ಧಾರವಾಡವೂ ಇಲ್ಲ, ಹಾವೇರಿಗೂ‌ ಸಲ್ಲ: ಜಗದೀಶ್ ಶೆಟ್ಟರ್ ಮುಂದಿನ ನಡೆ ಏನು?

| Updated By: ಗಣಪತಿ ಶರ್ಮ

Updated on: Mar 14, 2024 | 10:31 AM

ಲೋಕಸಭೆ ಚುನಾವಣೆಗೆ ಟಿಕೆಟ್ ದೊರೆಯುವ ನಿರೀಕ್ಷೆಯೊಂದಿಗೆ ಬಿಜೆಪಿಗೆ ಘರ್ ವಾಪ್ಸಿಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಮತ್ತೆ ಹಿನ್ನಡೆಯಾಗಿದೆ. ಹಾವೇರಿ ಹಾಗೂ ಧಾರವಾಡ ಎರಡೂ ಕ್ಷೇತ್ರಗಳಲ್ಲಿ ಅವರಿಗೆ ಟಿಕೆಟ್ ದೊರೆತಿಲ್ಲ. ಇದರಿಂದ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ವ್ಯಕ್ತವಾಗಿದೆ. ಸದ್ಯ, ರಾಯಚೂರು ಪ್ರವಾಸ ಮೊಟಕುಗೊಳಿಸಿ ವಾಪಸಾಗಿರುವ ಶೆಟ್ಟರ್ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ.

ಧಾರವಾಡವೂ ಇಲ್ಲ, ಹಾವೇರಿಗೂ‌ ಸಲ್ಲ: ಜಗದೀಶ್ ಶೆಟ್ಟರ್ ಮುಂದಿನ ನಡೆ ಏನು?
ಜಗದೀಶ್ ಶೆಟ್ಟರ್
Follow us on

ಹುಬ್ಬಳ್ಳಿ, ಮಾರ್ಚ್​ 14: ಲೋಕಸಭೆ ಚುನಾವಣೆಗೆ (Lok Sabha Elections) ಬಿಜೆಪಿ (BJP) ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು ಕರ್ನಾಟಕದ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿದೆ. ಧಾರವಾಡದಲ್ಲಿ ಹಾಲಿ ಸಂಸದ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಮತ್ತೆ ಮಣೆ ಹಾಕಲಾಗಿದೆ. ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಘೋಷಿಸಿದೆ. ಇದರೊಂದಿಗೆ, ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ (Jagadish Shettar) ಮತ್ತೆ ಹಿನ್ನಡೆಯಾದಂತಾಗಿದೆ.

ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಮೇಲೆ ಶೆಟ್ಟರ್ ಕಣ್ಣಿಟ್ಟಿದ್ದರು. ಒಂದು ವೇಳೆ ಧಾರವಾಡದಿಂದ ಸಿಗದಿದ್ದರೆ ಹಾವೆರಿ ಕ್ಷೇತ್ರ ಟಿಕೆಟ್ ನೀಡುವಂತೆ ಮನವಿಯನ್ನೂ ಮಾಡಿದ್ದರು. ಈಗ ಇತ್ತ ಧಾರವಾಡವೂ ಇಲ್ಲ, ಅತ್ತ ಹಾವೇರಿಯೂ‌ ಇಲ್ಲ ಎಂಬಂತಾಗಿದೆ ಅವರ ಪರಿಸ್ಥಿತಿ. ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡುತ್ತೇವೆ ಎಂಬ ಬಿಜೆಪಿ ನಾಯಕರ ಭರವಸೆ ಮೇರೆಗೆ ಶೆಟ್ಟರ್ ಘರ್ ವಾಪ್ಸಿ ಆಗಿದ್ದರು. ಪಟ್ಟಿ ಬಿಡುಗಡೆಯಾಗುವ ಕೊನೆಯ ಕ್ಷಣದ ವರೆಗೂ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದರು.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ರಾಯಚೂರು ಪ್ರವಾಸದಲ್ಲಿದ್ದ ಶೆಟ್ಟರ್, ಅರ್ಧಕ್ಕೆ ಪ್ರವಾಸ ಮೊಟಕುಗೊಳಿಸಿ ವಾಪಸ್ ಆಗಿದ್ದಾರೆ. ಇಂದು ಬೆಂಗಳೂರಿಗೆ ಪ್ರಯಾಣ ಬೆಳಸುವ ಸಾಧ್ಯತೆ ಇದೆ. ಮಾಜಿ ಸಿಎಂ ಯಡಿಯೂರಪ್ಪ ಕೂಡಾ ಶೆಟ್ಟರ್ ಪರ ಲಾಬಿ ಮಾಡಿದ್ದರು. ಹೀಗಾಗಿ ಹಿರಿಯ ನಾಯಕರನ್ನು ಶೆಟ್ಟರ್ ಭೇಟಿ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ:​​ ಬಿಜೆಪಿ ಎರಡನೇ ಪಟ್ಟಿ: ವಿರೋಧಿಗಳಿಗೆ ಟಿಕೆಟ್ ತಪ್ಪಿಸುವಲ್ಲಿ ಬಿಎಸ್ ಯಡಿಯೂರಪ್ಪ ಮೇಲುಗೈ, ಸಂತೋಷ್ ಬಣಕ್ಕೆ ಅಲ್ಪ ಯಶಸ್ಸು

ಕಳೆದ ವರ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ದೊರೆಯದ ಕಾರಣ ಅಸಮಾಧಾನಗೊಂಡಿದ್ದ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ನಂತರ ಕಾಂಗ್ರೆಸ್ ಟಿಕೆಟ್​ನಿಂದ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಮಹೇಶ್ ಟೆಂಗಿನಾಯಿ ವಿರುದ್ಧ ಸೋಲನುಭವಿಸಿದ್ದರು. ನಂತರ ಅವರನ್ನು ಕಾಂಗ್ರೆಸ್ ಪಕ್ಷವು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಈ ಎಲ್ಲ ಬೆಳವಣಿಗೆಗಳ ನಂತರ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಶೆಟ್ಟರ್ ಮತ್ತೆ ಬಿಜೆಪಿಯತ್ತ ವಾಲಿದ್ದರು. ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಅವರು ಈ ನಿರ್ಧಾರಕ್ಕೆ ಬಂದಿದ್ದರು. ಆದರೆ, ಶೆಟ್ಟರ್ ಘರ್ ವಾಪ್ಸಿಗೆ ಮಹೇಶ್​ ಟೆಂಗಿನಕಾಯಿ, ಪ್ರಲ್ಹಾದ್ ಜೋಶಿ ವಿರೋಧವಿದೆ ಎನ್ನಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ