ಜಗದೀಶ್ ಶೆಟ್ಟರ್​ ಬಿಜೆಪಿಗೆ ವಾಪಸ್: ಮೂವರು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ತಡೆ

| Updated By: ರಮೇಶ್ ಬಿ. ಜವಳಗೇರಾ

Updated on: Jan 25, 2024 | 5:20 PM

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್​ ಬಿಟ್ಟು ವಾಪಸ್ ಬಿಜೆಪಿ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಶೆಟ್ಟರ್ ಮುಂದಾಳತ್ವದಲ್ಲಿ ಫಿಕ್ಸ್ ಆಗಿದ್ದ ಆಪರೇಷನ್ ಹಸ್ತಕ್ಕೆ ಬ್ರೇಕ್ ಬಿದ್ದಿದೆ. ಇದರಿಂದ ಕಾಂಗ್ರೆಸ್​ಗೆ ದೊಡ್ಡ ನಷ್ಟವಾಗಿದೆ.

ಜಗದೀಶ್ ಶೆಟ್ಟರ್​ ಬಿಜೆಪಿಗೆ ವಾಪಸ್: ಮೂವರು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ತಡೆ
Follow us on

ಬೆಂಗಳೂರು, (ಜನವರಿ 25): ರಾಜ್ಯ ರಾಜಕೀಯದಲ್ಲಿ ನಡೆದ ಹಠಾತ್‌ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ( Jagadish Shettar) ಮರಳಿ ಬಿಜೆಪಿ ಸೇರಿದ್ದಾರೆ. ಈ ಕ್ಷಿಪ್ರ ಕ್ರಾಂತಿಯಿಂದ ರಾಜ್ಯ ರಾಜಕೀಯದ ಮೇಲೆ ಏನೆಲ್ಲಾ ಪರಿಣಾಮ ಬೀರಬಹುದು ಎಂಬ ಚರ್ಚೆ ಈಗ ಶುರುವಾಗಿದೆ. ಇನ್ನು ಶೆಟ್ಟರ್ ಘರ್ ವಾಪ್ಸಿಯಿಂದಾಗಿ ಮೂವರು ಮಾಜಿ ಶಾಸಕರ ಕಾಂಗ್ರೆಸ್​ ಸೇರ್ಪಡೆಗೆ ಬ್ರೇಕ್ ಬಿದ್ದಿದೆ.

ಜಗದೀಶ್​ ಶೆಟ್ಟರ್ ಕಾಂಗ್ರೆಸ್​​ನಲ್ಲಿದ್ದಾಗ ನಾಲ್ವರ ಸೇರ್ಪಡೆಗೆ ಮುಂದಾಳತ್ವ ವಹಿಸಿದ್ದರು. ನವಲಗುಂದ ಕ್ಷೇತ್ರದ ಮಾಜಿ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ, ಶಿರಹಟ್ಟಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಕುಂದಗೋಳ ಮಾಜಿ ಶಾಸಕ ಚಿಕ್ಕನಗೌಡರ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಶೆಟ್ಟರ್​ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದರು. ನಾಲ್ವರ ಪೈಕಿ ರಾಮಣ್ಣ ಲಮಾಣಿ ಮಾತ್ರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಮತ್ತೆರಡು ವಿಕೆಟ್‌ ಪತನ, ಕೇಸರಿ ಪಡೆಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಜಗದೀಶ್ ಶೆಟ್ಟರ್

ಇನ್ನುಳಿದ ಮೂವರನ್ನ ಕಾಂಗ್ರೆಸ್​​ಗೆ ಸೇರ್ಪಡೆಗೊಳಿಸಲು ಶೆಟ್ಟರ್​ ಅವರೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿಸಿದ್ದರು. ಎಲ್ಲಾ ಮಾತುಕತೆಗಳು ಮುಗಿದಿದ್ದವು. ಇನ್ನೇನು ಕಾಂಗ್ರೆಸ್​ಗೆ ಸೇರ್ಪಡೆಯೊಂದೇ ಬಾಕಿ ಇತ್ತು. ಆದ್ರೆ, ಜಗದೀಶ್ ಶೆಟ್ಟರ್​ ತಾವೇ ಬಿಜೆಪಿಗೆ ವಾಪಸ್ ಆಗುವ ಮಾತುಕತೆಗಳು ಆಗುವ ಸಂಬಂಧ ಆಪರೇಷನ್ ಹಸ್ತವನ್ನು ಅಲ್ಲಿಗೆ ಕೈಬಿಟ್ಟಿದ್ದರು.​ ಇದೀಗ ಶೆಟ್ಟರ್ ವಾಪಸ್ ಬಿಜೆಪಿ ಸೇರ್ಪಡೆಯಾಗಿರುವುದರಿಂದ ಉಳಿದ ಮೂವರು ಮಾಜಿ ಶಾಸಕರ ಕಾಂಗ್ರೆಸ್ ಸೇರ್ಪಡೆಗೆ ತಡೆ ಬಿದ್ದಿದ್ದ. ಇದರಿಂದ ಕಾಂಗ್ರೆಸ್​ ದೊಡ್ಡ ನಷ್ಟವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಟಿಕೆಟ್‌ ನೀಡಿಲ್ಲ ಎಂಬ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು. ಪಕ್ಷ ತಮ್ಮ ಹಿರಿತನವನ್ನು ಗೌರವಿಸಲಿಲ್ಲ ಎಂದು ಅವರು ದೂರಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಲಿಂಗಾಯಿತರ ಅಸಮಾಧಾನಕ್ಕೆ ಕಾರಣವಾಗಿದ್ದ ಬಿಜೆಪಿಯನ್ನು ಜಗದೀಶ್‌ ಶೆಟ್ಟರ್‌ ಕೂಡ ಬಿಟ್ಟಿದ್ದು, ಪಕ್ಷದ ಭಾರಿ ಹಿನ್ನಡೆಗೆ ಕಾರಣವಾಗಿತ್ತು. ಈ ಬೆಳವಣಿಗೆಯನ್ನು ಸಮರ್ಥವಾಗಿಯೇ ಬಳಸಿಕೊಂಡಿದ್ದ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರ ಹಿಡಿದಿತ್ತು. ಬಳಿಕ ಬಿಜೆಪಿಗೆ ತಮ್ಮ ಶಕ್ತಿ ತೋರಿಸಬೇಕೆಂದು ಕೆಲ ಮಾಜಿ ಶಾಸಕರು, ಪ್ರಮುಖ ನಾಯಕರುಗಳಿಗೆ ಕಾಂಗ್ರೆಸ್​ಗೆ ಬರುವಂತೆ ಆಹ್ವಾನ ನೀಡಿದ್ದರು. ಕಾಂಗ್ರೆಸ್​​ ಸಹ ಲಿಂಗಾಯತ ನಾಯಕರನ್ನು ಸೆಳೆಯುವ ಜವಾಬ್ದಾರಿಯನ್ನು ಜಗದೀಶ್ ಶೆಟ್ಟರ್ ನೀಡಿತ್ತು.​ ಬಳಿಕ ಶೆಟ್ಟರ್​ ಕೆಲ ನಾಯಕರ ಜೊತೆ ಮಾತುಕತೆ ಸಹ ನಡೆಸಿದ್ದರು. ಆದ್ರೆ, ಇದೀಗ ಶೆಟ್ಟರ್ ಅವರೇ​ ಬಿಜೆಪಿಗೆ ವಾಪಸ್ ಆಗಿದ್ದರಿಂದ ಕಾಂಗ್ರೆಸ್​ ಸೇರಿಬೇಕೆನ್ನುವ ಚಿಂತನೆಯಲ್ಲಿದ್ದ ಕೆಲ ನಾಯಕರು ಸೈಲೆಂಟ್ ಆಗಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:18 pm, Thu, 25 January 24