ದಿನಸಿ ಅಂಗಡಿ ಹುಡುಗನಿಗೆ ವಿರಾಟ್ ಕೊಹ್ಲಿ, ಎಬಿಡಿ ಕರೆ: ಆಮೇಲೆ ಪೊಲೀಸರು ಬಂದರು..!

ಛತ್ತೀಸ್‌ಗಢದ ಯುವಕನೋರ್ವನಿಗೆ ಸ್ಟಾರ್ ಕ್ರಿಕೆಟಿಗರೇ ಕರೆ ಮಾಡಿದ ಘಟನೆ ನಡೆದಿದೆ. ಹೀಗೆ ಕರೆ ಮಾಡಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​ನಂತಹ ದಿಗ್ಗಜರಿರುವುದು ವಿಶೇಷ. ಇನ್ನು ಕರೆಗಳಿಗೆ ಅಂತ್ಯವಾಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್. ಹೀಗೆ ದಿನಸಿ ಅಂಗಡಿ ಯುವಕನಿಗೆ ಸ್ಟಾರ್ ಕ್ರಿಕೆಟಿಗರು ಕರೆ ಮಾಡಲು ಕಾರಣವೇನು? ಎಂಬುದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ...

ದಿನಸಿ ಅಂಗಡಿ ಹುಡುಗನಿಗೆ ವಿರಾಟ್ ಕೊಹ್ಲಿ, ಎಬಿಡಿ ಕರೆ: ಆಮೇಲೆ ಪೊಲೀಸರು ಬಂದರು..!
Virat - Abd - Manish

Updated on: Aug 10, 2025 | 1:58 PM

ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಜೊತೆ ಮಾತನಾಡುವ ಅವಕಾಶ ಸಿಕ್ಕರೆ ಯಾರು ತಾನೆ ಬಿಡುತ್ತಾರೆ? ಅಂತಹದೊಂದು ಅವಕಾಶ ಹುಡುಕಿ ಬಂದರೆ? ಹೌದು, ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ದಿನಸಿ ಅಂಗಡಿಯ ಹುಡುಗನೊಬ್ಬನಿಗೆ ಅಂತಹದೊಂದು ಅವಕಾಶ ಸಿಕ್ಕಿದೆ. ಅದು ಕೂಡ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ಅನೇಕರು ಖುದ್ದು ಕರೆ ಮಾಡುವ ಮೂಲಕ..!

ಎನ್​ಡಿಟಿವಿ ವರದಿಯ ಪ್ರಕಾರ, ಮನೀಶ್ ಸ್ಥಳೀಯ ಅಂಗಡಿಯಿಂದ ಹೊಸ ಸಿಮ್ ಕಾರ್ಡ್ ಖರೀದಿಸಿದ್ದರು. ಈ ನಂಬರ್​ನಲ್ಲಿ ವಾಟ್ಸಾಪ್ ಓಪನ್ ಮಾಡಿದ್ದರು. ಆದರೆ ವಾಟ್ಸಪ್ ಅನ್ನು ಸಕ್ರಿಯಗೊಳಿಸುತ್ತಿದ್ದಂತೆ ಅಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಅವರ ಫೋಟೋ ಕಾಣಿಸಿಕೊಂಡಿದೆ. ಅಲ್ಲದೆ ಆ ವಾಟ್ಸಾಪ್​ ಖಾತೆಯಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಕ್ರಿಕೆಟಿಗರ ಕಾಂಟ್ಯಾಕ್ಟ್ ಲಿಸ್ಟ್ ತೋರಿಸಿದೆ.

ಆ ಬಳಿಕ ಮನೀಶ್​ಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ಒಂದಷ್ಟು ಮಂದಿಯಿಂದ ಕರೆಗಳು ಸಹ ಬಂದಿದೆ. ಈ ವೇಳೆ ಕರೆ ಸ್ವೀಕರಿಸಿ ಮಾತನಾಡಿದ್ದಾರೆ.

ಕೇಸ್ ದಾಖಲಿಸಿದ ರಜತ್ ಪಾಟಿದಾರ್:

ಮನೀಶ್​ಗೆ ಸಿಕ್ಕಿದ ನಂಬರ್ ರಜತ್ ಪಾಟಿದಾರ್ ಅವರ ಹಳೆಯ ಮೊಬೈಲ್ ನಂಬರ್ ಆಗಿತ್ತು. ಈ ನಂಬರ್ ಅನ್ನು 90 ದಿನಗಳಿಂದ ಬಳಸದ ಮೊಬೈಲ್ ಆಪರೇಟರ್ ನಿಷ್ಕ್ರಿಯಗೊಳಿಸಿದ್ದರು. ಹೀಗೆ ನಿಷ್ಕ್ರಿಯಗೊಂಡಿದ್ದ ನಂಬರ್ ಅನ್ನು ಆ ಬಳಿಕ ಮರು ಬಿಡುಗಡೆ ಮಾಡಲಾಗಿತ್ತು. ಈ ನಂಬರ್ ಮನೀಶ್​ಗೆ ಸಿಕ್ಕಿದೆ.

ಇತ್ತ ರಜತ್ ಪಾಟಿದಾರ್ ಅವರ ಹಳೆಯ ನಂಬರ್ ನಿಷ್ಕ್ರಿಯಗೊಂಡಿರುವುದು ಗೊತ್ತಿರದ ಅನೇಕ ಕ್ರಿಕೆಟಿಗರು ಮನೀಶ್​ಗೆ ಕರೆ ಮಾಡಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡ ಮನೀಶ್ ಎಲ್ಲರೊಂದಿಗೆ ಮಾತನಾಡಿದ್ದಾರೆ.

ಇದಾದ ಬಳಿಕ ಈ ವಿಷಯ ರಜತ್ ಪಾಟಿದಾರ್​ಗೆ ಗೊತ್ತಾಗಿದೆ. ಅಲ್ಲದೆ ಮನೀಶ್​ಗೆ ಕರೆ ಮಾಡಿ ತನ್ನ ನಂಬರ್ ಅನ್ನು ಹಿಂತಿರುಗಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಕ್ರಿಕೆಟ್ ವಲಯದ ಪ್ರಮುಖ ವ್ಯಕ್ತಿಗಳನ್ನು ಸಂಪರ್ಕಿಸಲು ತನಗೆ ಆ ಸಂಖ್ಯೆ ಬೇಕು ಎಂದು ಹೇಳಿ, ವಿಷಯವನ್ನು ವಿವರಿಸಿದರು. ಇದಾಗ್ಯೂ ನಂಬರ್ ನೀಡಲು ಮನೀಶ್ ಮತ್ತು ಸ್ನೇಹಿತರು ಒಪ್ಪಲಿಲ್ಲ. ಹೀಗಾಗಿ ರಜತ್ ಪಾಟೀದಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್​ನಲ್ಲಿ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ ತ್ರಿಮೂರ್ತಿಗಳು

ರಜತ್ ಪಾಟಿದಾರ್ ಕರೆ ಮಾಡಿದ 10 ನಿಮಿಷಗಳ ಬಳಿಕ ಮನೀಶ್​ ಮನೆಗೆ ಪೊಲೀಸರು ಬಂದಿದ್ದಾರೆ. ಆ ಬಳಿಕವಷ್ಟೇ ದಿನಸಿ ಅಂಗಡಿಯವನಿಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದೆ. ತಕ್ಷಣವೇ ಮನೀಶ್ ಸಿಮ್ ಕಾರ್ಡ್ ಅನ್ನು ಹಿಂತಿರುಗಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. 

 

Published On - 1:56 pm, Sun, 10 August 25