ಅಯೊಧ್ಯೆಯ ರಾಮ ಮಂದಿರದಲ್ಲಿ 48 ದಿನಗಳ ಮಂಡಲೋತ್ಸವ ಸೇವೆ, ಹೇಗಿರುತ್ತದೆ ಈ ಆಚರಣೆ ಗೊತ್ತಾ?

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 29, 2024 | 12:11 PM

ಪ್ರತಿಷ್ಠೆ ಆದ ಬಳಿಕ ಮೂರ್ತಿಗೆ ಶಕ್ತಿ ತುಂಬುವ ಕಾರ್ಯ ನಡೆಯುತ್ತಿದೆ. ಈ ಪ್ರಕಾರವಾಗಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ, ಮಧ್ವ ಸಂಪ್ರದಾಯಗಳ ತಂತ್ರಸಾರಗಳ ಮೂಲಕವೇ 48 ದಿನಗಳ ಮಂಡಲೋತ್ಸವ ಸೇವೆ ನಡೆಯುತ್ತಿದೆ. ಇದು ಜ. 23 ರಿಂದ ಆರಂಭವಾಗಿದ್ದು ಮಾ. 10ರ ವರೆಗೆ ನಡೆಯುತ್ತದೆ. ಬೇರೆ ಬೇರೆ ಊರುಗಳಿಂದ ಬಂದಂತಹ ವಿದ್ವಾಂಸರ ಮುಂದಾಳತ್ವದಲ್ಲಿ ಕೂಷ್ಮಾಂಡ ಹೋಮ, ರಾಮತಾರಕ ಹೋಮ, ಪವಮಾನ ಹೋಮ ಇತ್ಯಾದಿ ಹೋಮಗಳು ಪ್ರತಿನಿತ್ಯವೂ ನಡೆಯುತ್ತಿದ್ದು ಆ ಮೂಲಕ ರಾಮಲಲ್ಲಾನಿಗೆ ಮೂಲಮಂತ್ರಗಳ ಪಠಣೆ ಮೂಲಕ ಕಲಶಾಭಿಷೇಕವಾಗುತ್ತಿದೆ.

ಅಯೊಧ್ಯೆ ನಗರಿಯಲ್ಲಿ ಕೆಲವು ದಿನಗಳ ಹಿಂದಷ್ಟೇ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆದಿದ್ದು ಮೋಕ್ಷದಾಯಕ ಕ್ಷೇತ್ರವಾದ ಅಯೋಧ್ಯಾಪುರಿ ಮತ್ತೆ ತನ್ನ ಪಾವಿತ್ರ್ಯವನ್ನು ಗಳಿಸಿಕೊಂಡಿದೆ. ಇದು ರಾಮ ಭಕ್ತರ ಎಷ್ಟೋ ವರ್ಷಗಳ ಕನಸು ನೆರವೇರುವ ಮೂಲಕ ಪ್ರತಿಯೊಬ್ಬರ ಮನೆ ಮನಗಳಲ್ಲಿ ಸಂತೋಷ ಮೂಡುವಂತೆ ಮಾಡಿದೆ. ಈ ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡಿದ್ದ ಉಡುಪಿಯ ಪೇಜಾವರ ಶ್ರೀಗಳು ಪ್ರತಿಷ್ಠಾಪನಾ ಕಾರ್ಯಕ್ರಮದ ಬಳಿಕ ಮುಂದಿನ ಆಚರಣೆಗಳನ್ನು ಕ್ರಮ ಬದ್ದವಾಗಿ ನಡೆಸಿಕೊಡುತ್ತಾ ಬಂದಿದ್ದಾರೆ.

ಪ್ರತಿಷ್ಠೆ ಆದ ಬಳಿಕ ಮೂರ್ತಿಗೆ ಶಕ್ತಿ ತುಂಬುವ ಕಾರ್ಯ ನಡೆಯುತ್ತಿದೆ. ಈ ಪ್ರಕಾರವಾಗಿ ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ, ಮಧ್ವ ಸಂಪ್ರದಾಯಗಳ ತಂತ್ರಸಾರಗಳ ಮೂಲಕವೇ 48 ದಿನಗಳ ಮಂಡಲೋತ್ಸವ ಸೇವೆ ನಡೆಯುತ್ತಿದೆ. ಇದು ಜ. 23 ರಿಂದ ಆರಂಭವಾಗಿದ್ದು ಮಾ. 10ರ ವರೆಗೆ ನಡೆಯುತ್ತದೆ. ಬೇರೆ ಬೇರೆ ಊರುಗಳಿಂದ ಬಂದಂತಹ ವಿದ್ವಾಂಸರ ಮುಂದಾಳತ್ವದಲ್ಲಿ ಕೂಷ್ಮಾಂಡ ಹೋಮ, ರಾಮತಾರಕ ಹೋಮ, ಪವಮಾನ ಹೋಮ ಇತ್ಯಾದಿ ಹೋಮಗಳು ಪ್ರತಿನಿತ್ಯವೂ ನಡೆಯುತ್ತಿದ್ದು ಆ ಮೂಲಕ ರಾಮಲಲ್ಲಾನಿಗೆ ಮೂಲಮಂತ್ರಗಳ ಪಠಣೆ ಮೂಲಕವೇ ಕಲಶಾಭಿಷೇಕವಾಗುತ್ತಿದೆ. ಭಜನೆ, ಪಲ್ಲಕ್ಕಿ ಉತ್ಸವ, ತುಳಸಿ ಸಂಕೀರ್ತನೆ, ಅಷ್ಟಾವಧಾನ ಸೇವೆ ಇವೆಲ್ಲವೂ ರಾಮನ ವೈಭವತೆಯನ್ನು ಮತ್ತು ಆತನ ಶಕ್ತಿಯನ್ನು ತೋರ್ಪಡಿಸಲು ಹಾಗೂ ಆತನ ಪ್ರಸನ್ನತೆಗೋಸ್ಕರ ಮಾಡುವಂತಹ ಕಾರ್ಯಕ್ರಮಗಳಾಗಿವೆ. ಇದು ಒಂದು ರೀತಿಯ ಸೇವೆಯಾಗಿದ್ದು ರಾಮಲಲ್ಲಾನಿಗೆ ಇದೇ ರೀತಿಯಲ್ಲಿ ವಿಭಿನ್ನ ಸೇವೆಗಳು ಮಾರ್ಚ್ 10ರ ವರೆಗೂ ನಡೆಯಲಿಕ್ಕಿದೆ.

ಇದನ್ನೂ ಓದಿ: ವಿಷ್ಣು ಮಂತ್ರ ಪಠಣೆ ಮಾಡುವಾಗ ತಪ್ಪದೇ ತುಳಸಿಯನ್ನು ಬಳಸಿ, ಪ್ರಯೋಜನಗಳು ಏನಿದೆ ಗೊತ್ತಾ?

ರಾಮನಂಗಳದಲ್ಲಿ ವಾದಿರಾಜರ ತುಳಸಿ ಸಂಕೀರ್ತನೆ

ಉಡುಪಿಯ ಯುಗಪುರುಷರೆಂದೇ ಪ್ರಸಿದ್ಧರಾದ ಶ್ರೀವಾದಿರಾಜರು ರಚಿಸಿದಂತಹ ತುಳಸಿ ಸಂಕೀರ್ತನೆಯನ್ನು ಪೇಜಾವರ ವಿದ್ಯಾಪೀಠದ ಶಿಷ್ಯರು ಜ. 27ರಂದು ರಾಮನಂಗಳದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಆ ಮೂಲಕ ಶತಮಾನಗಳಿಂದ ತುಳುನಾಡಿನಲ್ಲಿ ಚಾಲ್ತಿಯಲ್ಲಿರುವ ಪದ್ದತಿಯನ್ನು ಅಯೋಧ್ಯಾ ನಗರಿಗೆ ಕೊಂಡೊಯ್ದಿದ್ದಾರೆ. ಇದು ಕೃಷ್ಣಭಕ್ತರಿಗೆ ಮಾತ್ರವಲ್ಲ, ಇಡೀ ಕರ್ನಾಟಕ ಹೆಮ್ಮೆ ಪಡುವ ಸಂಗತಿಯಾಗಿದೆ.

ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ 48 ದಿನಗಳ ಮಂಡಲೋತ್ಸವ ಸೇವೆ ನಡೆಯುತ್ತಿದ್ದು ಆ ಪ್ರಯುಕ್ತ ರಾಮಮಂದಿರದ ಅಂಗಳದಲ್ಲಿಯೇ ತಾತ್ಕಾಲಿಕವಾಗಿ ನಿರ್ಮಿಸಿದ ವಸಂತ ಮಂಟಪದಲ್ಲಿ ಶ್ರೀರಾಮ ದೇವರ ಉತ್ಸವ ಮೂರ್ತಿಯನ್ನಿಟ್ಟು ವಸಂತೋತ್ಸವ ನಡೆಸಿ ಆ ಬಳಿಕ ಶ್ರೀಗಳ ವಿದ್ಯಾರ್ಥಿಗಳು ತಾಳ ಹಿಡಿದು ಶ್ರೀವಾದಿರಾಜರ ತುಳಸಿ ಸಂಕೀರ್ತನೆಯನ್ನು ಹಾಡಿ ನಲಿದು ರಾಮನನ್ನು ನೆನೆದಿದ್ದಾರೆ. ಇದರ ವಿಡಿಯೋ ಕೂಡ ಎಲ್ಲೆಡೆ ಹರಿದಾಡುತ್ತಿದ್ದು ಅಂತಹ ಚಳಿಯನ್ನು ಲೆಕ್ಕಿಸದೆಯೇ ನಡೆಯುತ್ತಿರುವ ಕಾರ್ಯಕ್ರಮಗಳು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಅವರ ಭಕ್ತಿಗೆ ಎಲ್ಲರೂ ತಲೆಬಾಗಿದ್ದಾರೆ.

ಮಾಹಿತಿ: ಶ್ರೀನಿಧಿ ಉಪಾಧ್ಯಾಯ ಉಪ್ಪಿನಗಂಡಿ

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ