
ಗಣೇಶ ಚತುರ್ಥಿಯ ಸಂಭ್ರಮ ಎಲ್ಲೆಡೆ ಕಳೆಗಟ್ಟಿದ್ದು, ಮನೆ-ಮನಗಳಲ್ಲಿ ಹಾಗೂ ಗ್ರಾಮ-ನಗರಗಳ ಮಂಟಪಗಳಲ್ಲಿ ಗಣಪಯ್ಯನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅತ್ಯಂತ ವಿಜೃಂಭಣೆಯಿಂದ ಪೂಜಿಸಲಾಗುತ್ತಿದೆ. ವಿಘ್ನನಿವಾರಕನಿಗೆ ಅತ್ಯಂತ ಪ್ರಿಯವಾದ ವಾಹನ ಮೂಷಿಕ (ಇಲಿ). ಗಣೇಶೋತ್ಸವದ ಈ ಪವಿತ್ರ ದಿನಗಳಲ್ಲಿ ಇಲಿಯನ್ನು ನೋಡುವುದು ಅಥವಾ ಮನೆಯಲ್ಲಿ ಇದ್ದಕ್ಕಿದ್ದಂತೆ ಇಲಿ ಕಾಣಿಸಿಕೊಳ್ಳುವುದು ಶ್ರೇಷ್ಠ ಹಾಗೂ ಶುಭ ಸಂಕೇತವೆಂದು ಜ್ಯೋತಿಷ್ಯ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಸಾಮಾನ್ಯವಾಗಿ ಮನೆಗಳಲ್ಲಿ ಇಲಿಗಳಿದ್ದರೆ ಅವು ಪ್ರತಿದಿನ ಕಾಣ ಸಿಗುವುದು ಸಹಜ. ಆದರೆ ಮನೆಯಲ್ಲಿ ಇಲಿಗಳೇ ಇಲ್ಲದಿರುವಾಗ, ಗಣೇಶ ಚತುರ್ಥಿಯ ದಿನದಂದು ಅಥವಾ ಹಬ್ಬದ ಒಂಬತ್ತು ದಿನಗಳ ಅವಧಿಯಲ್ಲಿ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಇಲಿ ಪ್ರತ್ಯಕ್ಷವಾದರೆ ಅದನ್ನು ಸಾಕ್ಷಾತ್ ವಿನಾಯಕನ ಆಶೀರ್ವಾದವೆಂದೇ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮನಸ್ಸಿನಲ್ಲಿ ಅಂದುಕೊಂಡ ಆಸೆಗಳು, ಕಾರ್ಯಗಳು ಅತ್ಯಂತ ಶೀಘ್ರವಾಗಿ ಈಡೇರುತ್ತವೆ ಎಂಬ ದೃಢ ನಂಬಿಕೆಯಿದೆ.
ಇದನ್ನೂ ಓದಿ: ಗಣೇಶ ಮೂರ್ತಿಯನ್ನು ಎಷ್ಟು ದಿನ ಇಡುವುದು ಶುಭ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ
ಗಣೇಶ ಚತುರ್ಥಿಯಿಂದ ತೊಡಗಿ ಒಂಬತ್ತು ದಿನಗಳ ಕಾಲ ವಿಘ್ನೇಶ್ವರನನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳಲ್ಲಿ ಯಾವ ದಿನದಲ್ಲಾದರೂ ಸರಿ, ಇಲಿ ನಿಮ್ಮ ಕಣ್ಣಿಗೆ ಬಿದ್ದರೆ ಅದು ಮಹಾ ಅದೃಷ್ಟದ ಸಂಕೇತವಾಗಿದೆ. ಗಣೇಶನ ಕೃಪಾಕಟಾಕ್ಷ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಪಂಡಿತರು ತಿಳಿಸುತ್ತಾರೆ.
ಕೆಲವರಿಗೆ ಪ್ರತ್ಯಕ್ಷವಾಗಿ ಇಲಿ ಕಾಣಿಸದಿದ್ದರೂ, ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಅಥವಾ ಹಬ್ಬದ ದಿನಗಳಲ್ಲಿ ಕನಸಿನಲ್ಲಿ ಇಲಿ ಪ್ರತ್ಯಕ್ಷವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಬ್ಬದ ವೇಳೆ ಕನಸಿನಲ್ಲಿ ಇಲಿಯನ್ನು ಕಾಣುವುದು ಸಹ ಅತ್ಯಂತ ಶುಭ ಶಕುನವಾಗಿದೆ. ಇದರಿಂದ ನೀವು ಕೈಗೊಳ್ಳುವ ಪ್ರತಿಯೊಂದು ಕಾರ್ಯದಲ್ಲೂ ಜಯ ಲಭಿಸುತ್ತದೆ, ಕಷ್ಟಗಳು ನಿವಾರಣೆಯಾಗಿ ಆರ್ಥಿಕ ಹಾಗೂ ಕೌಟುಂಬಿಕ ಅಭಿವೃದ್ಧಿ ಸಿದ್ಧಿಸುತ್ತದೆ ಎಂದರ್ಥ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ