ಸಿಎಂ ಸಿದ್ದರಾಮಯ್ಯ ಸರ್ಕಾರ ಕೇರಳದ್ದಾ ಅಥವಾ ಕರ್ನಾಟಕದ್ದಾ? ಆರ್​ ಅಶೋಕ್​​ ವಾಗ್ದಾಳಿ

ಬೆಂಗಳೂರಿನ ಕೋಗಿಲು ಅಕ್ರಮ ವಲಸಿಗರ ಮನೆ ತೆರವು ವಿಚಾರವಾಗಿ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್​​ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಈ ವಿಚಾರವಾಗಿ ಕೋರ್ಟ್​ ಮೊರೆ ಹೋಗುವ ಸಂಬಂಧ ಚರ್ಚೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಸರ್ಕಾರ ಕೇರಳದ್ದಾ ಅಥವಾ ಕರ್ನಾಟಕದ್ದಾ? ಆರ್​ ಅಶೋಕ್​​ ವಾಗ್ದಾಳಿ
ಆರ್​. ಅಶೋಕ್​​, ಸಿದ್ದರಾಮಯ್ಯ
Edited By:

Updated on: Dec 30, 2025 | 5:16 PM

ಬೆಂಗಳೂರು, ಡಿಸೆಂಬರ್​ 30: ಕೋಗಿಲು ಲೇಔಟ್ (Kogilu Layout)​ ನಿವಾಸಿಗಳಿಗೆ ಮನೆ ಹಂಚಿಕೆಗೆ ನಿರ್ಧಾರ ವಿಚಾರ ಸದ್ಯ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ವಿಪಕ್ಷಗಳು ತೀವ್ರ ಕಿಡಿಕಾರಿವೆ. ಯಾವ ಕಾನೂನಿನಡಿಯಲ್ಲೂ ಅವರಿಗೆ ಮನೆ ಕೊಡಲು ಸಾಧ್ಯವೇ ಇಲ್ಲ. ಕನ್ನಡಿಗರ ನೆಲ ಪರಭಾರೆ ಮಾಡುವ ಅಧಿಕಾರ ನಿಮಗೆ ಯಾರು ಕೊಟ್ಟರು? ರಾಜ್ಯದಲ್ಲಿರುವ ಸರ್ಕಾರ ಕೇರಳದ್ದಾ ಅಥವಾ ಕರ್ನಾಟಕದ್ದಾ ಎಂದು ವಿಪಕ್ಷ ನಾಯಕ ಆರ್​. ಅಶೋಕ್ (R Ashoka)​ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಪಾಕಿಸ್ತಾನಕ್ಕೂ ನಮ್ಮನ್ನು ಕಾಂಗ್ರೆಸ್​ನವರು ಅಡವಿಟ್ಟುಬಿಟ್ರಾ?: ಅಶೋಕ್ ಕಿಡಿ

ಕೋಗಿಲು ಅಕ್ರಮ ವಲಸಿಗರ ಮನೆ ತೆರವು ವಿಚಾರವಾಗಿ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್​​, ಕೋಗಿಲು ಲೇಔಟ್​ನಲ್ಲಿ ಅನಧಿಕೃತ ಮನೆಗಳ ತೆರವು ಸಂಬಂಧಿಸಿದ ದಾಖಲೆಗಳ ಬಿಡುಗಡೆ ಮಾಡಿದ್ದಾರೆ. ಮನೆ ಹಂಚಿಕೆ ವಿಚಾರ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿಬಿಟ್ಟಿದೆ. ಈಗ ಪಾಕಿಸ್ತಾನಕ್ಕೂ ನಮ್ಮನ್ನು ಕಾಂಗ್ರೆಸ್​ನವರು ಅಡವಿಟ್ಟುಬಿಟ್ರಾ? ಪಾಕಿಸ್ತಾನದವರು ಕರ್ನಾಟಕದ ಬಗ್ಗೆಯೇ ಯಾಕೆ ಮಾತಾಡುತ್ತಾರೆ? ಪಾಕ್​ನವರು ಮಹಾರಾಷ್ಟ್ರ, ತಮಿಳುನಾಡು ಬಗ್ಗೆ ಯಾಕೆ ಮಾತಾಡಲ್ಲ. ಸಿಎಂ, ಡಿಸಿಎಂ ಜಗಳದಲ್ಲಿ ನಾವು ದುರಂತದ ತುದಿಗೆ ಬಂದು ಬಿಟ್ಟಿದ್ದೇವೆ. ಬಾಂಗ್ಲಾದವರಿಗೆ ಜಮೀನು‌ ಕೊಡುತ್ತೀರಿ ಅಂತಾದರೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.

ಕೋರ್ಟ್​ ಮೊರೆ ಹೋಗುವ ಸಂಬಂಧ ಚರ್ಚೆ

ಕೋಗಿಲು ಲೇಔಟ್​ ನಿವಾಸಿಗಳಿಗೆ ಮನೆ ಹಂಚಿಕೆ ವಿಚಾರವಾಗಿ ಕೋರ್ಟ್​ ಮೊರೆ ಹೋಗುವ ಸಂಬಂಧ ಚರ್ಚೆ ನಡೆಸಿದ್ದೇವೆ. ಈಗಾಗಲೇ ಈ ಬಗ್ಗೆ ಕಾನೂನು ತಂಡಕ್ಕೆ ಸೂಚನೆ ನೀಡಿದ್ದೇನೆ. ವಿಜಯಪುರ ಜಿಲ್ಲೆಯ ಆಲಮಟ್ಟಿ, ಕೊಡಗು ಸೇರಿದಂತೆ ರಾಜ್ಯದಲ್ಲಿರುವ ಸಂತ್ರಸ್ತರಿಗೆ ಮನೆ ಕೊಡಲು ಯೋಗ್ಯತೆ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕೆಸಿ ವೇಣುಗೋಪಾಲ್ ಮಾತು ಕೇಳಿ ಆಡಳಿತ ಮಾಡುವುದು 6 ಕೋಟಿ ಜನತೆಗೆ ಮಾಡಿದ ಅವಮಾನ; ಲಹರ್ ಸಿಂಗ್​​

ಇದು ವಕ್ಫ್ ಬೋರ್ಡ್ ಆಸ್ತಿ ಅಲ್ಲ, ಸರ್ಕಾರಿ ಭೂಮಿ. ವಕ್ಫ್ ಬೋರ್ಡ್ ಆಸ್ತಿ ಇದೆ ಅಲ್ವಾ, ಅದರಲ್ಲಿ ಮನೆ ಕಟ್ಟಿಕೊಡಿ. ಕೋಗಿಲು ಲೇಔಟ್​ನಲ್ಲಿರೋದು 650 ಕೋಟಿ ರೂ ಮೌಲ್ಯದ ಭೂಮಿ ಇದೆ. ಅನಧಿಕೃತ ಮನೆ ನಿರ್ಮಾಣ ಬಗ್ಗೆ ಒಂದು ವರ್ಷದ ಹಿಂದೆ ಅಂದರೆ ಸೆ.12ರಂದು BBMP ಜಂಟಿ ಆಯುಕ್ತರಿಗೆ ತಹಶೀಲ್ದಾರ್ ಪತ್ರ ಬರೆದಿದ್ದಾರೆ. ಈಗ ಮನೆ ಕಟ್ಟಿಕೊಡಿ ಅಂತಾ ಯಾರು ಹೇಳಿದರು. ಆಶ್ರಯ ಯೋಜನೆಯಡಿ ಕೊಟ್ಟರೆ ಶಾಸಕರ ಅಧ್ಯಕ್ಷತೆಯಲ್ಲಿ ಕೊಡಬೇಕು. ನನಗೆ ಗೊತ್ತಿರುವ ಪ್ರಕಾರ ಬ್ಯಾಟರಾಯನಪುರ ಶಾಸಕ ವಿದೇಶದಲ್ಲಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪ್ರಾಯೋಜಿತದಿಂದಾಗಿ ಅಕ್ರಮ ಮನೆಗಳ ನಿರ್ಮಾಣ ಮಾಡಲಾಗಿದೆ. ಮಾನವೀಯತೆ ಆಧಾರದಲ್ಲಿ ವಸತಿ ಕೊಡಬೇಕೆಂದು ಸಿಎಂ‌ ಸೂಚಿಸಿದ್ದಾರೆ. ಕಸ ಹಾಕುವ ಜಾಗದಲ್ಲಿ‌ ಕಾಂಗ್ರೆಸ್​ನವರು ಮನೆ ಕಟ್ಟಿಕೊಂಡಿದ್ದಾರೆ. 14 ಎಕರೆ 8 ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಲಾಗಿದೆ. ಘನತ್ಯಾಜ್ಯ ನಿರ್ವಹಣೆಗೆ 100 ಕೋಟಿ ರೂ. ಮೀಸಲು ಇಟ್ಟಿದ್ದಾರೆ. ಬಾಂಗ್ಲಾದಿಂದ ಮುಸ್ಲಿಮರು ಪಶ್ಚಿಮ ಬಂಗಾಳಕ್ಕೆ ಬಂದರೆ ಏಜೆನ್ಸಿ ಇದೆಯಂತೆ. ಅಲ್ಲಿ 20 ಸಾವಿರ ಕೊಟ್ಟರೆ ಆಧಾರ್ ಎಲ್ಲವೂ ಮಾಡಿಕೊಡುತ್ತಾರಂತೆ ಎಂದರು.

ಇದನ್ನೂ ಓದಿ: ನಮ್ಮ ಸರ್ಕಾರದ ಆಡಳಿತದಲ್ಲಿ ಕೈ ಹಾಕುವುದು ಬೇಡ: ಕೇರಳ ಸರ್ಕಾರಕ್ಕೆ ಡಿಕೆ ಶಿವಕುಮಾರ್ ಎಚ್ಚರಿಕೆ​

ಕೋಗಿಲು ಸರ್ವೆ ನಂಬರ್ 99ರ ಜಮೀನು ಇದು. ಕಲ್ಲು ಬಂಡೆ ಜಾಗವನ್ನು ಸರ್ಕಾರ ಖಾಸಗಿ ವ್ಯಕ್ತಿಗೆ ಲೀಸ್​ಗೆ ಕೊಟ್ಟಿತ್ತು. ಕಳೆದ 20 ವರ್ಷಗಳಿಂದ ವಾಸವಿದ್ದಾರೆ ಅಂತಾ ಹೇಳುತ್ತಿದ್ದಾರೆ. 2023ರ ಸ್ಯಾಟಲೈಟ್ ಮ್ಯಾಪ್ ಪ್ರಕಾರ ಜಾಗ ಖಾಲಿ ಇತ್ತು. ಆ ಜಾಗದಲ್ಲಿ ಪಾಲಿಕೆಯವರು ಕಸ ಹಾಕುತ್ತಿದ್ದರು, ನೀರು ತುಂಬಿತ್ತು. 2025ರ ಸ್ಯಾಟಲೈಟ್ ಮ್ಯಾಪ್ ಪ್ರಕಾರ ಆ ಜಾಗದಲ್ಲಿ ಮನೆ ಕಟ್ಟಿದ್ದಾರೆ. ಆರು ತಿಂಗಳ‌ ಹಿಂದೆ ಮಣ್ಣು ತುಂಬಿ ಮನೆ ಕಟ್ಟಿದ್ದಾರೆ. ಕಾಂಗ್ರೆಸ್ ನಾಯಕ ವಾಸೀಂ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾನೆ. ಎಲ್ಲರ ಹತ್ತಿರ 4-5 ಲಕ್ಷ ಹಣ ಪಡೆದು ಅಗ್ರಿಮೆಂಟ್ ಮಾಡಿಕೊಟ್ಟಿದ್ದಾನೆ. ಈ ಎಲ್ಲಾ ಮಾಹಿತಿಗಳೂ ಅಧಿಕಾರಿಗಳ ಬಳಿ ಇದೆ ಎಂದು ಆರ್​​ ಅಶೋಕ್​ ಆರೋಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:03 pm, Tue, 30 December 25