Daily Devotional: ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಚಪ್ಪಲಿ ಹೊರಗೆ ಬಿಡುವುದು ಯಾಕೆ ಗೊತ್ತಾ?
ಪಾದರಕ್ಷೆಗಳು ಕೇವಲ ರಕ್ಷಣೆ ನೀಡುವ ವಸ್ತುಗಳಲ್ಲ. ಅವು ನಮ್ಮ ಸಂಸ್ಕೃತಿ, ಆಧ್ಯಾತ್ಮಿಕ ನಂಬಿಕೆಗಳು ಮತ್ತು ಶಿಸ್ತಿನ ಸಂಕೇತವಾಗಿವೆ. ದೇವಸ್ಥಾನದ ಹೊರಗೆ ಚಪ್ಪಲಿಗಳನ್ನು ಬಿಡುವುದು ಅಹಂಕಾರ ತ್ಯಾಗದ ಸಂಕೇತವಾಗಿದೆ. ಭರತನ ರಾಮ ಪಾದುಕೆಗಳ ಪೂಜೆ, ಗುರುಗಳ ಪಾದುಕಾ ಪೂಜೆ, ಮತ್ತು ಪಾದರಕ್ಷೆ ದಾನದ ಮಹತ್ವವನ್ನು ಒಳಗೊಂಡಿದೆ ಎಂದು ಡಾ. ಬಸವರಾಜ್ ಗುರೂಜಿಯವರು ತಿಳಿಸಿದ್ದಾರೆ.

ದೇವಸ್ಥಾನಗಳಿಗೆ ಭೇಟಿ ನೀಡಿದಾಗ ನಾವು ಚಪ್ಪಲಿಗಳನ್ನು ಹೊರಗೆ ಬಿಡುವುದು ಒಂದು ಸಾಮಾನ್ಯ ಆಚರಣೆ. ಈ ಕಾರ್ಯದ ಹಿಂದೆ ಅಹಂಕಾರ ತ್ಯಾಗದ ದೊಡ್ಡ ಅರ್ಥ ಅಡಗಿದೆ. ನಮ್ಮ ಅಹಂಕಾರ ಮತ್ತು ದರ್ಪವನ್ನು ದೇವಸ್ಥಾನದ ಹೊರಗೆ ಬಿಟ್ಟು, ವಿನಮ್ರಭಾವದಿಂದ ದೇವರ ಮುಂದೆ ಶರಣಾಗತಿಯನ್ನು ಸೂಚಿಸುತ್ತದೆ. ಗುರುಗಳನ್ನು ಭೇಟಿಯಾದಾಗ ಅಥವಾ ಹಿರಿಯರಿಗೆ ನಮಸ್ಕರಿಸುವಾಗಲೂ ಚಪ್ಪಲಿಗಳನ್ನು ಪಕ್ಕಕ್ಕೆ ಬಿಡುವುದು ಇದೇ ವಿನಮ್ರತೆಯ ಸಂಕೇತವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.
ಗುರೂಜಿಯವರು ಹೇಳುವಂತೆ, ಪಾದರಕ್ಷೆಗಳ ಮಹತ್ವವನ್ನು ಪುರಾಣಗಳಲ್ಲಿಯೂ ಉಲ್ಲೇಖಿಸಲಾಗಿದೆ. ರಾಮಾಯಣದಲ್ಲಿ, ಭರತನು ರಾಮ ವನವಾಸಕ್ಕೆ ತೆರಳಿದಾಗ, ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲೆ ಇಟ್ಟು, ಅವುಗಳಿಗೆ ನಿರಂತರವಾಗಿ ಪೂಜೆ ಸಲ್ಲಿಸುತ್ತಾ ರಾಮನ ಹೆಸರಿನಲ್ಲಿ ಆಡಳಿತ ನಡೆಸಿದನು. ಇದು ಪಾದರಕ್ಷೆಗಳು ವ್ಯಕ್ತಿಯ ಪ್ರತಿನಿಧಿಯಾಗಿ, ಅವರ ಶಕ್ತಿ ಮತ್ತು ಸ್ಥಾನಮಾನವನ್ನು ಪ್ರತಿಕಬಿಂಬಿಸಬಲ್ಲವು ಎಂಬುದಕ್ಕೆ ಉತ್ತಮ ಉದಾಹರಣೆ. ಇಂದಿಗೂ ಶಿರಡಿಯ ಸಾಯಿಬಾಬಾ ಮಂದಿರ, ಮತ್ತು ಅನೇಕ ಮಠಗಳಲ್ಲಿ ಗುರುಗಳ ಪಾದುಕೆಗಳನ್ನು ಪೂಜಿಸಲಾಗುತ್ತದೆ. ಈ ಪಾದುಕಾ ಪೂಜೆಯು ಗುರುಗಳಿಗೆ ಸಲ್ಲಿಸುವ ಗೌರವ ಮತ್ತು ಅವರ ಶಕ್ತಿಯನ್ನು ಪಡೆಯುವ ಸಂಕೇತವಾಗಿದೆ.
ಪಾದರಕ್ಷೆಗಳು ಶಿಸ್ತಿನ ಸಂಕೇತವೂ ಹೌದು. ಸಂಪೂರ್ಣ ಪಾದವನ್ನು ಮುಚ್ಚುವಂತಹ ಪಾದುಕೆಗಳನ್ನು ಧರಿಸುವುದು ಹೆಚ್ಚು ಶುಭವೆಂದು ಪರಿಗಣಿಸಲಾಗುತ್ತದೆ. ದಾನಗಳಲ್ಲಿ ಪಾದರಕ್ಷೆಗಳ ದಾನವು ಬಹಳ ವಿಶೇಷವಾದದ್ದು. ಶನಿ ದೋಷದಿಂದ ಬಳಲುತ್ತಿರುವವರು ಸೋಮವಾರ, ಬುಧವಾರ ಅಥವಾ ಶನಿವಾರದಂದು ಒಂದು ಜೊತೆ ಪಾದರಕ್ಷೆಗಳನ್ನು ದಾನ ಮಾಡುವುದರಿಂದ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಸನ್ಯಾಸಿಗಳು ಮರದ ಪಾದುಕೆಗಳನ್ನು ಧರಿಸುವುದು ಆಧ್ಯಾತ್ಮಿಕ ಶುದ್ಧತೆ ಮತ್ತು ಸರಳ ಜೀವನದ ಸಂಕೇತ.
ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!
ಮನೆಯಿಂದ ಹೊರಗೆ ಹೋಗುವಾಗ ಅಥವಾ ಒಳಗೆ ಬರುವಾಗ ಪಾದರಕ್ಷೆಗಳನ್ನು ನೋಡುತ್ತೇವೆ. ಅವುಗಳನ್ನು ಅಚ್ಚುಕಟ್ಟಾಗಿ, ಒಂದಕ್ಕೊಂದು ಸಮೀಪದಲ್ಲಿ ಇಡುವುದು ಬಹಳ ಮುಖ್ಯ. ಒಂದು ಚಪ್ಪಲಿಯನ್ನು ಒಂದು ಕಡೆ, ಮತ್ತೊಂದನ್ನು ಇನ್ನೊಂದು ಕಡೆ ಬಿಸಾಡುವುದು ಸರಿಯಾದ ಕ್ರಮವಲ್ಲ. ಪಾದರಕ್ಷೆಗಳು ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳನ್ನು ಹೊಂದಿರುತ್ತವೆ. ಅವುಗಳನ್ನು ಸರಿಯಾಗಿ ಇರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
