
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 35ನೇ ಪಂದ್ಯವು ಐತಿಹಾಸಿಕ ಚೇಸಿಂಗ್ಗೆ ಸಾಕ್ಷಿಯಾಗಿತ್ತು. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 264 ರನ್ ಕಲೆಹಾಕಿದ್ದರು. ಈ ಕಠಿಣ ಗುರಿಯನ್ನು ಪಂಜಾಬ್ ಕಿಂಗ್ಸ್ 18.5 ಓವರ್ಗಳಲ್ಲಿ ಚೇಸ್ ಮಾಡಿ ಅಮೋಘ ಜಯ ಸಾಧಿಸಿತು.
ಈ ಸೋಲಿನ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್, ತಂಡದ ಕಳಪೆ ಫೀಲ್ಡಿಂಗ್ ಮತ್ತು ಬೌಲಿಂಗ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸೋಲಿಗೆ ಬೇರೆ ಯಾರನ್ನೂ ಹೊಣೆ ಮಾಡುವಂತಿಲ್ಲ. ಏಕೆಂದರೆ “ನಾವು ಸೋಲಲು ಅರ್ಹರಾಗಿದ್ದೆವು” ಎಂದು ಅಕ್ಷರ್ ಪಟೇಲ್ ನೇರವಾಗಿಯೇ ಹೇಳಿದ್ದಾರೆ.
ಈ ಪಿಚ್ ಬ್ಯಾಟಿಂಗ್ಗೆ ಪೂರಕವಾಗಿತ್ತು ಮತ್ತು ಮೈದಾನ ಚಿಕ್ಕದಾಗಿದ್ದರಿಂದ ಸಿಕ್ಸರ್ಗಳು ಬರುವುದು ಸಹಜವಾಗಿತ್ತು. ಆದರೆ, ಸಿಕ್ಕ ಅವಕಾಶಗಳನ್ನು ನಾವು ಬಳಸಿಕೊಳ್ಳಲಿಲ್ಲ. ಫೀಲ್ಡರ್ಗಳು ಬೌಲರ್ಗಳಿಗೆ ಬೆಂಬಲ ನೀಡದಿದ್ದರೆ ಇಂತಹ ಪಂದ್ಯಗಳನ್ನು ಗೆಲ್ಲುವುದು ಕಷ್ಟ ಎಂದು ಅಕ್ಷರ್ ಬೇಸರ ವ್ಯಕ್ತಪಡಿಸಿದ್ದಾರೆ.
ಪವರ್ಪ್ಲೇ ಅವಧಿಯಲ್ಲಿ ವೇಗದ ಬೌಲರ್ಗಳು ಹೆಚ್ಚು ರನ್ ಬಿಟ್ಟುಕೊಟ್ಟಿದ್ದು ಮತ್ತು ಫೀಲ್ಡಿಂಗ್ನಲ್ಲಿ ಮಾಡಿದ ಎಡವಟ್ಟುಗಳು ಪಂದ್ಯದ ಗತಿಯನ್ನು ಬದಲಿಸಿದವು. ಪಂಜಾಬ್ ಕಿಂಗ್ಸ್ ಮೊದಲ 6 ಓವರ್ಗಳಲ್ಲೇ ದಾಖಲೆಯ ರನ್ ಗಳಿಸಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಳುವಾಯಿತು.
ಡೆಲ್ಲಿ ಕ್ಯಾಪಿಟಲ್ಸ್ 264 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ತನ್ನ ಬ್ಯಾಟಿಂಗ್ ಶಕ್ತಿಯನ್ನು ತೆರೆದಿಟ್ಟಿತ್ತು. 264 ರನ್ ಎಂಬುದು ದೊಡ್ಡ ಮೊತ್ತ. ಬ್ಯಾಟಿಂಗ್ನಲ್ಲಿ ನಾವು ಶ್ರೇಷ್ಠ ಪ್ರದರ್ಶನ ನೀಡಿದ್ದೇವೆ, ಇದು ಸಕಾರಾತ್ಮಕ ಅಂಶ. ಆದರೆ ಅದೃಷ್ಟ ಮತ್ತು ಫೀಲ್ಡಿಂಗ್ ಎರಡೂ ನಮಗೆ ಸಾಥ್ ನೀಡಲಿಲ್ಲ ಎಂದು ಅಕ್ಷರ್ ಹೇಳಿದ್ದಾರೆ.
ನಿರ್ಣಾಯಕ ಕ್ಷಣಗಳಲ್ಲಿ ಪಂದ್ಯವನ್ನು ನಮ್ಮತ್ತ ತಿರುಗಿಸಿಕೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಪದೇ ಪದೇ ಒಂದೇ ತಪ್ಪುಗಳನ್ನು ಮಾಡುವುದು ಸರಿಯಲ್ಲ. ನಾವು ಮತ್ತೆ ಈ ಕುಳಿತು ಚರ್ಚಿಸಿ, ಮುಂದಿನ ಪಂದ್ಯಗಳಲ್ಲಿ ಎಲ್ಲಿ ಸುಧಾರಿಸಿಕೊಳ್ಳಬೇಕು ಎಂಬುದನ್ನು ನೋಡುತ್ತೇವೆ. ಈ ಮೂಲಕ ಮುಂದಿನ ಮ್ಯಾಚ್ಗಳಲ್ಲಿ ಇಂತಹ ತಪ್ಪುಗಳನ್ನು ನಡೆಯದಂತೆ ನೋಡಿಕೊಳ್ಳಬೇಕಿದೆ ಎಂದು ಅಕ್ಷರ್ ಪಟೇಲ್ ಇದೇ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: ಒಂದು ಶತಕಕ್ಕೆ ‘ವೈಭವ’ದ ೮ ದಾಖಲೆಗಳು ಉಡೀಸ್
ಈ ಪಂದ್ಯದ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಅತ್ತ ಭರ್ಜರಿ ಗೆಲುವು ದಾಖಲಿಸಿರುವ ಪಂಜಾಬ್ ಕಿಂಗ್ಸ್ ತಂಡವು 13 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.