
ಗಣೇಶ ಉತ್ಸವದ ಸಮಯದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಗಣಪತಿ ಪೂಜೆ ಪುರಸ್ಕಾರಗಳು ಸಡಗರದಿಂದ ನಡೆಯುತ್ತವೆ. ಸಾಮಾನ್ಯವಾಗಿ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅನಂತ ಚತುರ್ದಶಿಯಂದು ವಿಸರ್ಜನೆ ಮಾಡಲಾಗುತ್ತದೆ. ಆದರೆ, ಹಲವರು ತಮ್ಮ ಮನೆಗಳಲ್ಲಿ ಎಂದಿಗೂ ವಿಸರ್ಜಿಸದ ಬೆಳ್ಳಿಯ ಗಣೇಶ ಮೂರ್ತಿಯನ್ನು ಇಟ್ಟು ನಿತ್ಯವೂ ಪೂಜಿಸುತ್ತಾರೆ. ಆದರೆ ಬೆಳ್ಳಿಯ ಗಣೇಶನ ಮೂರ್ತಿ ಇಡುವುದು ಶುಭವೇ ಎಂಬ ಗೊಂದಲ ಸಾಕಷ್ಟು ಜನರಲ್ಲಿದೆ. ಇದಕ್ಕೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.
ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬೆಳ್ಳಿಯ ಗಣೇಶನ ಮೂರ್ತಿ ಇಡುವುದು ಅತ್ಯಂತ ಶುಭ ಹಾಗೂ ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ. ಚಂದ್ರನಿಗೆ ಸಂಬಂಧಿಸಿದ ಬೆಳ್ಳಿಯನ್ನು ಪವಿತ್ರ ಹಾಗೂ ತಂಪು ನೀಡುವ ಲೋಹವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಬೆಳ್ಳಿಯ ಗಣೇಶನನ್ನು ಇಡುವುದರಿಂದ ಆರ್ಥಿಕ ಲಾಭ ಹೆಚ್ಚಾಗಿ, ಮನೆಗೆ ಲಕ್ಷ್ಮಿಯ ಆಗಮನವಾಗುತ್ತದೆ. ಜೊತೆಗೆ ಬೆಳ್ಳಿ ಗಣೇಶನ ನಿತ್ಯ ಪೂಜೆಯಿಂದ ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗುತ್ತದೆ ಹಾಗೂ ವೃತ್ತಿಜೀವನದಲ್ಲಿ ಅಭಿವೃದ್ಧಿಗೆ ಹೊಸ ದಾರಿಗಳು ತೆರೆದುಕೊಳ್ಳುತ್ತವೆ.
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ನಿಂತಿರುವ ಭಂಗಿಯಲ್ಲಿರುವ ಬೆಳ್ಳಿ ಗಣೇಶನನ್ನು ಪೂಜಿಸುವುದರಿಂದ ಪದೇ ಪದೇ ಎದುರಾಗುವ ಆರ್ಥಿಕ ನಷ್ಟ ಹಾಗೂ ಸಾಲದ ಹೊರೆಯಿಂದ ಮುಕ್ತಿ ಸಿಗುತ್ತದೆ. ಬೆಳ್ಳಿ ಮೂರ್ತಿಯು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರಮಾಡಿ, ಕುಟುಂಬದ ಸದಸ್ಯರ ನಡುವಿನ ಕಿರಿಕಿರಿ ಹಾಗೂ ಸಂಘರ್ಷಗಳನ್ನು ಕೊನೆಗೊಳಿಸಿ ಸದಾ ಶಾಂತಿ ನೆಲೆಸುವಂತೆ ಮಾಡುತ್ತದೆ.
ಇದನ್ನೂ ಓದಿ: ಗಣೇಶ ಮೂರ್ತಿಯನ್ನು ಎಷ್ಟು ದಿನ ಇಡುವುದು ಶುಭ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ
ಮೂರ್ತಿಯನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಅಥವಾ ಪೂಜಾ ಕೋಣೆಯಲ್ಲಿ ಉತ್ತರ ಅಥವಾ ಪೂರ್ವ ದಿಕ್ಕಿಗೆ ಎದುರಾಗಿ ಸ್ಥಾಪಿಸುವುದು ಶ್ರೇಷ್ಠ. ಮನೆಗೆ ಯಾವಾಗಲೂ ಎಡಮುರಿ ಸೊಂಡಿಲು (ಎಡಕ್ಕೆ ಬಾಗಿದ ಸೊಂಡಿಲು) ಇರುವ ಗಣೇಶನ ಮೂರ್ತಿಯನ್ನೇ ಆಯ್ಕೆ ಮಾಡಬೇಕು, ಏಕೆಂದರೆ ಬಲಮುರಿ ಸೊಂಡಿಲ ಗಣೇಶನಿಗೆ ಕಟ್ಟುನಿಟ್ಟಾದ ಪೂಜಾ ನಿಯಮಗಳಿರುತ್ತವೆ.
ಗಣೇಶನ ಮೂರ್ತಿಯನ್ನು ಸ್ನಾನಗೃಹದ ಹತ್ತಿರ, ಮೆಟ್ಟಿಲುಗಳ ಕೆಳಗೆ ಅಥವಾ ಮಲಗುವ ಕೋಣೆಯಲ್ಲಿ ಎಂದಿಗೂ ಇಡಬಾರದು. ಆದರೆ ವ್ಯಾಪಾರದಲ್ಲಿ ಪ್ರಗತಿ ಬಯಸುವವರು ಅಂಗಡಿಯ ನಗದು ಪೆಟ್ಟಿಗೆ ಅಥವಾ ಮನೆಯ ತಿಜೋರಿಯಲ್ಲಿ ಇಡಬಹುದು. ಮನೆಯಲ್ಲಿ ಬೆಳ್ಳಿಯ ಮೂರ್ತಿಯನ್ನಿಟ್ಟರೆ ಪ್ರತಿದಿನ ಶುಚಿರ್ಭೂತರಾಗಿ ವಿಧಿವಿಧಾನಗಳಂತೆ ಪೂಜಿಸಿ, ಮೋದಕ ಅಥವಾ ಲಡ್ಡು ನೈವೇದ್ಯ ಅರ್ಪಿಸುವುದು ಕಡ್ಡಾಯವಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ