ಮೈತ್ರಿ ಅಸಮಾಧಾನ ಸರಿಪಡಿಸಲು ಬಿಜೆಪಿ ಹೈಕಮಾಂಡ್ ಕಸರತ್ತು: ಮೈಸೂರಿನಲ್ಲಿ ಮೋದಿ, ದೇವೇಗೌಡ ಬಹಿರಂಗ ಸಭೆಗೆ ಚಿಂತನೆ

ಕರ್ನಾಟಕದಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿಯಲ್ಲಿ ಉಂಟಾಗಿರುವ ಅಸಮಾಧಾನವನ್ನು ತಣಿಸಲು ಸ್ವತಹ ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಮೈಸೂರಿನಲ್ಲಿ ಪ್ರಧಾನಿ ಮೋದಿ ಹಾಗೂ ದೇವೇಗೌಡರನ್ನು ಒಂದೇ ವೇದಿಕೆಯಲ್ಲಿ ಬರುವಂತೆ ಸಮಾವೇಶ ಆಯೋಜಿಸಲೂ ಚಿಂತನೆ ನಡೆಸಿದೆ. ಹೃದಯ ಶಸ್ತ್ರಚಿಕಿತ್ಸೆ ನಂತರ ಚೇತರಿಸುತ್ತಿರುವ ಕುಮಾರಸ್ವಾಮಿ ವಾಪಸಾದ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ.

ಮೈತ್ರಿ ಅಸಮಾಧಾನ ಸರಿಪಡಿಸಲು ಬಿಜೆಪಿ ಹೈಕಮಾಂಡ್ ಕಸರತ್ತು: ಮೈಸೂರಿನಲ್ಲಿ ಮೋದಿ, ದೇವೇಗೌಡ ಬಹಿರಂಗ ಸಭೆಗೆ ಚಿಂತನೆ
ಮೈತ್ರಿ ಅಸಮಾಧಾನ ಸರಿಪಡಿಸಲು ಬಿಜೆಪಿ ಹೈಕಮಾಂಡ್ ಕಸರತ್ತು
Edited By:

Updated on: Mar 22, 2024 | 3:08 PM

ಬೆಂಗಳೂರು, ಮಾರ್ಚ್​ 22: ಕೊನೆಗೂ ಅಳೆದು ತೂಗಿ ಕಾಂಗ್ರೆಸ್ (Congress) ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್ (JDS) ನಾಯಕರಲ್ಲಿ ಭುಗಿಲೆದ್ದಿರುವ ಮೈತ್ರಿ ಮುನಿಸನ್ನೇ ಅಸ್ತ್ರ ಮಾಡಿಕೊಂಡು ದೋಸ್ತಿಗಳಿಗೆ ಸೋಲಿನ ರುಚಿ ತೋರಿಸಲು ಕಾಂಗ್ರೆಸ್ ಯೋಜನೆ ಹೂಡುತ್ತಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಜೆಪಿ (BJP) ಹೈಕಮಾಂಡ್, ಹೆಚ್​ಡಿ ಕುಮಾರಸ್ವಾಮಿ ಮುನಿಸು ತಣಿಸಲು ಮುಂದಾಗಿದೆ. ಜಂಟಿ ಹೋರಾಟಕ್ಕೆ ಯೋಜನೆ ರೂಪಿಸುತ್ತಿದೆ.

ಆರು ಕ್ಷೇತ್ರ ಕೇಳಿದರೆ ಕೊಟ್ಟಿದ್ದು ಮೂರೇ. ಬರೀ ಎರಡು ಕ್ಷೇತ್ರಕ್ಕೆ ಮೈತ್ರಿ ಮಾಡಿಕೊಳ್ಳಬೇಕಿತ್ತಾ ಎಂದು ದಳಪತಿಗಳು ಸಿಡಿದೆದ್ದಿದ್ದರು. ಟಿಕೆಟ್ ಹಂಚಿಕೆಯಲ್ಲಿ ನಮ್ಮನ್ನ ಕಡೆಗಣಿಸಿದ್ದಾರೆ. ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರಗಲ್ಲಿ ಜೆಡಿಎಸ್ ನಾಯಕರನ್ನೇ ಕೇಳದೇ ಅಭ್ಯರ್ಥಿ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಕೆಲವು ದಿನಗಳ ಹಿಂದೆ ಅಸಮಾಧಾನ ಹೊರಹಾಕಿದ್ದರು. ಈ ಅಸಮಾಧಾನದ ಕಿಚ್ಚು ತಣಿಸಲು ಬಿಜೆಪಿ ಹೈಕಮಾಂಡ್ ಮಧ್ಯ ಪ್ರವೇಶಿಸಿದೆ.

ಸದ್ಯ ಚೆನ್ನೈ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಹೆಚ್‌ಡಿ ಕುಮಾರಸ್ವಾಮಿ, ಚೆನ್ನೈಗೆ ಹೋಗುವ ಮುನ್ನ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಹೆಚ್​​ಡಿ ಕುಮಾರಸ್ವಾಮಿಗೆ ಕರೆ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಾಜ್ಯ ಬಿಜೆಪಿ ಚುನವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಮನವೊಲಿಸುವ ಪ್ರಯತ್ನ ಮಾಡಿದ್ದರು. ಯಾವುದೇ ಅನಗತ್ಯ ಗೊಂದಲಗಳನ್ನು ಮಾಡಿಕೊಳ್ಳಬೇಡಿ. ತಪ್ಪಾಗಿ ಭಾವಿಸಬೇಡಿ. ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡೋಣ ಎಂದು ಭರವಸೆ ನೀಡಿದ್ದಾರೆ.

ದಳಪತಿ ಬೇಸರಕ್ಕೆ ಬಿಜೆಪಿ ಹೈಕಮಾಂಡ್ ಮದ್ದು!

ಮೈತ್ರಿ ಅಸಮಾಧಾನ ಸರಿಪಡಿಸಲು ಬಿಜೆಪಿ ಹೈಕಮಾಂಡ್ ಕಸರತ್ತು ಮಾಡಿದ್ದು, ಹೆಚ್‌ಡಿಕೆ ಆಸ್ಪತ್ರೆಯಿಂದ ಮರಳಿದ ಬಳಿಕ ಜಂಟಿ ಸುದ್ದಿಗೋಷ್ಟಿಗೂ ಯೋಜನೆ ಹಾಕಿಕೊಂಡಿದೆ. ಹಾಸನ, ರಾಮನಗರದಲ್ಲಿ ಮೋದಿ ಬೃಹತ್ ಶೋ ನಡೆಸೋ ಸಾಧ್ಯತೆ ಇದೆ. ಮೈಸೂರಿನಲ್ಲಿ ಮೋದಿ ಮತ್ತು ದೇವೇಗೌಡರನ್ನು ಒಂದೇ ವೇದಿಕೆಗೆ ಕರೆತಂದು ಬಹಿರಂಗ ಸಮಾವೇಶಕ್ಕೂ ಚಿಂತನೆ ಮಾಡಲಾಗಿದೆ. ಇದಲ್ಲದೇ ಖುದ್ದು ಅಮಿತ್ ಶಾ ಅವರೇ ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಈ ಮೂಲಕ ಕುಮಾರಸ್ವಾಮಿಯವನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.

ಸಿಎನ್ ಮಂಜುನಾಥ್ ಪರ ದೇವೇಗೌಡರ ಪ್ರಚಾರ

ಇತ್ತ 92ರ ಇಳಿ ವಯಸ್ಸಿನಲ್ಲೂ ಅಖಾಡಕ್ಕಿಳಿದಿರುವ ದೇವೇಗೌಡರು, ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಸಭೆ ಸಭೆ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್​ ಪರ ಪ್ರಚಾರ ಮಾಡಿದ್ದಾರೆ. ಹೀಗೆ ಜಂಟಿ ಹೋರಾಟಕ್ಕೆ ಬಿಜೆಪಿ ಜೆಡಿಎಸ್ ಮುಂದಾಗಿದ್ದು, ಕೋಲಾರ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಬಹುತೇಕ ಅಂತಿಮವಾಗಿದೆ. ಮಲ್ಲೇಶ್ ಬಾಬು ಬದಲು ಸಮೃದ್ಧಿ ಮಂಜುನಾಥ್ ಹೆಸರು ಘೋಷಣೆಯಾಗಲಿದೆ ಅಂತಾ ಹೇಳಲಾಗುತ್ತಿದೆ. ಕಾಂಗ್ರೆಸ್​ನಿಂದ ಎಡಗೈ ಸಮುದಾಯದ ಅಭ್ಯರ್ಥಿಯಾದರೆ, ಬಲಗೈ ಸಮುದಾಯದ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಕಣಕ್ಕಿಳಿಸೋ ಪ್ಲ್ಯಾನ್‌ನಲ್ಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜೆಡಿಎಸ್ ಮೈತ್ರಿ ಅಪಸ್ವರ: ಕುಮಾರಸ್ವಾಮಿ ಮುನಿಸು ಶಮನಕ್ಕೆ ನಡ್ಡಾ, ಅಮಿತ್ ಶಾ ಅಖಾಡಕ್ಕೆ

ಕೋಲಾರ ಜೆಡಿಎಸ್ ಪಾಲಾದ್ರೆ, ಬಿಜೆಪಿಯಲ್ಲಿ ಬಂಡಾಯ?

ಜೆಡಿಎಸ್ ನಾಯಕರ ಮುನಿಸು ತಣಿಸೋ ಬಿಜೆಪಿಗೆ ಸ್ವಪಕ್ಷದ ಬಂಡಾಯ ನಿಭಾಯಿಸುವುದು ಕೂಡ ಅಷ್ಟೇ ಸಾವಲು ಆಗಿ ಪರಿಣಮಿಸಿದೆ. ಕೋಲಾರ ಜೆಡಿಎಸ್ ಪಾಲಾದರೆ, ಬಿಜೆಪಿ ಸಂಸದ ಮುನಿಸ್ವಾಮಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಪಕ್ಷೇತರವಾಗಿ ನಿಲ್ಲುವಂತೆ ಸಂಸದ ಮುನಿಸ್ವಾಮಿಗೆ ಬೆಂಬಲಿಗರು ಒತ್ತಾಯ ಮಾಡುತ್ತಿದ್ದು, ಮುನಿಸ್ವಾಮಿ ನಿರ್ಧಾರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೃದಯಶಸ್ತ್ರಚಿಕಿತ್ಸೆ ಯಶಸ್ವಿ, ಚೆನ್ನೈನತ್ತ ಜೆಡಿಎಸ್ ನಾಯಕರು

ಬೆಳಗಾವಿ ಬಿಜೆಪಿ ಟಿಕೆಟ್ ಘೋಷಣೆಗೂ ಮುನ್ನವೇ ರಣತಂತ್ರ

ಬೆಳಗಾವಿಯಲ್ಲಿ ಬಿಜೆಪಿ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ. ಕಾಂಗ್ರೆಸ್‌ನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನನ್ನ ಕಣಕ್ಕಿಳಿಸಿದೆ. ಹೀಗಾಗಿ ಬದ್ಧವೈರಿಯನ್ನ ಸೋಲಿಸಲು ಜಾರಕಿಹೊಳಿ ಬ್ರದರ್ಸ್ ರಣತಂತ್ರ ರೂಪಿಸಿದ್ದು, ಅರಭಾವಿ, ಗೋಕಾಕ್‌ನಲ್ಲಿ ಸಭೆ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಿ ಅಂತಾ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us