ ರವಿವಾರ ರಜೆ ಇದ್ದಿದ್ದಕ್ಕೆ ಎಲ್ಲರೂ ಇಲ್ಲಿಗೆ ಬಂದು ರೋಮಾಂಚನಕಾರಿ ಬೈಕ್ ರೇಸ್ ನೋಡಿ ಖುಷಿಪಟ್ಟಿದ್ದಂತೂ ಸತ್ಯ.

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.
Read More
