AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಸಿಐ ಸಭೆ ಮುಂದೂಡಿಕೆಗೆ ಇದುವೇ ಅಸಲಿ ಕಾರಣ!

ವಿದೇಶಿ ಮಣ್ಣಿನಲ್ಲಿ ಅನುಭವಿಸಿದ ಸರಣಿ ಸೋಲುಗಳು ಟೀಮ್ ಇಂಡಿಯಾದ ಆಡಳಿತ ಮಂಡಳಿಯಲ್ಲಿ ಬಿರುಗಾಳಿ ಎಬ್ಬಿಸಿರುವ ಬೆನ್ನಲ್ಲೇ, ಎಲ್ಲರ ಕಣ್ಣು ಬಿಸಿಸಿಐನ ಮುಂದಿನ ನಿರ್ಧಾರಗಳ ಕಡೆ ನೆಟ್ಟಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಕ್ರಿಕೆಟ್ ತಂಡದ ಹೀನಾಯ ಪ್ರದರ್ಶನದ ಬೆನ್ನಲ್ಲೇ, ಟೀಮ್ ಇಂಡಿಯಾದ ಕೋರ್ ಕಮಿಟಿ ಜೊತೆ ಬಿಸಿಸಿಐ (BCCI) ನಡೆಸಬೇಕಿದ್ದ ಮಹತ್ವದ ಪರಾಮರ್ಶನಾ ಸಭೆಯು ಕೊನೆ ಕ್ಷಣದಲ್ಲಿ ಮುಂದೂಡಲ್ಪಟ್ಟಿದೆ. 

ಬಿಸಿಸಿಐ ಸಭೆ ಮುಂದೂಡಿಕೆಗೆ ಇದುವೇ ಅಸಲಿ ಕಾರಣ!
BCCIImage Credit source: BCCI
ಝಾಹಿರ್ ಯೂಸುಫ್
|

Updated on: Aug 06, 2026 | 9:05 AM

Share

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಕ್ರಿಕೆಟ್ ತಂಡದ ಹೀನಾಯ ಪ್ರದರ್ಶನದ ಬೆನ್ನಲ್ಲೇ, ಟೀಮ್ ಇಂಡಿಯಾದ ಕೋರ್ ಕಮಿಟಿ ಜೊತೆ ಬಿಸಿಸಿಐ (BCCI) ನಡೆಸಬೇಕಿದ್ದ ಮಹತ್ವದ ಪರಾಮರ್ಶನಾ ಸಭೆಯು ಕೊನೆ ಕ್ಷಣದಲ್ಲಿ ಮುಂದೂಡಲ್ಪಟ್ಟಿದೆ. ಸಭೆ ಮುಂದೂಡಲು ಕಾರಣವಾಗಿರುವ ಆಂತರಿಕ ಬೆಳವಣಿಗೆಯೇ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಭೆ ಮುಂದೂಡಿಕೆಗೆ ಕಾರಣವೇನು?

ಟೀಮ್ ಇಂಡಿಯಾ ತನ್ನ ಇತ್ತೀಚಿನ ಪ್ರವಾಸದಲ್ಲಿ ಆಡಿದ 10 ಪಂದ್ಯಗಳ ಪೈಕಿ 8 ರಲ್ಲಿ ಸೋತು ತೀವ್ರ ಮುಖಭಂಗ ಅನುಭವಿಸಿತ್ತು. ಇದರ ಬೆನ್ನಲ್ಲೇ ತಂಡದ ಪ್ರದರ್ಶನದ ತನಿಖೆ ನಡೆಸಿ ‘ಕೋರ್ಸ್ ಕರೆಕ್ಷನ್’ (ತಪ್ಪುಗಳ ತಿದ್ದುಪಡಿ) ಮಾಡಲು ಬಿಸಿಸಿಐ ಆಗಸ್ಟ್ ಮೊದಲ ವಾರದಲ್ಲಿ ಹೈ-ಲೆವೆಲ್ ಸಭೆಯೊಂದನ್ನು ಆಯೋಜಿಸಿತ್ತು.

ಆದರೆ, ಈ ಇಡೀ ವಿಮರ್ಶೆಯ ನೇತೃತ್ವ ವಹಿಸಬೇಕಿದ್ದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕಾರ್ಯದರ್ಶಿಗಳ ಆರೋಗ್ಯ ಕೈಕೊಟ್ಟಿರುವುದರಿಂದ ಬಿಸಿಸಿಐ ಈ ಸಭೆಯನ್ನು ಅಧಿಕೃತವಾಗಿ ಮುಂದೂಡಬೇಕಾಗಿ ಬಂದಿದೆ.

ಪರಾಮರ್ಶನಾ ಸಭೆ ಯಾಕೆ?

ಟಿ20 ವಿಶ್ವಕಪ್ ಗೆದ್ದು ಬೀಗುತ್ತಿದ್ದ ಭಾರತ ತಂಡಕ್ಕೆ ಹೊಸ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಐರ್ಲೆಂಡ್ ವಿರುದ್ಧ 2-0 ಅಂತರದ ಕ್ಲೀನ್ ಸ್ವೀಪ್ ಸೋಲು ಎದುರಾಗಿತ್ತು. ಅದಾದ ಬಳಿಕ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 4-0 ಅಂತರದಿಂದ ಮುಖಭಂಗ ಅನುಭವಿಸಿದ ಟೀಮ್ ಇಂಡಿಯಾ (ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು), ನಂತರ ನಡೆದ ಏಕದಿನ ಸರಣಿಯಲ್ಲೂ 2-1 ಅಂತರದಿಂದ ಸೋಲೊಪ್ಪಿಕೊಂಡಿತು.

ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ಟಿ20 ನಾಯಕನನ್ನಾಗಿ ಮಾಡಿದ ಬಿಸಿಸಿಐ ನಿರ್ಧಾರ ಆರಂಭದಲ್ಲೇ ತಲೆಕೆಳಗಾಗಿದೆ. ಅಯ್ಯರ್ ನೇತೃತ್ವದಲ್ಲಿ ಭಾರತ ಸತತ ಪಂದ್ಯಗಳನ್ನು ಸೋತಿರುವುದು ಬಿಸಿಸಿಐ ಚಿಂತೆಗೆ ಕಾರಣವಾಗಿದೆ.

ಹಾಗೆಯೇ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ವಿರುದ್ಧ ಕೂಡ ಕೆಲ ಆಟಗಾರರು ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಬಿಸಿಸಿಐ ಮಹತ್ವದ ಪರಾಮರ್ಶನಾ ಸಭೆಯನ್ನು ಕರೆದಿದೆ.

ಸಭೆಯಲ್ಲಿ ಚರ್ಚಿಸಲಿರುವ ಪ್ರಮುಖ ಅಂಶಗಳು:

ಮರುನಿಗದಿಯಾಗಲಿರುವ ಮುಂದಿನ ಸಭೆಯಲ್ಲಿ ಬಿಸಿಸಿಐ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಅದರಲ್ಲೂ ಟೀಮ್ ಇಂಡಿಯಾ ಕೋಚ್ ಹಾಗೂ ನಾಯಕರುಗಳಿಂದ ಸ್ಪಷ್ಟನೆ ಕೇಳಲಿದ್ದಾರೆ.

ಗಂಭೀರ್ ಭಾಗಿ: ಭಾರತ ತಂಡವು ಈಗಾಗಲೇ ಆಗಸ್ಟ್ 15 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ತಲುಪಿದೆ. ಹೀಗಾಗಿ ಮುಖ್ಯ ಕೋಚ್ ಗೌತಮ್ ಗಂಭೀರ್ ಈ ಸಭೆಗೆ ಆನ್‌ಲೈನ್ (ವರ್ಚುವಲ್) ಮೂಲಕ ಹಾಜರಾಗಲಿದ್ದಾರೆ.

ಆಯ್ಕೆ ಪ್ರಕ್ರಿಯೆಯ ಗೊಂದಲ: ಸರಣಿಯುದ್ದಕ್ಕೂ ಪ್ರಮುಖ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಬೆಂಚ್ ಕಾಯಿಸಿದ ನಿರ್ಧಾರ ಮತ್ತು ನಂ.8 ರವರೆಗೆ ಬ್ಯಾಟಿಂಗ್ ಆಳ ಇಟ್ಟುಕೊಳ್ಳುವ ಗಂಭೀರ್ ಅವರ ತಂತ್ರಗಾರಿಕೆಯ ಬಗ್ಗೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರನ್ನು ಬಿಸಿಸಿಐ ಪ್ರಶ್ನಿಸಲಿದೆ.

ರೋಹಿತ್ ಶರ್ಮಾ ಭವಿಷ್ಯದ ಲೀಕ್ ವಿವಾದ: ನಾಯಕ ರೋಹಿತ್ ಶರ್ಮಾ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯಕ್ಕೆ ಸಂಬಂಧಿಸಿದ ಆಂತರಿಕ ಮಾಹಿತಿ ಮಾಧ್ಯಮಗಳಿಗೆ ಲೀಕ್ ಆಗಿರುವ ಬಗ್ಗೆಯೂ ಬಿಸಿಸಿಐ ತನಿಖೆ ನಡೆಸಲಿದೆ.

ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊ ಮದುವೆಗೆ ಡೇಟ್ ಫಿಕ್ಸ್​!

ಬಿಸಿಸಿಐ ಹೇಳುವುದೇನು?

ಈ ಸಭೆಯು ಕೇವಲ ತಂಡದ ಕ್ರಿಕೆಟ್ ಪ್ರದರ್ಶನ ಮತ್ತು ತಪ್ಪುಗಳ ಸುಧಾರಣೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ. ಯಾವುದೇ ಆತುರದ ಅಥವಾ ಭಾವನಾತ್ಮಕ ನಿರ್ಧಾರಗಳನ್ನು ಬೋರ್ಡ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಲಾಗಿದ್ದು, ಗೌತಮ್ ಗಂಭೀರ್ ಅವರ ಕೋಚ್ ಹುದ್ದೆಯ ಒಪ್ಪಂದ 2027ರ ವಿಶ್ವಕಪ್ ವರೆಗೆ ಸುರಕ್ಷಿತವಾಗಿದೆ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.

Follow Us