AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Veeranjaneya: ಆಂಜನೇಯ ಸ್ವಾಮಿ ವೀರಾಂಜನೇಯನಾದ ಕಥೆ! ಸ್ಕಂದ ಪುರಾಣದಲ್ಲಿ ಬರುವ ಗುರುಪರಂಪರೆ ಏನು?

ಸಾಮಾನ್ಯವಾಗಿ ಗುರುವಿನ ಆಶೀರ್ವಾದ, ಗುರುಬಲ ಇದ್ದರೆ ಗ್ರಹ ಅಥವಾ ದೇವತೆಯ ದೋಷವಿದ್ದರೂ ಅದು ಪರಿಣಾಮ ಬೀರುವುದಿಲ್ಲ. ಗುರುವಿನ ಶಕ್ತಿಯೇ ಎಲ್ಲಾ ದೇವತೆಗಳ ಮತ್ತು ಗ್ರಹಗಳ ಶಕ್ತಿಗಿಂತ ಮಿಗಿಲು ಎಂದು ಕೇಳಿರುತ್ತೇವೆ. ಗುರು ಪರಂಪರೆಯು ಕೇವಲ ಮಾನವರಿಗೆ ಸೀಮಿತವಾದದ್ದಲ್ಲ, ಸಮಸ್ತ ದೇವತೆಗಳಿಗೆ ಮತ್ತು ಗ್ರಹಗಳಿಗೆ ಗುರು ಪರಂಪರೆಯ ಬಗ್ಗೆ ಗೌರವವಿದೆ. ಒಮ್ಮೆ ಪಾರ್ವತಿಯು ಶಿವನನ್ನು ಕುರಿತು, ‘ಹರ ಮತ್ತು ಗುರು ಇವರಲ್ಲಿ ಯಾರು ಶ್ರೇಷ್ಠ?’ ಎಂದು ಕೇಳಿದಾಗ ಶಿವನು, ‘ಹರನಿಗಿಂತ ಗುರುವೇ ಶ್ರೇಷ್ಠ. ಹರ ಮುನಿದರೂ ಗುರು ಕಾಯ್ವನು’ […]

Veeranjaneya: ಆಂಜನೇಯ ಸ್ವಾಮಿ ವೀರಾಂಜನೇಯನಾದ ಕಥೆ! ಸ್ಕಂದ ಪುರಾಣದಲ್ಲಿ ಬರುವ ಗುರುಪರಂಪರೆ ಏನು?
ಆಂಜನೇಯ ಸ್ವಾಮಿ ವೀರಾಂಜನೇಯನಾದ ಕಥೆ! ಸ್ಕಂದ ಪುರಾಣದಲ್ಲಿ ಬರುವ ಗುರುಪರಂಪರೆ ಏನು?
TV9 Web
| Updated By: ಸಾಧು ಶ್ರೀನಾಥ್​|

Updated on:Jan 29, 2022 | 6:36 AM

Share

ಸಾಮಾನ್ಯವಾಗಿ ಗುರುವಿನ ಆಶೀರ್ವಾದ, ಗುರುಬಲ ಇದ್ದರೆ ಗ್ರಹ ಅಥವಾ ದೇವತೆಯ ದೋಷವಿದ್ದರೂ ಅದು ಪರಿಣಾಮ ಬೀರುವುದಿಲ್ಲ. ಗುರುವಿನ ಶಕ್ತಿಯೇ ಎಲ್ಲಾ ದೇವತೆಗಳ ಮತ್ತು ಗ್ರಹಗಳ ಶಕ್ತಿಗಿಂತ ಮಿಗಿಲು ಎಂದು ಕೇಳಿರುತ್ತೇವೆ. ಗುರು ಪರಂಪರೆಯು ಕೇವಲ ಮಾನವರಿಗೆ ಸೀಮಿತವಾದದ್ದಲ್ಲ, ಸಮಸ್ತ ದೇವತೆಗಳಿಗೆ ಮತ್ತು ಗ್ರಹಗಳಿಗೆ ಗುರು ಪರಂಪರೆಯ ಬಗ್ಗೆ ಗೌರವವಿದೆ. ಒಮ್ಮೆ ಪಾರ್ವತಿಯು ಶಿವನನ್ನು ಕುರಿತು, ‘ಹರ ಮತ್ತು ಗುರು ಇವರಲ್ಲಿ ಯಾರು ಶ್ರೇಷ್ಠ?’ ಎಂದು ಕೇಳಿದಾಗ ಶಿವನು, ‘ಹರನಿಗಿಂತ ಗುರುವೇ ಶ್ರೇಷ್ಠ. ಹರ ಮುನಿದರೂ ಗುರು ಕಾಯ್ವನು’ ಎನ್ನುವನು. ‘ಇದು ಹೇಗೆ? ಭೂಲೋಕದಲ್ಲಿ ಇದನ್ನು ಸಿದ್ಧ ಮಾಡಿ ತೋರಿಸು’ ಎಂದು ಪಾರ್ವತಿಯು ಅಲ್ಲೇ ಇದ್ದ ದೇವರ್ಷಿ ನಾರದ ಮುನಿಗೆ ಆದೇಶ ನೀಡಿದಳು. ಭೂಲೋಕದಲ್ಲಿ ಆಗ ತ್ರೇತಾಯುಗದ ಅಂತ್ಯದ ಸಮಯ. ಶ್ರೀರಾಮನು ರಾವಣನನ್ನು ಮಣಿಸಿ ಅಯೋಧ್ಯೆಗೆ ಮರಳಿರುತ್ತಾನೆ. ಯುದ್ಧ ಸಂಪೂರ್ಣಗೊಂಡ ಸಂತಸಕ್ಕೆ ಔತಣಕೂಟ ಏರ್ಪಡಿಸಿ, ಯುದ್ಧದಲ್ಲಿ ಭಾಗಿಯಾದ ಎಲ್ಲ ವೀರರಿಗೂ ಅವರು ಬೇಡಿದ ಪದಾರ್ಥಗಳನ್ನು ನೀಡುತ್ತಿರುತ್ತಾನೆ. ಆದರೆ ವಾಯುಪುತ್ರ (veeranjaneya) ಮಾತ್ರ ಏನು ಬೇಡಬೇಕೆಂದು ತೋಚದೆ ಮೌನವಾಗಿ ಒಂದೆಡೆ ಕುಳಿತಿರುತ್ತಾನೆ (guru parampara).

ಕೈಲಾಸದಿಂದ ಅಲ್ಲಿಗೆ ನೇರವಾಗಿ ತೆರಳುವ ನಾರದರು ವಾಯುಪುತ್ರನನ್ನು ಕುರಿತು ‘ನೀನು ನಿರುಪಯುಕ್ತವಾದ ಪದಾರ್ಥಗಳನ್ನು ಕೇಳದೆ ಅಮೂಲ್ಯವಾದ ಮುಕ್ತಿಮಣಿಯನ್ನು ಬೇಡು’ ಎನ್ನುವರು. ಶ್ರೀರಾಮನು ವಾಯುಪುತ್ರನನ್ನು ಕರೆದು ತನ್ನ ಕೇಯೂರ ಹಾರವನ್ನು ನೀಡುವನು. ಅದನ್ನು ನಿರಾಕರಿಸುವ ವಾಯುಪುತ್ರ ಕೈಮುಗಿದು ವಿನೀತನಾಗಿ, ತನಗೆ ಮುಕ್ತಿಮಣಿಯನ್ನು ನೀಡಲು ಕೇಳಿಕೊಳ್ಳುವನು. ಆಗ ಶ್ರೀರಾಮನು ‘ನಾನು ಈ ಅವತಾರದಲ್ಲಿ ಮಾನವನಾಗಿ ಜನಿಸಿರುವುದರಿಂದ ಮುಕ್ತಿ ಕರುಣಿಸಲು ಸಾಧ್ಯವಿಲ್ಲ’ ಎಂದು ತಿಳಿಸಿ ವಸಿಷ್ಠ ಮಹರ್ಷಿಗಳ ಬಳಿಗೆ ವಾಯುಪುತ್ರನನ್ನು ಕಳುಹಿಸುವನು. ಹನುಮನು ವಸಿಷ್ಠರ ಬಳಿ ಮುಕ್ತಿಮಣಿಯನ್ನು ಬೇಡುವನು. ವಸಿಷ್ಠರು ಮಾರುತಿಯನ್ನು ಪಂಪಾವರ ಕ್ಷೇತ್ರದ ಹೇಮಕೂಟಕ್ಕೆ ತೆರಳಿ (ಇಂದಿನ ಹಂಪಿ ಪ್ರದೇಶ) ಅಲ್ಲಿ ತುಂಗಭದ್ರಾ ನದಿಯ ದಡದಲ್ಲಿ ವೀರಭದ್ರನನ್ನು ಕುರಿತು ತಪಸ್ಸನ್ನು ಆಚರಿಸಲು ಸೂಚಿಸುವರು.

ವಸಿಷ್ಠರ ಆಣತಿಯಂತೆ ವಾಯುಪುತ್ರ ತುಂಗಭದ್ರಾ ನದಿಯ ದಂಡೆಯ ಮೇಲೆ ಉಗ್ರವಾದ ತಪಸ್ಸನ್ನಾಚರಿಸಿ, ಶ್ರೀ ವೀರಭದ್ರನನ್ನು ಒಲಿಸಿಕೊಂಡು ಅವನಿಂದ ಮುಕ್ತಿಮಣಿಯನ್ನು ಬೇಡುವನು. ಆಗ ವೀರಭದ್ರನು ವಾಯುಪುತ್ರನ ಕರದಲ್ಲಿ ಇಷ್ಟಲಿಂಗವನ್ನಿಟ್ಟು ‘ಇದು ಸನಾತನ ಧರ್ಮದ ಮುಕ್ತಿಮಣಿ ಮತ್ತು ಪರಮ ರಹಸ್ಯ. ಈ ಇಷ್ಟಲಿಂಗವನ್ನು ದಿನದ ಮೂರು ಸಮಯದಲ್ಲಿ ತಪ್ಪದೇ ಪೂಜಿಸಬೇಕು’ ಎಂದು ಆದೇಶ ನೀಡುವನು. ಗುರುವಿನ ಆದೇಶ ಪಡೆದ ವಾಯುಪುತ್ರ ಪ್ರತಿದಿನವೂ ತಪ್ಪದೆ ಮೂರು ಬಾರಿ ಇಷ್ಟಲಿಂಗ ಸಾಧನೆಯಲ್ಲಿ ನಿರತನಾದನು.

ಒಮ್ಮೆ ವಾಯುಪುತ್ರ ಗೌತಮ ಋಷಿಗಳ ಆಶ್ರಮದಲ್ಲಿದ್ದಾಗ, ಗೌತಮರ ಇಷ್ಟಲಿಂಗವು ಕಾಣೆಯಾಗುವುದು. ಗೌತಮರು ಶಿವನ ಮೇಲಣ ನಿಷ್ಠೆಯಿಂದ ಪ್ರಾಣ ತ್ಯಜಿಸಲು ನಿರ್ಧರಿಸಿ ಶಿರಚ್ಛೇದನ ಮಾಡಿಕೊಳ್ಳಲು ಅನುವಾಗಲು, ಅಲ್ಲಿಗೆ ಪಾರ್ವತೀ ಸಹಿತನಾಗಿ ಬಂದ ಪರಮೇಶ್ವರನು, ಗೌತಮರಿಗೆ ಮತ್ತೊಂದು ಇಷ್ಟಲಿಂಗವನ್ನು ಕರುಣಿಸಿ ಆಶೀರ್ವದಿಸುವನು. ಅಲ್ಲಿ ಭಾವಪರವಶನಾಗಿ ವಾಯುಪುತ್ರ ಹಾಡುತ್ತಿದ್ದ ಭಕ್ತಿಗೀತೆಗಳನ್ನು ಕೇಳಿ ಆನಂದಿಸುವರು.

ಹೀಗೆ ಭಕ್ತಿಗೀತೆಗಳನ್ನು ಹಾಡುತ್ತಾ ತಮ್ಮನ್ನು ವಾಯುಮಾರ್ಗವಾಗಿ ಕೈಲಾಸಕ್ಕೆ ತಲುಪಿಸು ಎಂದು ವಾಯುಪುತ್ರನಿಗೆ ಆದೇಶಿಸಿದರು. ವಾಯುಪುತ್ರ ಅವರನ್ನು ತನ್ನ ಭುಜಗಳ ಮೇಲೆ ಕುಳ್ಳಿರಿಸಿಕೊಂಡು ಕೈಲಾಸದತ್ತ ತೆರಳುತ್ತಿರಲು ಸಂಜೆಯಾಗುವುದು. ಆಗ ವಾಯುಪುತ್ರ ಶಿವಪಾರ್ವತಿಯನ್ನು ಇಳಿಯಲು ಸೂಚಿಸಿ, ತಾನು ಇಷ್ಟಲಿಂಗದ ಪೂಜೆಗೆ ತೆರಳಬೇಕು ಎಂದು ಆಜ್ಞೆಯನ್ನು ಬೇಡುವನು.

ಆಗ ಶಿವನು ‘ನಾನು ನಿನ್ನ ಎದುರೇ ಇರುವಾಗ ಲಿಂಗ ಪೂಜೆ ಏತಕ್ಕೆ?’ ಎನ್ನಲು ವಾಯುಪುತ್ರ, ‘ಇದು ನನ್ನ ಗುರುವಿನ ಆಜ್ಞೆ! ಮೀರಲಾರೆ’ ಎಂದು ನುಡಿದು ಶಿವನಾಜ್ಞೆಯನ್ನು ಪಡೆದು, ಹೇಮಕೂಟದ ಸಮೀಪ ತುಂಗಭದ್ರಾ ನದಿಯಲ್ಲಿ ಮಿಂದೇಳಿ ಶಿವ ಪೂಜೆಗೆ ಸಜ್ಜಾಗುವನು. ಆಗ ವಾಯುಪುತ್ರನನ್ನು ಪರೀಕ್ಷಿಸಲು ಶಿವನು ವಾಯುಪುತ್ರನ ಇಷ್ಟಲಿಂಗವನ್ನೇ ಮಾಯ ಮಾಡುವನು. ಇದರಿಂದ ವಿಚಲಿತನಾದ ವಾಯುಪುತ್ರ ನದಿಯ ನೀರನ್ನೆಲ್ಲಾ ಬಗೆದು ಇಷ್ಟಲಿಂಗವನ್ನು ಹುಡುಕುವನು. ಆದರೂ ಲಿಂಗವು ದೊರೆಯುವುದಿಲ್ಲ. ಆಗ ದುಃಖಿತನಾದ ವಾಯುಪುತ್ರ ತನ್ನ ಗುರುವಾದ ವೀರಭದ್ರನನ್ನು ನೆನೆಯಲು ವೀರಭದ್ರನು ಪ್ರತ್ಯಕ್ಷನಾಗುವನು.

ವಾಯುಪುತ್ರನು, ‘ಶಿವನಿಗೆ ಲಿಂಗಪೂಜೆ ಮಾಡಿ ಬರುವುದಾಗಿ ಮಾತುಕೊಟ್ಟಿರುವೆ. ಲಿಂಗವಿಲ್ಲದೆ ಶಿವನಿಗೆ ಹೇಗೆ ಮುಖ ತೋರಿಸಲಿ?’ ಎನ್ನಲು, ಪ್ರತ್ಯಕ್ಷ ಪರಶಿವನೇ ಎದುರಿಗಿದ್ದರೂ ತನ್ನ ಮಾತಿನಂತೆ ಇಷ್ಟಲಿಂಗವನ್ನು ಪೂಜಿಸಲು ಬಂದ ವಾಯುಪುತ್ರನ ಗುರುಭಕ್ತಿಗೆ ಮೆಚ್ಚಿ ಒಲಿದ ವೀರಭದ್ರನು, “ನಿನ್ನ ಒಂದೊಂದು ರೋಮವೂ ಲಿಂಗಮಯವಾಗಲಿ. ವಾನರ ಕುಲದಲ್ಲಿ ಜನಿಸಿದರೂ ನೀನು ಸರ್ವತ್ರ ಭೂಲೋಕದಲ್ಲಿ ಪೂಜೆಗೊಳ್ಳುವೆ. ಇನ್ನು ಮುಂದೆ ಗುರು-ಶಿಷ್ಯ ಭಕ್ತಿಗೆ ಸಾಕ್ಷಿಯಾಗಿ ‘ವೀರಾಂಜನೇಯ’ ಎಂದು ಪ್ರಸಿದ್ಧಿಗೊಳ್ಳುವೆ” ಎಂದು ವರವನ್ನು ನೀಡಿದನು.

ಶ್ರೀ ವೀರಭದ್ರನಿಂದ ಮುಕ್ತಿಮಣಿಯನ್ನು ಪಡೆದ ವಾಯುಪುತ್ರ ಅಂದಿನಿಂದ ‘ವೀರಾಂಜನೇಯ’ ಎಂದು ಪ್ರಸಿದ್ಧಿ ಹೊಂದಿ ಪೂಜನೀಯನಾದನು. ವಾಯುಪುತ್ರ ತಪಸ್ಸು ಮಾಡಿದ ಪಂಪಾವರ ಕ್ಷೇತ್ರದಲ್ಲಿ ವಾಯುಪುತ್ರನ 108 ಅಡಿ ಲೋಹದ ವಿಗ್ರಹ ನಿರ್ಮಿಸುವ ಕಾರ್ಯವು, ಶ್ರೀ ವೀರಭದ್ರ ಪ್ರಚಾರ ಸಮಿತಿ ಮತ್ತು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ನಡೆಯುತ್ತಿದೆ.

ವಾಯುಪುತ್ರ, ವಸಿಷ್ಠರು, ಗೌತಮಮುನಿಗಳು ಮುಂತಾದವರಂತೆ ಅನೇಕ ದೇವಾನುದೇವತೆಗಳು, ಋಷಿಗಳು ಇಷ್ಟಲಿಂಗವೆಂಬ ಮುಕ್ತಿಮಣಿಯನ್ನು ಪೂಜಿಸುತ್ತಾರೆ. ಗುರುಪರಂಪರೆಯನ್ನು ತಿಳಿಸುವ ಈ ಕಥೆಯು ಸ್ಕಂದ ಪುರಾಣದ ಪಂಪಾ ಮಹಾತ್ಮ್ಯದಲ್ಲಿ ಬರುವುದು. (ನಿತ್ಯಸತ್ಯ ಸತ್ಸಂಗ್ -ಸಂಗ್ರಹ)

Published On - 6:34 am, Sat, 29 January 22

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!