ಪ್ರವಾಹ ಬಂದಾಗ ಕರ್ನಾಟಕದತ್ತ ತಿರುಗಿಯೂ ನೋಡದ ಮೋದಿ ಈಗ ರಾಜ್ಯದ ಪ್ರವಾಸಿ; ಕಾಂಗ್ರೆಸ್ ವ್ಯಂಗ್ಯ

‘ಮೋದಿ ಸರ್ವಶಕ್ತ, ಸರ್ವಾಂತರ್ಯಾಮಿ ಎನ್ನುವ ಬಿಜೆಪಿ ಸರ್ವಶಕ್ತ ಮೋದಿಗೆ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲವೇಕೆ ಎಂದರೆ ಪಾಕಿಸ್ತಾನದ ಕಡೆ ಕೈ ತೋರಿಸುತ್ತಾರೆ! ಗ್ಯಾಸ್ ಬೆಲೆಯನ್ನು ₹1000 ದಾಟಿಸಿ, ಪೆಟ್ರೋಲ್ ಬೆಲೆಯನ್ನು ₹100 ದಾಟಿಸಿ, ಜನರ ಬದುಕಿನ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಮೋದಿಗೆ ಧನ್ಯವಾದಗಳು!’ ಎಂದು ಟ್ವೀಟ್​​ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.

ಪ್ರವಾಹ ಬಂದಾಗ ಕರ್ನಾಟಕದತ್ತ ತಿರುಗಿಯೂ ನೋಡದ ಮೋದಿ ಈಗ ರಾಜ್ಯದ ಪ್ರವಾಸಿ; ಕಾಂಗ್ರೆಸ್ ವ್ಯಂಗ್ಯ
ಕಾಂಗ್ರೆಸ್ ಧ್ವಜ (ಸಾಂದರ್ಭಿಕ ಚಿತ್ರ)

Updated on: Feb 27, 2023 | 2:41 PM

ಬೆಂಗಳೂರು: ‘ಕರ್ನಾಟಕವು (Karnataka) ಪ್ರತಿ ವರ್ಷ ನಿರಂತರ ಪ್ರವಾಹ ಎದುರಿಸಿದಾಗ, ಜನರ ಬದುಕು ಮುಳುಗಿದಾಗ, ಅಪಾರ ಆಸ್ತಿಪಾಸ್ತಿ ಹಾನಿಯಾದಾಗ ಕರ್ನಾಟಕದತ್ತ ತಿರುಗಿಯೂ ನೋಡದ, ಕರ್ನಾಟಕಕ್ಕೆ ನಯಾಪೈಸೆ ನೆರವು ನೀಡದ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಈಗ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಟೂರಿಸ್ಟ್ ಆಗಿದ್ದಾರೆ. ಈ ದ್ರೋಹಕ್ಕೆ ಧನ್ಯವಾದಗಳು! ಥ್ಯಾಂಕ್ಯೂ ಮೋದಿ (#ThankYouModi) ಎಂಬ ಹ್ಯಾಷ್​​ಟ್ಯಾಗ್ ಅಡಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ಮೋದಿಯವರು ಶಿವಮೊಗ್ಗ ಹಾಗೂ ಬೆಳಗಾವಿಗೆ ಬೇಟಿ ನೀಡಿದ ಸಂದರ್ಭದಲ್ಲೇ ಅವರನ್ನು ಕುರಿತು ಕಾಂಗ್ರೆಸ್ ವ್ಯಂಗ್ಯವಾಡಿದೆ. 40% ಕಮಿಷನ್ ದೂರುಗಳಿಗೆ ಪ್ರಧಾನಿಯಿಂದ ಕನಿಷ್ಠ ಸ್ಪಂದನೆಯೂ ಇಲ್ಲ, ಕ್ರಮವೂ ಇಲ್ಲ. ಹಿಂದೆ ಪ್ರಧಾನಿ ಭೇಟಿಗಾಗಿ ಹಾಕಿದ್ದ ರಸ್ತೆ ಕಿತ್ತು ಬಂದಿದ್ದಕ್ಕೆ ವರದಿ ಕೇಳಿದ್ದರು, ಆ ಲೂಟಿಯ ಬಗ್ಗೆ ತನಿಖೆಯೇ ಇಲ್ಲ. ಸಂತೋಷ್ ಪಾಟೀಲ್ ಪತ್ರಕ್ಕೆ ಪ್ರಧಾನಿಯ ಉತ್ತರವಿಲ್ಲ. ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ1 ಮಾಡಿದ್ದಕ್ಕೆ ಮೋದಿ ಅವರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

‘ಮೋದಿ ಸರ್ವಶಕ್ತ, ಸರ್ವಾಂತರ್ಯಾಮಿ ಎನ್ನುವ ಬಿಜೆಪಿ ಸರ್ವಶಕ್ತ ಮೋದಿಗೆ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲವೇಕೆ ಎಂದರೆ ಪಾಕಿಸ್ತಾನದ ಕಡೆ ಕೈ ತೋರಿಸುತ್ತಾರೆ! ಗ್ಯಾಸ್ ಬೆಲೆಯನ್ನು ₹1000 ದಾಟಿಸಿ, ಪೆಟ್ರೋಲ್ ಬೆಲೆಯನ್ನು ₹100 ದಾಟಿಸಿ, ಜನರ ಬದುಕಿನ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಮೋದಿಗೆ ಧನ್ಯವಾದಗಳು!’ ಎಂದು ಮತ್ತೊಂದು ಟ್ವೀಟ್​​ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.

ಕರ್ನಾಟಕದಲ್ಲಿ ಭ್ರಷ್ಟಾಚಾರವು ಡಬಲ್ ವೇಗದಲ್ಲಿ ಮುನ್ನುಗ್ಗುತ್ತಿದೆ. ಮೋದಿ ಅವರೇ, ಭ್ರಷ್ಟಾಚಾರಕ್ಕೆ ಯಾವುದೇ ತಡೆಯಿಲ್ಲದೆ, ಯಾವುದೇ ಅಂಜಿಕೆ, ಅಳುಕಿಲ್ಲದೆ 40% ಕಮಿಷನ್ ಸರ್ಕಾರ ನಡೆಸಿದ್ದಕ್ಕೆ ತಮಗೆ ಧನ್ಯವಾದಗಳು. “ಮೋದಿ ಹೈ ತೊ ಮುಮ್ಕಿನ್ ಹೈ” ಎನ್ನುವಂತೆ ಇದು ಸಾಧ್ಯವಾಗಿದ್ದು ನಿಮ್ಮಿಂದಲೇ ಅಲ್ಲವೇ! ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ಪಿಎಸ್‌ಐನಿಂದ ಹಿಡಿದು ಪೌರ ಕಾರ್ಮಿಕರ ನೇಮಕಾತಿಯವರೆಗೂ ಪ್ರತಿ ಹುದ್ದೆಗಳನ್ನೂ ರೇಟ್ ಕಾರ್ಡ್ ಹಾಕಿ ಮಾರಾಟ ಮಾಡುತ್ತಿರುವ ಬಿಜೆಪಿ ಸರ್ಕಾರದ ಸಾಧನೆ ಅಮೋಘವಾದುದು! ಅರ್ಹತೆಯ ಆಧಾರದಲ್ಲಿ ಸಿಗುತ್ತಿದ್ದ ಉದ್ಯೋಗಗಳನ್ನು ಸುಲಭವಾಗಿ ಹಣ ಕೊಟ್ಟು ಕೊಳ್ಳುವಂತ ವ್ಯವಸ್ಥೆ ನಿರ್ಮಾಣವಾಗಿದ್ದರಲ್ಲಿ ಮೋದಿಯವರ ಪಾತ್ರ ದೊಡ್ಡದಿದೆ! ಉಡುವ ಬಟ್ಟೆಯಿಂದ ತಿನ್ನುವ ಅನ್ನದವರೆಗೂ ಜಿಎಸ್​ಟಿ ತೆರಿಗೆ ಹಾಕಿ ಜನಸಾಮಾನ್ಯರ ಬದುಕನ್ನು ದುರ್ಭರಗೊಳಿಸಿದ ಮೋದಿ ಅವರಿಗೆ ಅನಂತಾನಂತ ಧನ್ಯವಾದಗಳು! ಇಂತಹ ಕಠೋರ, ಅಮಾನವೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೋದಿಯಿಂದ ಮಾತ್ರ ಸಾಧ್ಯ. ದರೋಡೆಗೆ ಜಿಎಸ್​​ಟಿ ಎಂದು ಹೆಸರಿಟ್ಟು ಕಾನೂನುಬದ್ಧಗೊಳಿಸಿದ್ದಕ್ಕೆ ಮೋದಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಉಲ್ಲೇಖಿಸಿದೆ.

ಇದನ್ನೂ ಓದಿ: PM Modi in Shivamogga: ಶಿವಮೊಗ್ಗದ ಸಂಸದ, ಶಾಸಕರಿಂದ ಪ್ರಧಾನಿಗಳಿಗೆ ಸನ್ಮಾನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಕಪ್ರೇಕ್ಷಕ!

ಬೆಂಗಳೂರು ಗಾರ್ಡನ್ ಸಿಟಿ, ಐಟಿ ಸಿಟಿ ಎಂಬ ಖ್ಯಾತಿ ಗಳಿಸಿತ್ತು. ಆದರೆ ಈಗ ರಸ್ತೆಗುಂಡಿಗಳಿಗೆ ದಿನಕ್ಕೊಂದು ಜೀವ ಬಲಿಯಾಗುತ್ತಿವೆ, ಇಂದು ಹಾಕಿದ ಡಾಂಬಾರು ನಾಳೆ ಕೀಳುತ್ತದೆ. ವಿಲೇವಾರಿಯಾಗದ ಕಸದಿಂದ ಬೆಂಗಳೂರು ಗೊಬ್ಬರದ ಗುಂಡಿಯಾಗಿದೆ. ಬೆಂಗಳೂರಿಗೆ ಇಂತಹ ಅಪಖ್ಯಾತಿ ಅಂಟಿಸಿದ ಕೀರ್ತಿ ಮೋದಿಯವರಿಗೆ ಸಲ್ಲಬೇಕು. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಪ್ರಮುಖವಾದುದು. ಕರ್ನಾಟಕದಿಂದ ಕಿತ್ತು, ಉತ್ತರದ ರಾಜ್ಯಗಳಿಗೆ ಹಂಚುತ್ತಾ, ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆ ಪಾಲು ನೀಡದೆ ಅನ್ಯಾಯವೆಸಗಿದ ಮೋದಿ ಅವರೇ, ನೀವು ಎಸಗಿದ ದ್ರೋಹಕ್ಕೆ ಅನಂತಾನಂತ ಧನ್ಯವಾದಗಳು! ಎಂದು ಕಾಂಗ್ರೆಸ್ ಕುಹಕವಾಡಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us