- TV9 Kannada Photo gallery Sun Udaya TV Myna Serial Special Episodes Dhanush Kabaddi Match Kannada Serial Update
‘ಮೈನಾ’ ಸೀರಿಯಲ್ ವಿಶೇಷ ಸಂಚಿಕೆಗಳು; ಕಬಡ್ಡಿ ಅಖಾಡದಲ್ಲಿ ಧೂಳೆಬ್ಬಿಸಿದ ಧನುಷ್
ಕೌಟುಂಬಿಕ ಧಾರಾವಾಹಿಗಳಿಗೆ ಹೆಸರಾಗಿರುವ ‘ಸನ್ ಉದಯ’ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ‘ಮೈನಾ’ ಧಾರಾವಾಹಿಯಲ್ಲಿ ಹೊಸ ಪ್ರಯೋಗ ಮಾಡಲಾಗಿದೆ. ನೈಜವೆನಿಸುವ ಕಬಡ್ಡಿ ಪಂದ್ಯಗಳನ್ನು ಚಿತ್ರಿಸಲಾಗಿದೆ. ಈ ವಿಶೇಷ ಸಂಚಿಕೆಗಳ ಕಲಾವಿದರಾಗಿ ಧನುಷ್ ‘ತಾಂಡವ್’ ಪಾತ್ರದ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಅವರಿಗೆ ಜೋಡಿಯಾಗಿ ದುರ್ಗಾಶ್ರೀ ನಟಿಸಿದ್ದಾರೆ.
Updated on: Jul 10, 2026 | 8:32 PM

ಊರಿನ ದೇವಸ್ಥಾನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ‘ಮೈನಾ’ ಧಾರಾವಾಹಿಯ ಇಬ್ಬರು ನಾಯಕರ ಕುಟುಂಬಗಳ ಪ್ರತಿಷ್ಠೆಗಾಗಿ ಕಬಡ್ಡಿ ಪಂದ್ಯಾವಳಿ ಜರುಗುತ್ತದೆ. ಅಮ್ಮನವರಿಗೆ ಕಿರೀಟ ತೊಡಿಸುವ ಅರ್ಹತೆ ಗಳಿಸಿಕೊಳ್ಳಲು ಕಬಡ್ಡಿ ಪಂದ್ಯ ಗೆಲ್ಲಬೇಕು ಎಂಬುದು ಷರತ್ತು.

ಒಂದು ಕುಟುಂಬದ ತಂಡಕ್ಕೆ ತಾಂಡವ್ ನಾಯಕ, ಮತ್ತೊಂದು ಕುಟುಂಬದ ತಂಡಕ್ಕೆ ಪುಷ್ಪಕ್ ನಾಯಕ. ಆತ್ಮೀಯ ಗೆಳೆಯರೇ ಪರಸ್ಪರ ಕಾದಾಡುವ ಪರಿಸ್ಥಿತಿ. ಈ ನಡುವೆ ದೇವಸ್ಥಾನದಲ್ಲಿ ನಡೆದ ಅನಾಹುತವೊಂದಕ್ಕೆ ಧ್ರುವನನ್ನು ಹೊಣೆಗಾರನನ್ನಾಗಿ ಮಾಡಿ ಛಡಿಯೇಟು ಶಿಕ್ಷೆ ನೀಡಲಾಗುತ್ತದೆ.

ಇಷ್ಟಾಗಿಯೂ ಧ್ರುವ ಕಬಡ್ಡಿ ಆಟಕ್ಕೆ ಮಿಂಚಿನ ಪ್ರವೇಶ ಮಾಡುತ್ತಾನೆ. ಅಖಾಡದಲ್ಲಿ ಟ್ವಿಸ್ಟ್ ಎಂಬಂತೆ ಅಂತಿಮವಾಗಿ ಮೈನಾ ಹಾಗೂ ದುರ್ಗಾ ರಣಕಹಳೆ ಊದಿ ಕಬಡ್ಡಿ ಅಖಾಡಕ್ಕೆ ಇಳಿಯುತ್ತಾರೆ. ಇವರು ಏಕೆ ಕಣಕ್ಕಿಳಿದರು? ಪಂದ್ಯಾವಳಿ ಹಿಂದೆ ಏನೇನು ರಾಜಕೀಯ ಕುತಂತ್ರ ನಡೆದವು?

ಅಂತಿಮ ಸಮರದಲ್ಲಿ ಗೆಲುವು ಯಾರಿಗೆ? ಗೆಳೆತನ ಹಗೆತನವಾಗದೇ ಹೇಗೆ ಉಳಿಯುತ್ತದೆ? ಇತ್ಯಾದಿ ಪ್ರಶ್ನೆಗಳಿಗೆ ‘ಮೈನಾ- ಧ್ರುವ ತಾಂಡವ’ ವಿಶೇಷ ಸಂಚಿಕೆಗಳಲ್ಲಿ ಉತ್ತರ ಇದೆ. ಸಂತೋಷ್ ಗೌಡ ಹಾಸನ ಅವರು ಈ ಧಾರಾವಾಹಿಗೆ ನಿರ್ದೇಶನ ಮಾಡಿದ್ದಾರೆ.

ಈ ಧಾರಾವಾಹಿಯನ್ನು ‘ಕೋಮಲ್ ಎಂಟರ್ಪ್ರೈಸಸ್’ ನಿರ್ಮಾಣ ಮಾಡಿದೆ. ವಾಲಿ-ದಯಾಕರ್ ಛಾಯಾಗ್ರಹಣ ಮಾಡಿದ್ದಾರೆ. ‘ಮೈನಾ-ಧ್ರುವ ತಾಂಡವ’ದಲ್ಲಿ ವಿಜಯಲಕ್ಷ್ಮೀ, ಸಿದ್ದಾರ್ಥ, ಅರಾಫತ್ ಷರೀಫ್, ಜೆ.ಎಸ್. ವಾಲಿ, ಕಾರ್ತಿಕ್, ಆಯುಧ್, ಶಿಲ್ಪಾ, ನವ್ಯಾ ಕೂಡ ನಟಿಸಿದ್ದಾರೆ.




