ಕರ್ನಾಟಕದಲ್ಲಿ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ: ಕೇಂದ್ರವನ್ನ ಪ್ರಶ್ನಿಸಿದ್ದ ರಾಹುಲ್​ಗೆ ಅಶೋಕ್​ ತಿರುಗೇಟು

ಮಹಾರಾಷ್ಟ್ರದ ರೈತರ ಆತ್ಮಹತ್ಯೆ ಕುರಿತು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಆರ್. ಅಶೋಕ್ ಟ್ವೀಟ್​ ಮಾಡಿದ್ದು, ಕರ್ನಾಟಕದಲ್ಲಿ 15 ತಿಂಗಳಲ್ಲಿ 1,180ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನೀವು ಏಕೆ ಮೌನವಾಗಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕದಲ್ಲಿ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ: ಕೇಂದ್ರವನ್ನ ಪ್ರಶ್ನಿಸಿದ್ದ ರಾಹುಲ್​ಗೆ ಅಶೋಕ್​ ತಿರುಗೇಟು
ಆರ್​. ಅಶೋಕ್​, ರಾಹುಲ್ ಗಾಂಧಿ

Updated on: Jul 03, 2025 | 12:56 PM

ಬೆಂಗಳೂರು, ಜುಲೈ 03: ಮಹಾರಾಷ್ಟ್ರದಲ್ಲಿ ಕೇವಲ 3 ತಿಂಗಳಲ್ಲಿ 767 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರವಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ (Rahul Gandhi) ಕಿಡಿಕಾರಿದ್ದಾರೆ. ಸದ್ಯ ಈ ವಿಚಾರವಾಗಿ ರಾಜ್ಯ ಬಿಜೆಪಿ ವಿಪಕ್ಷ ನಾಯಕ ಆರ್​. ಅಶೋಕ್ (R Ashoka)​​ ಪ್ರತಿಕ್ರಿಯಿಸಿದ್ದು, ‘ಮಹಾರಾಷ್ಟ್ರದ ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುವುದಕ್ಕಿಂತ ಮೊದಲು, ನಿಮ್ಮದೇ ಕಾಂಗ್ರೆಸ್​ ಪಕ್ಷ ಆಡಳಿತವಿರುವ ಕರ್ನಾಟಕದಲ್ಲಿ ಕೇವಲ 15 ತಿಂಗಳಲ್ಲಿ 1,180ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನು ಸರ್ಕಾರವೇ ದೃಢಪಡಿಸಿದೆ. ಆದರೂ ನೀವು ಮೌನವಾಗಿದ್ದೀರಿ’ ಎಂದು ತಿರುಗೇಟು ನೀಡಿದ್ದಾರೆ.

ಏಕೆ ಈ ಮೌನ ರಾಹುಲ್ ಜಿ?

ಈ ಬಗ್ಗೆ ಟ್ವೀಟ್ ಮಾಡಿರುವ ಆರ್​. ಅಶೋಕ್, ‘ಒಂದು ಬಾರಿಯೂ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ನೀವು ಭೇಟಿ ನೀಡಿಲ್ಲ. ದುಃಖ ವ್ಯಕ್ತಪಡಿಸಿಲ್ಲ, ಏಕೆ ಈ ಮೌನ ರಾಹುಲ್ ಜಿ? ಸಹಾನುಭೂತಿ ನಿಮ್ಮ ಪಕ್ಷದ ಆಡಳಿತವಿಲ್ಲದ ರಾಜ್ಯಗಳಿಗೆ ಮಾತ್ರ ಮೀಸಲಾಗಿದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ಪೊಲೀಸ್ ಇಲಾಖೆಯ ಮನೋಬಲಕ್ಕೆ ಧಕ್ಕೆ: ಭರಮನಿ ಸ್ವಯಂ ನಿವೃತ್ತಿ ಪ್ರಸ್ತಾಪಿಸಿ ಅಶೋಕ್ ವಾಗ್ದಾಳಿ

‘ನಿಮ್ಮ ಸ್ವಂತ ಸರ್ಕಾರದ ನಿರ್ಲಕ್ಷ್ಯವನ್ನು ಪ್ರಶ್ನಿಸುವ ಬದಲು, ಬೇರೆಯವರ ತಪ್ಪನ್ನು ನೋಡುತ್ತಲೇ ಇದ್ದೀರಿ. ನೀವು ನ್ಯಾಯದ ಬಗ್ಗೆ ಮಾತನಾಡುತ್ತೀರಿ, ಆದರೆ ನಿಮ್ಮ ಸ್ವಂತ ಪಕ್ಷದಲ್ಲೇ ನ್ಯಾಯವನ್ನು ನಿರಾಕರಿಸುತ್ತೀರಿ. ಸಿಎಂ ಸಿದ್ದರಾಮಯ್ಯ ನಿಮ್ಮ ಪಕ್ಷಕ್ಕೆ ಸೇರಿದವರು ಎಂಬ ಕಾರಣಕ್ಕೆ ಟೀಕೆಗೆ ಗುರಿಯಾಗುವುದಿಲ್ಲವೇ? ಕರ್ನಾಟಕದ ರೈತರ ನೋವು ನಿಮ್ಮ ಆತ್ಮಸಾಕ್ಷಿಗೆ ಕಾಣಿಸುತ್ತಿಲ್ಲವೇ’ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.

‘ನಿಜವಾದ ನಾಯಕತ್ವ ಎಂದರೆ ನಿಮ್ಮನ್ನು ನೀವೇ ಹೊಣೆಗಾರರನ್ನಾಗಿ ಮಾಡಿಕೊಳ್ಳುವುದು, ಕೇವಲ ರಾಜಕೀಯ ಲಾಭಕ್ಕಾಗಿ ಇತರರ ಮೇಲೆ ದಾಳಿ ಮಾಡುವುದಲ್ಲ. ನೀವು ಭಾರತದ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಹೊಂದಿದ್ದರೆ, ಮೊದಲು ಕರ್ನಾಟಕದಿಂದ ಪ್ರಾರಂಭಿಸಬೇಕು. ಇಲ್ಲದಿದ್ದರೆ, ನಿಮ್ಮ ಸಹಾನುಭೂತಿ ಟೊಳ್ಳಾಗಿ ಧ್ವನಿಸುತ್ತದೆ ಮತ್ತು ನಿಮ್ಮ ಆಕ್ರೋಶವು ನಿರ್ಮಿತವಾಗಿದೆ ಎಂದು ಭಾಸವಾಗುತ್ತದೆ’ ಅವರು ಹೇಳಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಆಸೆ ನನಗೂ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ

ನಿಮ್ಮ ಸ್ವಂತ ಪಕ್ಷದಲ್ಲೇ ವೈಫಲ್ಯವನ್ನು ಎದುರಿಸುವ ಧೈರ್ಯವನ್ನು ನೀವು ಕಂಡುಕೊಳ್ಳುವವರೆಗೆ, ದಯವಿಟ್ಟು ದೇಶಕ್ಕಾಗಿ ಈ ಮೊಸಳೆ ಕಣ್ಣೀರು ಹಾಕುವುದನ್ನು ಬಿಡಿ. ಕರ್ನಾಟಕದ ರೈತರು ನಿಮ್ಮ ರಾಜಕೀಯಕ್ಕೆ ಸಾಧನಗಳಲ್ಲ, ಅವರು ಘನತೆ, ನ್ಯಾಯಕ್ಕೆ ಅರ್ಹರಾದ ನಾಗರಿಕರು’ ಎಂದು ಆರ್​​.ಅಶೋಕ್​ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:53 pm, Thu, 3 July 25

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us