ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮೇಲೆ ಡಿಕೆ ಶಿವಕುಮಾರ್ ಸಿಡಿ ಅಸ್ತ್ರ: ಬಿಜೆಪಿ ಅಭ್ಯರ್ಥಿ ರಾಜುಗೌಡ

| Updated By: ವಿವೇಕ ಬಿರಾದಾರ

Updated on: May 03, 2024 | 11:20 AM

ರಾಜ್ಯ ರಾಜಕಾರಣದಲ್ಲಿ ಸಿಡಿ ಮತ್ತು ಪೆನ್​ಡ್ರೈವ್​ ಸಾಕಷ್ಟು ಸದ್ದು ಮಾಡುತ್ತಿವೆ. ಈ ಹಿಂದೆ ಶಾಸಕ ರಮೇಶ್​ ಜಾರಕಿಹೊಳಿ ಅವರ ಸಿಡಿ ಬಿಡುಗಡೆಯಾಗಿತ್ತು. ಇದಾದ ನಂತರ ಸಂಸದ ಪ್ರಜ್ವಲ್​ ರೇವಣ್ಣ ಅವರ ಪೈನ್​ಡ್ರೈವ್​ ಬಿಡುಗಡೆಯಾಗಿದೆ. ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಅವರ ಸಿಡಿ ಕೂಡ ಬಿಡುಗಡೆಯಾಗಬಹುದು ಎಂದು ಬಿಜೆಪಿ ಮುಖಂಡ ರಾಜುಗೌಡ ಹೇಳಿದರು.

ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮೇಲೆ ಡಿಕೆ ಶಿವಕುಮಾರ್ ಸಿಡಿ ಅಸ್ತ್ರ: ಬಿಜೆಪಿ ಅಭ್ಯರ್ಥಿ ರಾಜುಗೌಡ
ಬಿಜೆಪಿ ಮುಖಂಡ ರಾಜುಗೌಡ
Follow us on

ಯಾದಗಿರಿ, ಮೇ 03: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ಅವರಿಗೆ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿದೆ. ಹೀಗಾಗಿ ಲೋಕಸಭೆ ಚುನಾವಣೆ (Lok Sabha Election) ಬಳಿಕ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಸಿದ್ದರಾಮಯ್ಯ (Siddaramaiah) ಅಥವಾ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಅವರ ಸಿಡಿ ಬಿಡಬಹುದು ಎಂದು ಸುರಪುರ‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜುಗೌಡ (Rajugouda) ಸ್ಫೋಟಕ ಹೇಳಿಕೆ ನೀಡಿದರು. ಹುಣಸಗಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಣ್ಣನವರೆ ಹುಷಾರಾಗಿರಿ, ಡಿ.ಕೆ.ಶಿವಕುಮಾರ್ ಅಣ್ಣವರು​ ಸಿಡಿ ತಯಾರಿಸುವುದರಲ್ಲಿ ಎತ್ತಿದ ಕೈ ಎಂದು ಹೇಳಿದರು.

ಇಂತಹವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಓಡಾಡಬೇಡಿ. ರಮೇಶ್ ಜಾರಕಿಹೊಳಿಯವರ ಸಿಡಿ ಮಾಡಿ ಮನೆಗೆ ಕಳಿಸಿದರು. ಡಿಕೆ ಶಿವಕುಮಾರ್​​ ಅವರು ಸಿದ್ದರಾಮಯ್ಯ ಅವರಿಗೆ ಒಳ್ಳೆಯದ ಮಾಡಲ್ಲ. ಸಿದ್ದರಾಮಯ್ಯ ಅಣ್ಣನವರೇ ನಿಮ್ಮ ಕುರ್ಚಿ ಮೇಲೆ ಡಿಕೆ ಶಿವಕುಮಾರ್​​ ಅವರ ಕಣ್ಣಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಡಿಕೆ ಶಿವಕುಮಾರ್​ ಏನು ಬೇಕಾದರೂ ಮಾಡುತ್ತಾರೆ. ಸಿದ್ದರಾಮಯ್ಯ ಅಣ್ಣನವರೇ ಹುಷಾರಾಗಿರಿ ಎಂದರು.

ಇದನ್ನೂ ಓದಿ: ಮಾಜಿ ಸಚಿವ ಹೆಚ್​ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ, ಮೈಸೂರಿನಲ್ಲಿಯೂ ಕೇಸ್ ದಾಖಲು

ಡಿಕೆ ಶಿವಕುಮಾರ್ ಪೆನ್​​​​ಡ್ರೈವ್ ಯೂನಿವರ್ಸಿಟಿ ತೆಗೆದಿದ್ದಾರೆ

ಡಿ.ಕೆ.ಶಿವಕುಮಾರ್ ಪೆನ್​​​​ಡ್ರೈವ್ ಯೂನಿವರ್ಸಿಟಿ ತೆಗೆದಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಒಂಥರಾ 24X7 ರಾಜಕೀಯ ಮಾಡುವವರು. ಎದುರಾಳಿಗಳನ್ನು ಹೇಗೆ ಬಗ್ಗು ಬಡಿಯಬೇಕು ಎಂದು ಗೊತ್ತಿದೆ. ಕೆಲವರಿಗೆ ಬೆದರಿಸುವ ಅಸ್ತ್ರ, ಕೆಲವರಿಗೆ ಸಿಡಿ ಅಸ್ತ್ರ ಬಳಸುತ್ತಾರೆ. ಟೈಮ್ ಬಂದಾಗ ಎದುರಾಳಿಗೆ ಏನ್ ಮಾಡಬೇಕು ಮಾಡುತ್ತಾರೆ. ಪ್ರಜ್ವಲ್, ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಅಸ್ತ್ರ ಪ್ರಯೋಗಿಸಿದರು. ಸಿದ್ದರಾಮಯ್ಯ ವಿರುದ್ಧವೂ ಇದೇ ಅಸ್ತ ಪ್ರಯೋಗಿಸುತ್ತಾರೆ ಎಂದು ಹೇಳಿದರು.

ಡ್ರೈವರ್ ಇರುವ ವಿಚಾರ ಅವರಿಗೆ ಗೊತ್ತಿತ್ತಂತೆ. ಮತ್ಯಾಕೆ ಆಗಲೆ ಹೇಳಲಿಲ್ಲ. ಆಗಲೆ ಹೇಳಿದ್ದರೇ ಇಷ್ಟೋತ್ತಿಗೆ ಶಿಕ್ಷೆಯಾಗುತ್ತಿತ್ತು. ಇವರಿಗೆ ತಪ್ಪು ಮಾಡಿದವನಕ್ಕಿಂತ ರಾಜಕೀಯನೇ ಮುಖ್ಯ. ಅಪರಾಧಿಗೆ ಶಿಕ್ಷೆ ಆಗುವುದಕ್ಕಿಂತ‌ ಮುಂಚೆ ರಾಜಕೀಯ ಲಾಭ ಆಗಬೇಕು. ಅದನ್ನೇ ಕಾಯ್ಕೊಂಡು ಕುಳಿತು, ಮತದಾನಕ್ಕೆ ಎರಡ್ಮೂರು ದಿನ ಬಾಕಿ ಇರುವಾ ಪೆನ್​ಡ್ರೈವ್​ ಬಿಟ್ಟಿದ್ದಾರೆ.. ನಿಮ್ಮ ಕೈಗೆ ಮೊದಲೇ ಬಂದಿತಾ? ಅಗಲೆ ಕ್ರಮಕೈಗೊಂಡು ಶಿಕ್ಷೆ ಕೊಡಸಿದ್ದರೇ ಒಂದು ಡಿಪರೆಂಟ್ ಮೆಸೆಜ್ ಹೋಗ್ತಿತ್ತು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ವಿರುದ್ಧ ಹರಿಹಾಯ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:20 am, Fri, 3 May 24