
ಬೆಂಗಳೂರು, ಜೂನ್ 13: ಬಿಡದಿ ಬಳಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ವಿಚಾರ ಸದ್ಯ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಜೂನ್ 22ಕ್ಕೆ ಬೃಹತ್ ಪ್ರತಿಭಟನೆಗೆ ರೈತರು ಮುಂದಾಗಿದೆ. ಸದ್ಯ ಈ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿದ್ದು, ಹೆಚ್ಡಿ ಕುಮಾರಸ್ವಾಮಿ (HD Kumaraswamy) ಮಾರ್ಗದರ್ಶನದಂತೆ ನಾವು ಈ ಯೋಜನೆ ಮುಂದುವರೆಸುತ್ತಿದ್ದೇವೆ. ದೆಹಲಿ ಭೇಟಿ ವೇಳೆ ಬಿಡದಿ ಟೌನ್ಶಿಪ್ ಬಗ್ಗೆ ಚರ್ಚೆ ಮಾಡಿದ್ದೇನೆ. ಪ್ರಧಾನಿ ಮೋದಿ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಡಿಸಿ, SP, ಸಿಇಒಗಳ ಜೊತೆ ಸಭೆ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಮೇಲೆ ಒತ್ತಡವಿದೆ, ಟೌನ್ಶಿಪ್ ಅಗತ್ಯವಿದೆ. ನೀನು ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ. ನಾನು 7ರಿಂದ 8 ಟೌನ್ಶಿಪ್ ಮಾಡಿದ್ದೇನೆ, ನೀವು ಮಾಡಿ. ನಿಮಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದರು.
ರಾಜ್ಯದಲ್ಲಿ ಎಸ್ಐಆರ್ ಪ್ರಾರಂಭ ಆಗುತ್ತಿದೆ. ಅರ್ಜಿ ಫಾರ್ಮ್ ತುಂಬಿದರೆ ಮಾತ್ರ ಮತ ಉಳಿಯುತ್ತದೆ. ಮೂರು ಸಲ ಬಿಎಲ್ಒಗಳು ಮನೆಗೆ ಬರ್ತಾರೆ. ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ತುಂಬಬೇಕು. ಪ್ರತಿಯೊಬ್ಬ ಮತದಾರರು ತಮ್ಮ ಮತಗಳನ್ನ ಉಳಿಸಿಕೊಳ್ಳಲಿ. ಮತದಾನ ಹಕ್ಕು ಕಳೆದುಕೊಂಡರೆ ಸರ್ಕಾರಿ ಸೌಲಭ್ಯಗಳು ಸಿಗುವುದು ಕಷ್ಟವಾಗುತ್ತೆ ಎಂದು ಹೇಳಿದ್ದಾರೆ.
ಈವರೆಗೆ ಮೃತಪಟ್ಟವರ ಖಾತೆಗೆ 100 ಕೋಟಿ ರೂ ಹೋಗಿದೆ. ಹಾಗಾಗಿ ಗೃಹಲಕ್ಷ್ಮೀ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸಬೇಕು. ಯಾವ ಬ್ಯಾಂಕ್ನಲ್ಲಿ ಹಣ ಪಡೀತಿದ್ದಾರೆಂಬ ಮಾಹಿತಿ ಬೇಕು. ಗೃಹಜ್ಯೋತಿಗೂ ಕೂಡ ಮತ್ತೆ ಅರ್ಜಿಯನ್ನ ಸಲ್ಲಿಸಬೇಕು. 1.64 ಲಕ್ಷ ಜನರಿಗೆ ಗೃಹಜ್ಯೋತಿಯಡಿ ಉಚಿತ ವಿದ್ಯುತ್ ತೆಗೆದುಕೊಳ್ಳುತ್ತಿದ್ದಾರೆ. ಅವರೆಲ್ಲರಿಗೂ ಗುರುತಿನ ಚೀಟಿ ಕೊಡುತ್ತೇವೆ. ನಾವು ವಾಸಕ್ಕೆ ಮಾತ್ರ ಫ್ರೀ ಕರೆಂಟ್ ಕೊಡುತ್ತಿದ್ದೇವೆ. ಕಮರ್ಷಿಯಲ್ ಬಳಕೆಗೆ ಬಳಸಿಕೊಂಡರೆ ಆಗಲ್ಲ ಎಂದಿದ್ದಾರೆ.
ಕರ್ನಾಟಕದಲ್ಲಿ ಕಾನೂನು ಬಾಹಿರ ಕೃತ್ಯಗಳಿಗೆ ಆಸ್ಪದ ನೀಡುವುದಿಲ್ಲ. ಅಧಿಕಾರಿಗಳ ಮೇಲೆ ಸಚಿವರು, ಶಾಸಕರು ಒತ್ತಡ ಹೇರಬಾರದು. ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ನಾಮಫಲಕದಲ್ಲಿ ಓರ್ವ ಹಿರಿಯ ಅಧಿಕಾರಿ ನಂಬರ್ ನಮೂದಿಸಬೇಕು. ಸಿಬ್ಬಂದಿ ಯಾರೇ ಲಂಚ ಕೇಳಿದರೂ ಆ ಸಂಖ್ಯೆ ಸಂಪರ್ಕಿಸಬೇಕು. ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡುವಂತಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಶೂನ್ಯಕ್ಕೆ ಇಳಿಸಲು ನಿರ್ಧರಿಸಿದ್ದೇವೆ. ಭ್ರಷ್ಟಾಚಾರ ಮುಕ್ತ ಕರ್ನಾಟಕ ಮತ್ತು ಸರ್ಕಾರ ನಮ್ಮದಾಗಬೇಕು ಎಂಬ ಆಶಯವಿದೆ ಎಂದರು.
ಇದನ್ನೂ ಓದಿ: Bidadi Township Project Row: ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಆರಂಭವಾಗಿದೆ. ರಸಗೊಬ್ಬರ ಕೊರತೆ ಬಗ್ಗೆ ಪ್ರಧಾನಿ ಭೇಟಿ ವೇಳೆ ಪ್ರಸ್ತಾಪಿಸಿದ್ದೇನೆ. ರಾಜ್ಯಕ್ಕೆ ಬೇಡಿಕೆಯಷ್ಟು ರಸಗೊಬ್ಬರ ಪೂರೈಸಲು ಮನವಿ ಮಾಡಿರುವೆ. ರಸಗೊಬ್ಬರದ ಬದಲು ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:40 pm, Sat, 13 June 26