ಬಿಜೆಪಿಗಿಂತ ಜೆಡಿಎಸ್ ನಾಯಕರಿಗೇ ಹೆಚ್ಚು ಆದ್ಯತೆ ನೀಡಿದರೇ ಪ್ರಧಾನಿ ಮೋದಿ? ಅನುಮಾನ ಹೆಚ್ಚಿಸಿದ ಮೈಸೂರಿನ ವೇದಿಕೆ!

| Updated By: ಗಣಪತಿ ಶರ್ಮ

Updated on: Apr 15, 2024 | 9:12 AM

ಲೋಕಸಭೆ ಚುನಾವಣೆಗೆ ಮೈಸೂರಿನಲ್ಲಿ ಭರ್ಜರಿ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಯನ್ನು ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಿದರು. ಆದರೆ, ವೇದಿಕೆ ಕಾರ್ಯಕ್ರಮದ ಉದ್ದಕ್ಕೂ ಬಿಜೆಪಿ ನಾಯಕರನ್ನು ಬಿಟ್ಟು ಜೆಡಿಎಸ್​ಗೇ ಹೆಚ್ಚು ಮಹತ್ವ ನೀಡಿದರೇ? ಹೀಗೊಂದು ಅನುಮಾನ ಈಗ ವ್ಯಕ್ತವಾಗಿದೆ. ಅದಕ್ಕೆ ಕಾರಣಗಳೂ ಇವೆ. ಅದೇನೆಂಬುದು ಇಲ್ಲಿದೆ.

ಬಿಜೆಪಿಗಿಂತ ಜೆಡಿಎಸ್ ನಾಯಕರಿಗೇ ಹೆಚ್ಚು ಆದ್ಯತೆ ನೀಡಿದರೇ ಪ್ರಧಾನಿ ಮೋದಿ? ಅನುಮಾನ ಹೆಚ್ಚಿಸಿದ ಮೈಸೂರಿನ ವೇದಿಕೆ!
ಮೈಸೂರಿನ ಚುನಾವಣಾ ಪ್ರಚಾರ ಸಮಾವೇಶ ವೇದಿಕೆಯಲ್ಲಿ ಪ್ರಧಾನಿ ಮೋದಿ ಹಾಗೂ ದೇವೇಗೌಡರು
Follow us on

ಮೈಸೂರು, ಏಪ್ರಿಲ್ 15: ಲೋಕಸಭೆ ಚುನಾವಣೆ (Lok sabha elections) ಪ್ರಯುಕ್ತ ಮೈಸೂರಿಗೆ (Mysuru) ಆಗಮಿಸಿ ಪ್ರಧಾನಿ ನರೇಂದ್ರ ಮೋದಿ (Narednra Modi) ಭಾನುವಾರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಇದೇ ವೇಳೆ, ಬಿಜೆಪಿ ಜೆಡಿಎಸ್ (BJP JDS Alliance) ನಾಯಕರ ಒಗ್ಗಟ್ಟು ಪ್ರದರ್ಶನಕ್ಕೂ ಮೈಸೂರಿನ ಸಮಾವೇಶದ ವೇದಿಕೆ ಸಾಕ್ಷಿಯಾಯಿತು. ಆದಾಗ್ಯೂ, ವೇದಿಕೆ ಕಾರ್ಯಕ್ರಮದಲ್ಲಿ ಮೋದಿಯವರು ಬಿಜೆಪಿ ನಾಯಕರಿಗೆ ಅಷ್ಟಕ್ಕಷ್ಟೇ ಮಹತ್ವ ನೀಡಿದರೇ? ಇಂಥದ್ದೊಂದು ಅನುಮಾನ ಇದೀಗ ವ್ಯಕ್ತವಾಗಿದೆ. ಇದಕ್ಕೆ ಕಾರಣ, ಜೆಡಿಎಸ್​ ನಾಯಕರ ಜತೆಗೇ ಪ್ರಧಾನಿ ಹೆಚ್ಚು ಸಮಾಲೋಚನೆಯಲ್ಲಿ ನಿರತರಾಗಿದ್ದುದು. ಬಿಜೆಪಿ ನಾಯಕರಾದ ಸಂಸದ ಪ್ರತಾಪ್ ಸಿಂಹ, ರಾಮದಾಸ್, ಅಭ್ಯರ್ಥಿ ಯದುವೀರ್ ಜತೆ ಮೋದಿ ಉಭಯ ಕುಶಲೋಪರಿ ಮಾತನಾಡಿದರೂ ಹೆಚ್ಚು ಸಮಾಲೋಚನೆ ನಡೆಸಿದ್ದು ಜೆಡಿಎಸ್ ವರಿಷ್ಠ ಹೆಚ್​​ಡಿ ದೇವೇಗೌಡರು ಮತ್ತು ಹೆಚ್​ಡಿ ಕುಮಾರಸ್ವಾಮಿ ಜತೆ.

ವಿಧಾನಸಭೆ ಚುನಾವಣೆ ಸೋಲಿಗೆ ಸಂಬಂಧಿಸಿದ ಬೇಸರ ಹಾಗೂ ರಾಜ್ಯ ಬಿಜೆಪಿ ರಾಜ್ಯ ನಾಯಕರ ಮೇಲಿನ ಕೋಪ ಇನ್ನೂ ಕಡಿಮೆಯಾಗಿಲ್ಲವೇ? ಇದೇ ಕಾರಣಕ್ಕೆ ಮೋದಿ ಈ ರೀತಿ ವರ್ತಿಸಿದರೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದೆ. ಇಷ್ಟೇ ಅಲ್ಲದೆ, ಭಾಷಣದಲ್ಲಿಯೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಿಟ್ಟರೆ ಮೋದಿ ಪ್ರಸ್ತಾಪಿಸಿದ್ದೆಲ್ಲ ದೇವೇಗೌಡ, ಕುಮಾರಸ್ವಾಮಿ ಬಗ್ಗೆ!

ಕುಮಾರಸ್ವಾಮಿ ಜತೆ ಸುದೀರ್ಘ ಚರ್ಚೆ

ಮೈಸೂರಿನ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶ ವೇದಿಕೆಯಲ್ಲಿ ಇತರ ನಾಯಕರು ಮಾತನಾಡುತ್ತಿರುವಾಗ ಪ್ರಧಾನಿ ಮೋದಿ ಜೆಡಿಎಸ್ ನಾಯಕರ ಜತೆಗೇ ಹೆಚ್ಚು ಸಮಾಲೋಚನೆಯಲ್ಲಿ ನಿರತರಾಗಿದ್ದರು. ಹೆಚ್​​ಡಿ ಕುಮಾರಸ್ವಾಮಿ ಜೊತೆ ಮೋದಿ ಸುದೀರ್ಘ ಚರ್ಚೆ ನಡೆಸುತ್ತಿರುವುದು ಕಂಡುಬಂತು. ಕುಮಾರಸ್ವಾಮಿ ಜತೆ ಚರ್ಚೆ ನಡೆಸಿದ ಮೋದಿ, ರಾಜ್ಯದ ರಾಜಕಾರಣ, ಚುನಾವಣಾ ವಿಚಾರದ ಮಾಹಿತಿ ಪಡೆದುಕೊಂಡರು ಎನ್ನಲಾಗಿದೆ. ನಂತರ ಹೆಚ್​​ಡಿ ರೇವಣ್ಣರನ್ನು ಸಹ ಹತ್ತಿರ ಕರೆದ ಮೋದಿ, ತುಸು ಹೊತ್ತು ಸಮಾಲೋಚನೆ ನಡೆಸಿದರು.

ದೇವೇಗೌಡರ ಮೇಲೆ ಅಪಾರ ಪ್ರೀತಿ

ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡರ ಮೇಲೂ ಮೋದಿ ಅಪಾರ ಪ್ರೀತಿ ತೋರಿದರು. ಮೋದಿ ವೇದಿಕೆಗೆ ಬಂದಾಗ ದೇವೇಗೌಡರು ಎದ್ದು ನಿಂತುಕೊಳ್ಳಲು ಪ್ರಯತ್ನಿಸಿದರು. ಆದರೆ, ಅವರ ಬಳಿ ತೆರಳಿ ಮೇಲೆ ಏಳುವುದು ಬೇಡ ಎಂದು ಕೂಹಿಡಿದು ಕುಳಿತುಕೊಳ್ಳಿಸಿದರು. ನಂತರ, ಭಾಷಣದಲ್ಲೂ ದೇವೇಗೌಡ, ಕುಮಾರಸ್ವಾಮಿ ಹೆಸರು ಉಲ್ಲೇಖ ಮಾಡಿದರು. ದೇವೇಗೌಡರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ, ಕುಮಾರಸ್ವಾಮಿ ಸಹಕಾರ ಇದೆ ಎಂದರು.

ಇದನ್ನೂ ಓದಿ: ಕರ್ನಾಟಕದಲ್ಲಿ ನಮೋ ರಣಕಹಳೆ: ಮೈಸೂರಿನಲ್ಲಿ ಮೋದಿ ಮಾತು ನೇರಪ್ರಸಾರ

ಮತ್ತೊಂದೆಡೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೆಸರು ಬಿಟ್ಟರೆ ಬೇರೆ ಯಾವ ಬಿಜೆಪಿ ನಾಯಕರ ಹೆಸರನ್ನೂ ಮೋದಿ ಭಾಷಣದಲ್ಲಿ ಉಲ್ಲೇಖಿಸಲೇ ಇಲ್ಲ. ವೇದಿಕೆಯಲ್ಲಿಯೂ ಅಷ್ಟೆ, ಯಡಿಯೂರಪ್ಪ ಜತೆ ತುಸು ಹೊತ್ತು ಸಮಾಲೋಚನೆ ನಡೆಸಿದ್ದು ಬಿಟ್ಟರೆ, ಇತರ ಯಾವ ಬಿಜೆಪಿ ನಾಯಕರ ಬಳಿಯೂ ಮೋದಿ ಹೆಚ್ಚು ಮಾತನಾಡಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ