ಬೆಲೆ ಏರಿಕೆ ಭಾಗ್ಯ ಕೊಟ್ಟ ಕಾಂಗ್ರೆಸ್ ಸರ್ಕಾರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ: ಆರ್​ ಅಶೋಕ್​

ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳ‌ವಾಗಿದೆ. ಈ ಸಂಬಂಧ ವಿರೋಧ ಪಕ್ಷದ ನಾಯಕ ಆರ್​​. ಅಶೋಕ್​ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಬೆಲೆ ಏರಿಕೆ ಭಾಗ್ಯ ಕೊಟ್ಟ ಕಾಂಗ್ರೆಸ್ ಸರ್ಕಾರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ: ಆರ್​ ಅಶೋಕ್​
ಆರ್​. ಅಶೋಕ್​
Edited By: ವಿವೇಕ ಬಿರಾದಾರ

Updated on: Jun 16, 2024 | 1:10 PM

ಬೆಂಗಳೂರು, ಜೂನ್​​ 16: ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದ ಮೇಲೆ ಕಳೆದ ಒಂದು ವರ್ಷದಿಂದ ಬೆಲೆ ಏರಿಕೆ ಭಾಗ್ಯ ಕೊಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್​ ಅಶೋಕ್​​ (R Ashok) ವಾಗ್ದಾಳಿ ಮಾಡಿದ್ದಾರೆ. ಬಿಜೆಪಿ ನಾಯಕ ಆರ್​ ಅಶೋಕ್ ವಿಧಾನಸೌಧದಲ್ಲಿ ಸುದ್ದಿಗೊಷ್ಠಿ ನಡೆಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬೆಲೆ ಏರಿಕೆ ಕುರಿತು ಮಾತನಾಡಿರುವ ವಿಡಿಯೋ ತೋರಿಸಿ, ಹಾಲು, ಮದ್ಯ, ಮನೆ ತೆರಿಗೆ, ಸ್ಟ್ಯಾಂಪ್ ಡ್ಯೂಟಿ ಶುಲ್ಕ ಜಾಸ್ತಿ ಮಾಡಿದ್ದಾರೆ. ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡಿದ್ದಾರೆ. ಇದು ರಾಜ್ಯದ ಜನರ ದೌರ್ಭಾಗ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಅವಧಿಯಲ್ಲಿ (ಬಿಜೆಪಿ ಸರ್ಕಾರ) ಸಣ್ಣ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿದಾಗ ಶವಯಾತ್ರೆ ಮಾಡುವ ಮೂಲಕ ಸಿದ್ದರಾಮಯ್ಯ ಹೋರಾಟ ಮಾಡಿದರು. ಆದರೆ, ಈಗ ನೀವು ಏನು ಮಾಡಿದ್ದೀರಿ? ಬೆಲೆ ಏರಿಕೆ ಮಾಡಿ ಬಡ ಸಮುದಾಯಕ್ಕೆ ದೊಡ್ಡ ಹೊಡೆತ ಕೊಟ್ಟಿದ್ದೀರಾ? ಪೆಟ್ರೋಲ್ ಬೆಲೆ ಏರಿಕೆಯಿಂದ ಹಾಲು, ತರಕಾರಿ ಸೇರಿದಂತೆ ಎಲ್ಲ ವಸ್ತುಗಳ ಬೆಲ ಜಾಸ್ತಿ ಆಗುತ್ತದೆ. ಇದರಿಂದ ರಾಜ್ಯದ ಜನ ಕಾಫಿ, ಟೀ ಕುಡಿಯಲು ಆಗಲ್ಲ. ಸಿದ್ದರಾಮಯ್ಯಗೆ ಮಾನ, ಮರ್ಯಾದೆ ಇದೆಯಾ? ಆರ್​. ಅಶೋಕ್​ಗೆ ಜ್ಞಾನ ಇಲ್ಲ ಅಂದ್ರಿ, ನಿನಗೆ ಜ್ಞಾನ ಇದೆಯಾ ಸಿದ್ದರಾಮಯ್ಯ? ನಾಚಿಕೆ ಆಗಲ್ವಾ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಮಾಡಿದರು.

ಬೆಲೆ ಏರಿಕೆ ವಿಚಾರವಾಗಿ ಎಲ್ಲರೂ ಬಾಯಿ‌ ಮುಚ್ಚಿಕೊಂಡು‌ ಇರಬೇಕೆಂದು ಅಂತ ಕಾಂಗ್ರೆಸ್ ಶಾಸಕರಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ವಾರ್ನಿಂಗ್ ಕೊಟ್ಟಿದ್ದಾರೆ. ಇದೆಲ್ಲ ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ‌ ಇರಲ್ಲ ಅಂತ ಗೊತ್ತಾಗುತ್ತದೆ ಎಂದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ

ಬಿಬಿಎಂಪಿ ಚುನಾವಣೆಯಲ್ಲಿ ಜನತೆ ಬುದ್ಧಿ ಕಲಿಸಲಿದ್ದಾರೆ. ನಮಗೆ ಕಾಂಗ್ರೆಸ್ಸಿಗರು ಚೊಂಬು ತೋರಿಸಿದರು. ಬಿಬಿಎಂಪಿ ಚುನಾವಣೆಯಲ್ಲಿ ಜನ ಚೊಂಬು ಕೊಡುವುದು ಪಕ್ಕಾ. ಕಾಂಗ್ರೆಸ್​​ ಪಕ್ಷಕ್ಕೆ ಜನರು ಚೊಂಬು ತೋರಿಸುವುದು ನಿಜ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆದೇಶ ಸಂಪೂರ್ಣ ವಾಪಾಸು ಪಡೆಯಬೇಕು. ಅಲ್ಲಿಯವರಗೆ ನಮ್ಮ ಹೋರಾಟ ನಿಲ್ಲಲ್ಲ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ವಿಧಾನಸೌಧವನ್ನೂ ಅಡಮಾನ ಇಡುತ್ತಾರೆ

ಕಾಂಗ್ರೆಸ್ ಸರ್ಕಾರ ಅದರಲ್ಲೂ, 15 ಬಾರಿ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಇದು ಬೋಗಸ್ ಸರ್ಕಾರ. ಸರ್ಕಾರ ಬಿಡಿಎ ಮಾರಾಟ ಮಾಡುವುದಕ್ಕೆ ಹೊರಟಿದೆ. ಸರ್ಕಾರ ಪಾಪರ್ ಆಗಿದೆ. ಕಮಿಷನ್ ಹೊಡೆಯಲು ಇವರ ಬಳಿ ದುಡ್ಡಿಲ್ಲ. ಬಿಬಿಎಂಪಿ ಕಚೇರಿ, ವಾರ್ಡ್ ಕಚೇರಿ ಅಡ ಇಡುತ್ತಾರೆ. ಸಿದ್ದರಾಮಯ್ಯ ವಿಧಾನಸೌಧವನ್ನೂ ಅಡಮಾನ ಇಡುತ್ತಾರೆ. ಸಿದ್ದರಾಮಯ್ಯ ಔಟ್ ಗೋಯಿಂಗ್ ಮುಖ್ಯಮಂತ್ರಿ. ಹೀಗಾಗಿ ವಿಧಾನಸೌಧ ಅಡಮಾನ ಇಡಲು‌ ಹೊರಟ್ಟಿದ್ದಾರೆ ಎಂದು ಹೇಳಿದರು.

ನಾಳೆಯ (ಸೋಮವಾರ ಜೂ.17) ಪ್ರತಿಭಟನೆಗೆ ರಾಜ್ಯದ ಜನ ಸಹಕಾರ ಕೊಡಬೇಕು. ನಾಳೆ ನಾನು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿದ್ದೇನೆ. ಪ್ರತಿ ದಿನ ಒಂದೋದು ರೀತಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:02 pm, Sun, 16 June 24

Loading...
Unable to load recommendations.
Follow Us