
ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಪವಿತ್ರ ಪ್ರೀತಿ ಮತ್ತು ರಕ್ಷಣೆಯ ಬಂಧವನ್ನು ಆಚರಿಸುವ ಸುಂದರ ಹಬ್ಬ. ಈ ಪವಿತ್ರ ದಿನದಂದು ಆಚರಿಸಲಾಗುವ ಪ್ರತಿಯೊಂದು ಶಾಸ್ತ್ರೀಯ ನಿಯಮಕ್ಕೂ ತನ್ನದೇ ಆದ ಪೂಜ್ಯ ಸ್ಥಾನವಿದೆ. ಹಬ್ಬದ ಸಂಪೂರ್ಣ ಶುಭ ಫಲಗಳು ದೊರೆಯಲು ಮತ್ತು ಸಹೋದರನಿಗೆ ಸಕಾರಾತ್ಮಕ ಶಕ್ತಿ ಸಿಗಲು ಈ ದಿನ ಕೆಲವು ಸಂಗತಿಗಳನ್ನು ನೆನಪಿನಲ್ಲಿಡುವುದು ಅತ್ಯಂತ ಅವಶ್ಯಕವಾಗಿದೆ.
ರಾಖಿ ಕಟ್ಟುವಾಗ ಕೆಲವು ಮುಖ್ಯ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು. ಸಹೋದರನಿಗೆ ರಾಖಿ ಕಟ್ಟುವಾಗ ಎಂದಿಗೂ ದಕ್ಷಿಣ ದಿಕ್ಕಿಗೆ ಮುಖ ಮಾಡಿರಬಾರದು. ಯಾವುದೇ ಕಾರಣಕ್ಕೂ ಅಶುದ್ಧ ಅಥವಾ ಕೊಳಕು ಸ್ಥಳಗಳಲ್ಲಿ ಈ ಪವಿತ್ರ ಆಚರಣೆಯನ್ನು ಮಾಡಬಾರದು. ಮುಖ್ಯವಾಗಿ, ಭದ್ರಕಾಲ ಮತ್ತು ರಾಹು ಕಾಲದಂತಹ ಅಶುಭ ಮುಹೂರ್ತಗಳಲ್ಲಿ ರಕ್ಷಾ ಬಂಧನವನ್ನು ಆಚರಿಸಬಾರದು. ಜೊತೆಗೆ ಕಪ್ಪು ಬಣ್ಣದ ಅಥವಾ ಅಶುಭ ಚಿಹ್ನೆಗಳಿರುವ ರಾಖಿಗಳನ್ನು ಬಳಸಬಾರದು, ರಾಖಿಯನ್ನು ಎಡಗೈಗೆ ಕಟ್ಟಬಾರದು ಮತ್ತು ಸಹೋದರನಿಗೆ ಚೂಪಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು.
ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಅಷ್ಟಲಕ್ಷ್ಮಿ ರಾಜಯೋಗ; ಈ 4 ರಾಶಿಗೆ ಒಲಿಯಲಿದೆ ಅಪಾರ ಧನಸಂಪತ್ತು!
ಸಹೋದರನಿಗೆ ರಾಖಿ ಕಟ್ಟುವ ಮುನ್ನ ಪ್ರಥಮ ಪೂಜಿತ ವಿಘ್ನನಿವಾರಕ ಗಣೇಶನಿಗೆ ಹಾಗೂ ಮನೆ ದೇವರಿಗೆ ರಾಖಿಯನ್ನು ಅರ್ಪಿಸಿ ಆಶೀರ್ವಾದ ಪಡೆಯುವುದು ಶಾಸ್ತ್ರೀಯ ನಿಯಮ. ರಾಖಿಯನ್ನು ಆಯ್ಕೆ ಮಾಡುವಾಗ ಕಪ್ಪು ಬಣ್ಣವನ್ನು ಬಿಟ್ಟು ಮಂಗಳಕರವಾದ ಹಳದಿ ಅಥವಾ ಕೇಸರಿ ಬಣ್ಣದ ರಾಖಿಗಳನ್ನು ಆರಿಸಿಕೊಳ್ಳಬೇಕು. ಅದರಲ್ಲೂ ‘ಓಂ’ (ॐ) ಅಥವಾ ‘ಸ್ವಸ್ತಿಕ’ದಂತಹ ಪವಿತ್ರ ಧಾರ್ಮಿಕ ಚಿಹ್ನೆಗಳನ್ನು ಹೊಂದಿರುವ ರಾಖಿಗಳನ್ನು ಧರಿಸುವುದು ಅತ್ಯಂತ ಶುಭಕರ ಹಾಗೂ ಸಹೋದರನಿಗೆ ಸಕಾರಾತ್ಮಕತೆಯನ್ನು ನೀಡುತ್ತದೆ.
ರಾಖಿ ಕಟ್ಟುವ ಸಮಯದಲ್ಲಿ ಸಹೋದರನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ರಾಖಿ ಕಟ್ಟುವ ಮುನ್ನ ಸಹೋದರನಿಗೆ ತಲೆಗೆ ಅಕ್ಷತೆ ಹಾಕಿ, ಹಣೆಗೆ ತಿಲಕವಿಟ್ಟು ಪ್ರೀತಿಯಿಂದ ಆರತಿ ಬೆಳಗಬೇಕು. ತದನಂತರ ಸಹೋದರನ ಬಲ ಕೈಗೆ ಪ್ರೀತಿ ಮತ್ತು ನಂಬಿಕೆಯಿಂದ ರಾಖಿಯನ್ನು ಕಟ್ಟಬೇಕು. ಈ ಶುಭ ದಿನದಂದು ಸಹೋದರ-ಸಹೋದರಿಯರು ಒಟ್ಟಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುವುದರಿಂದ ಬಂಧ ಇನ್ನಷ್ಟು ಗಟ್ಟಿಯಾಗುತ್ತದೆ ಮತ್ತು ಜೀವನದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ