ನಿಗಮ ಮಂಡಳಿ ನೇಮಕಾತಿ: ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಪತ್ಯೇಕ ಪಟ್ಟಿ ಸಿದ್ಧ, ಇಲ್ಲಿದೆ ಇಬ್ಬರ ಲೆಕ್ಕಾಚಾರ

Congress Boards and corporations: ಕಾಂಗ್ರೆಸ್ ಪಾಳಯದಲ್ಲಿ ಕಾರ್ಯಕರ್ತರು, ಶಾಸಕರು, ಮುಖಂಡರ ಆಸೆಗೆ ಮತ್ತೆ ಜೀವ ಬಂದಿದೆ. ನಿಗಮ ಮಂಡಳಿಗಳ ಅಧ್ಯಕ್ಷ ನೇಮಕಕ್ಕೆ ಕಾಲ ಕೂಡಿಬಂದಿದೆ. ಈ ಬಗ್ಗೆ ಫೈನಲ್ ಮಾಡಲು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆದ್ರೆ, ನಿಗಮ ಮಂಡಳಿ ನೇಮಕಾತಿಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ನಡುವೆ ಪೈಪೋಟಿ ಶುರುವಾಗಿದ್ದು, ಇಬ್ಬರ ಬಳಿ ಬೇರೆ-ಬೇರೆ ಪಟ್ಟಿ ಸಿದ್ಧವಾಗಿವೆ. ಹಾಗಾದ್ರೆ, ಸಿದ್ದರಾಮಯ್ಯ ಲೆಕ್ಕಾಚಾರವೇನು? ಡಿಕೆ ಶಿವಕುಮಾರ್​ ಲೆಕ್ಕವೇನು ಎನ್ನುವ ಡಿಟೇಲ್ಸ್ ಇಲ್ಲಿದೆ.

ನಿಗಮ ಮಂಡಳಿ ನೇಮಕಾತಿ: ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಪತ್ಯೇಕ ಪಟ್ಟಿ ಸಿದ್ಧ, ಇಲ್ಲಿದೆ ಇಬ್ಬರ ಲೆಕ್ಕಾಚಾರ
ಸಿದ್ದರಾಮಯ್ಯ ಡಿಕೆ ಶಿವಕುಮಾರ್
Edited By:

Updated on: Nov 21, 2023 | 7:56 AM

ಬೆಂಗಳೂರು, (ನವೆಂಬರ್ 21): ರಾಜ್ಯ ಕಾಂಗ್ರೆಸ್ (Karnataka Congress) ಮನೆಯಲ್ಲಿ ಸಿಎಂ ಕುರ್ಚಿ ಕದನ ಇನ್ನು ತಣ್ಣಗಾಗಿಲ್ಲ ,ಸಿಎಂ ಕುರ್ಚಿಯ ಕದನದ ನಡುವೆಯೇ ನಿಗಮ ಮಂಡಳಿ ವಿಚಾರಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಆರಂಭಗೊಂಡಿದೆ.. ಹೌದು ಕಾಂಗ್ರೆಸ್ ಪಾಳಯದಲ್ಲಿ ಕಾರ್ಯಕರ್ತರು, ಶಾಸಕರು, ಮುಖಂಡರ ಆಸೆಗೆ ಮತ್ತೆ ಜೀವ ಬಂದಿದೆ. ಕಳೆದ 10-12 ದಿನಗಳ ಹಿಂದೆ ಸುರ್ಜೇವಾಲ ಹಾಗೂ ವೇಣುಗೋಪಾಲ್ ರಾತ್ರೋರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು. ಸಿಎಂ ಸಿದ್ರಾಮಯ್ಯ, ಡಿಸಿಎಂ ಡಿಕೆಶಿ ಜೊತೆ ಪ್ರತ್ಯೇಕ ಸಭೆ ನಡೆಸಿದ್ದರು. ಆ ಸಭೆಯಲ್ಲಿ ಕಾರ್ಯಕರ್ತರಿಗೆ ಹಾಗೂ ಶಾಸಕರಿಗೆ ನಿಗಮ ಮಂಡಳಿ (Boards and corporations)ಹಂಚಿಕೆ ವಿಚಾರ ಕೂಡಾ ಮಹತ್ವದ ಚರ್ಚೆಯಾಗಿತ್ತು. ಇದೀಗ ಮತ್ತೆ ರಾಜ್ಯದ ಕಡೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಮುಖ ಮಾಡಿದ್ದಾರೆ.

ಇಂದು (ನವೆಂಬರ್ 21) ಬೆಳಗ್ಗೆ 11 ಗಂಟೆಗೆ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಾಳೆ(ನವೆಂಬರ್ 22) ಸಂಜೆವರೆಗೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಸುರ್ಜೇವಾಲ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ನಿಗಮ ಮಂಡಳಿ ಹಂಚಿಕೆ ವಿಚಾರವಾಗಿ ಚರ್ಚೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆ: ಏರ್‌ಪೋರ್ಟ್‌ನಲ್ಲಿ ಆಪ್ತ ಸಚಿವರ ಜೊತೆ ಸಿದ್ದರಾಮಯ್ಯ ರಹಸ್ಯ ಸಭೆ

ನಿಗಮ ಮಡಳಿ ನೇಮಕ ವಿಚಾರವಾಗಿ ಸಿಎಂ ಹಾಗೂ ಡಿಸಿಂ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಇಬ್ಬರೂ ಭಿನ್ನ ಅಭಿಪ್ರಾಯ ಹೊಂದಿದ್ದಾರೆ. ಈ ಕಾರಣಕ್ಕಾಗಿ ಒಮ್ಮತದ ನಿರ್ಣಯಕ್ಕೆ ಬರಲು ಹೈಕಮಾಂಡ್ ನಾಯಕರಿಗೂ ಆಗುತ್ತಿಲ್ಲ. ಇನ್ನು ನಿಗಮ ಮಂಡಳಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹೊಸ‌ ಪ್ಲ್ಯಾನ್ ಮಾಡಿದ್ದಾರೆ. ಅದರಂತೆ ಕೇವಲ ಶಾಸಕರಿಗೆ ನಿಗಮ ಮಂಡಳಿ ಹಂಚಿಕೆ ಮಾಡಲು ಚಿಂತನೆ ಮಾಡಿರುವ ಸಿದ್ದರಾಮಯ್ಯ, ಈ ಮೂಲಕ ಲೋಕಸಭೆ ಚುನಾವಣೆ ಸಮಯದಲ್ಲಿ ಶಾಸಕರ ಅಸಮಾಧಾನ ತಣಿಸಬಹುದು ಎನ್ನುವ ಲೆಕ್ಕಾಚಾರ ಹೊಂದಿದ್ದಾರೆ. 26 ರಿಂದ 30 ಶಾಸಕರ ಪಟ್ಟಿ ಸಿದ್ಧ ಮಾಡಿಕೊಂಡಿರುವ ಸಿಎಂ ಹೈಕಮಾಂಡ್ ಮುಂದೆ ಡಿಮ್ಯಾಂಡ್ ಇಟ್ಟು ಹೈಕಮಾಂಡ್ ಗ್ರೀನ್ ಸಿಗ್ನಲ್​ಗಾಗಿ ಕಾಯುತ್ತಿದ್ದಾರಂತೆ..

ಕಾರ್ಯಕರ್ತರಿಗೆ ನಿಗಮ ಮಂಡಳಿ ನೀಡಲು ಡಿಕೆ ಪಟ್ಟು!

ಶಾಸಕರಿಗೆ ನಿಗಮ ಮಂಡಳಿ ಕೊಡಿಸುವ ಲೆಕ್ಕಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಇದ್ರೆ, ಡಿಸಿಎಂ ಡಿಕೆ ಶಿವಕುಮಾರ್ ಲೆಕ್ಕಾಚಾರವೇ ಬೇರೆ ಇದೆ. ಕಾರ್ಯಕರ್ತರಿಗೂ ನಿಗಮ ಮಂಡಳಿ ಹಂಚಿಕೆ ಮಾಡಬೇಕು ಎನ್ನುವುದೇ ಡಿಕೆ ಇಚ್ಛೆಯಾಗಿದೆ. ಕಾರ್ಯಕರ್ತರ ಕೈಗೆ ಅಧಿಕಾರ ಕೊಡದೆ ಹೋದರೆ, ಲೋಕಸಭೆ ಚುನಾವಣೆ ವೇಳೆ ಕೇವಲ ಶಾಸಕರನ್ನು ನಂಬಿಕೊಂಡು ಕೆಲಸ ಮಾಡುವುದಕ್ಕೆ ಆಗಲ್ಲ.. ಹೀಗಾಗಿ ಕನಿಷ್ಟ 30 ಮಂದಿ ಕಾರ್ಯಕರ್ತರಿಗಾದರೂ ನಿಗಮ ಮಂಡಳಿ ಸ್ಥಾನ ಕೊಡಬೇಕು ಎನ್ನುವುದು ಡಿಕೆ ಶಿವಕುಮಾರ್ ವಾದವಾಗಿದೆ.

ಹಿರಿತನ, ಜಾತಿ, ಪ್ರದೇಶವಾರು ನಿಗಮ ಮಂಡಳಿ ಹಂಚಿಕೆ

ಸಿಎಂ ಹಾಗೂ ಡಿಸಿಎಂ ಭಿನ್ನ ಅಭಿಪ್ರಾಯ ಇದ್ದ ಕಾರಣ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಪಂಚ ರಾಜ್ಯಗಳ ಚುನಾವಣೆ ಬ್ಯುಸಿ ನಡುವೆಯೂ ಮಧ್ಯಪ್ರದೇಶ ಚುನಾವಣೆ ಉಸ್ತುವಾರಿಯಾಗಿರುವ ಸುರ್ಜೇವಾಲ ಇಂದು ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ ಕಾರ್ಯಕರ್ತರಿಗೆ ಮತ್ತೆ ನಿಗಮ ಆಸೆ ಗರಿಗೆದರಿದೆ. ಎಲ್ಲೋ ಒಂದು ಕಡೆ ಡಿಕೆ ಶಿವಕುಮಾರ್ ಕಾರಣದಿಂದಾಗಿ ಕಾರ್ಯಕರ್ತರಿಗೂ ನಿಗಮ ಮಂಡಳಿ ಅಧಿಕಾರ ಸಿಗುವ ನಿರೀಕ್ಷೆ ಇದೆ. ಅತ್ತ ಸಿದ್ದರಾಮಯ್ಯ 26 ಶಾಸಕರ ಲಿಸ್ಟ್ ಸಿದ್ಧ ಮಾಡಿದ್ದರಿಂದ ಹಿರಿತನ, ಸಮುದಾಯವಾರು, ಪ್ರಾದೇಶಿಕವಾರು ಹಂಚಿಕೆ ಆಧಾರದ ಮೇಲೆ ನಿಗಮ ಮಂಡಳಿ ಸಿಗುವ ಬಗ್ಗೆ ಶಾಸಕರೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನಿಗಮ ಮಂಡಳಿ ನೇಮಕಾತಿ ಇಂದು ಫೈನಲ್ ?

ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಜತೆ ಮಹತ್ವದ ಸಭೆ ನಡೆಸಿ ಕಗ್ಗಂಟಾಗಿ ಉಳಿದಿರುವ ನಿಗಮ ಮಂಡಳಿ ನೇಮಕ ಬಗ್ಗೆ ಮಾತುಕತೆ ನಡೆಸಿ ಅಂತಿಮ ಪಟ್ಟಿ ಫೈನಲ್ ಮಾಡಲಿದ್ದಾರೆ ಎನ್ನಲಾಗಿದೆ. ಶಾಸಕರಿಗೆ ಮಾತ್ರ ಮೊದಲಿಗೆ ನಿಗಮ ಮಂಡಳಿ ಸ್ಥಾನಮಾನ ನೀಡೋಣ ಸಿದ್ದರಾಮಯ್ಯ ಹೇಳುತ್ತಿದ್ದರೆ, ಶಾಸಕರ ಜತೆ ಪ್ರಮುಖ ಕಾರ್ಯಕರ್ತರಿಗೂ ನಿಗಮಮಂಡಳಿ ನೀಡೋಣ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಎಐಸಿಸಿ ನಾಯಕರು ಇಂದು ಇದೇ ವಿಚಾರವಾಗಿ ಚರ್ಚೆ ನಡೆಸಿ ಫೈನಲ್​ ಮಾಡಲಿದೆ.

ಒಟ್ಟಿನಲ್ಲಿ ನಿಗಮ ಮಂಡಳಿಯಲ್ಲೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಶೀತಲ ಸಮರ ಶುರುವಾಗಿದ್ದು, ಅಂತಿಮವಾಗಿ ಯಾರ ಕೈ ಮೇಲಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us