Dinesh Karthik Birthday Special: ಸಿಂಪಲ್ಲಾಗಿ ಒಂದು DKಯ ಸಿರೀಯಸ್ ಲವ್​ ಸ್ಟೋರಿ..!

Dinesh Karthik Love Story: ಟೀಮ್ ಇಂಡಿಯಾದ ವಿಕೆಟ್​ ಕೀಪರ್ ಆಗಿ ಮಹೇಂದ್ರ ಸಿಂಗ್​ ಧೋನಿ ಇದ್ದರು. ಅತ್ತ ತಂಡದಲ್ಲಿ ಧೋನಿಯ ಸ್ಥಾನವನ್ನು ಅಲುಗಾಡಿಸುವಂತಿರಲ್ಲಿಲ್ಲ. ಈ ವೇಳೆ ತಂಡಕ್ಕೆ ಆಯ್ಕೆಯಾಗಿದ್ದು ದಿನೇಶ್ ಕಾರ್ತಿಕ್.

Dinesh Karthik Birthday Special: ಸಿಂಪಲ್ಲಾಗಿ ಒಂದು DKಯ ಸಿರೀಯಸ್ ಲವ್​ ಸ್ಟೋರಿ..!
Dinesh Karthik Love Story
Follow us
| Updated By: ಝಾಹಿರ್ ಯೂಸುಫ್

Updated on: Jun 01, 2022 | 7:00 AM

ದಿನೇಶ್ ಕಾರ್ತಿಕ್ (Dinesh Karthik) ಅಲಿಯಾಸ್ ಡಿಕೆ ಸಾಬ್​ಗೆ ಇಂದು 37ನೇ ಹುಟ್ಟುಹಬ್ಬದ ಸಂಭ್ರಮ. ಆರ್​ಸಿಬಿ (RCB) ಅಭಿಮಾನಿಗಳ ಪಾಲಿನ ಡಿಕೆ ಬಾಸ್ ಎಂದೇ ಜನಪ್ರಿಯನಾಗಿರುವ ದಿನೇಶ್ ಕಾರ್ತಿಕ್ ಕ್ರಿಕೆಟ್​ ಅಂಗಳಕ್ಕೆ ಬಂದು 18 ವರ್ಷಗಳೇ ಕಳೆದಿವೆ. ಆದರೆ ಅವರಿಗೆ ಹೆಸರು, ಖ್ಯಾತಿ, ಒಂದಷ್ಟು ಅಭಿಮಾನಿಗಳನ್ನು ತಂದುಕೊಟ್ಟಿದ್ದು ಆರ್​ಸಿಬಿಗೆ ಎಂಟ್ರಿ ಕೊಟ್ಟ ಮೇಲೆ ಎಂದರೆ ತಪ್ಪಾಗಲಾರದು. ಏಕೆಂದರೆ ಆರ್​ಸಿಬಿ ತಂಡದ ಗೆಲುವಿನಲ್ಲಿ ಡಿಕೆ ಅವರ ಕೊಡುಗೆ ಮಹತ್ವದ್ದು. 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಇಡೀ ಪಂದ್ಯ ಚಿತ್ರಣ ಬದಲಿಸುತ್ತಿರುವ ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್​ಗೆ ಖುದ್ದು ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ (Abd) ಅವರೇ ಫಿದಾ ಆಗಿದ್ದಾರೆ ಎಂದರೆ ಅವರ ಬ್ಯಾಟಿಂಗ್ ಅಬ್ಬರವನ್ನು ನಾವು ಊಹಿಸಿಕೊಳ್ಳಬಹುದು. ಆದರೆ ಇದೇ ಡಿಕೆ ಒಂದು ದಶಕದ ಹಿಂದೆ ಹಲವು ಕಾರಣಗಳಿಂದ ಭಾರೀ ಸುದ್ದಿಯಾಗಿದ್ದರು. ಅದು ಕೂಡ ತಾನು ಮಾಡದ ತಪ್ಪಿನಿಂದಾಗಿ ಎಂಬುದು ವಿಶೇಷ. ಅಂದರೆ ನೀವಿಂದು ನೋಡುತ್ತಿರುವುದು ಸತತವಾಗಿ ಸೋತು ಗೆದ್ದಂತಹ ಡಿಕೆ ಅಲಿಯಾಸ್ ದಿನೇಶ್ ಕಾರ್ತಿಕ್ ಅವರನ್ನು…

ಹೌದು, ಆಗ ಟೀಮ್ ಇಂಡಿಯಾದ ವಿಕೆಟ್​ ಕೀಪರ್ ಆಗಿ ಮಹೇಂದ್ರ ಸಿಂಗ್​ ಧೋನಿ ಇದ್ದರು. ಅತ್ತ ತಂಡದಲ್ಲಿ ಧೋನಿಯ ಸ್ಥಾನವನ್ನು ಅಲುಗಾಡಿಸುವಂತಿರಲ್ಲಿಲ್ಲ. ಈ ವೇಳೆ ತಂಡಕ್ಕೆ ಆಯ್ಕೆಯಾಗಿದ್ದು ದಿನೇಶ್ ಕಾರ್ತಿಕ್. ಅದು ಕೂಡ 2ನೇ ವಿಕೆಟ್ ಕೀಪರ್ ಆಗಿ ಎಂಬುದು ವಿಶೇಷ. ಅಂದರೆ ತಮಿಳುನಾಡು ತಂಡದ ನಾಯಕರಾಗಿದ್ದ ಡಿಕೆ ಅತ್ಯುತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಇದಾಗ್ಯೂ ಧೋನಿ ತಂಡದಲ್ಲಿದ್ದ ಕಾರಣ ದಿನೇಶ್ ಕಾರ್ತಿಕ್​​ಗೆ ಅವಕಾಶ ಸಿಕ್ಕಿರಲಿಲ್ಲ. ದುರಂತ ಎಂದರೆ ಒಬ್ಬ ಆಟಗಾರ ಅತ್ಯುತ್ತಮ ಫಾರ್ಮ್​ನಲ್ಲಿರುವಾಗ ತಂಡಕ್ಕೆ ಆಯ್ಕೆಯಾಗಿ ಬೆಂಚ್ ಕಾಯುವುದು ಇದೆಯಲ್ಲಾ, ಅದು ಆತನ ಕೆರಿಯರ್​ ಅನ್ನೇ ಮುಗಿಸಿಬಿಡುತ್ತೆ. ಏಕೆಂದರೆ ಇತ್ತ ದೇಶೀಯ ಕ್ರಿಕೆಟ್ ಆಡಲು ಅವಕಾಶವಿಲ್ಲ, ಇತ್ತ ಟೀಮ್ ಇಂಡಿಯಾದಲ್ಲಿ ಚಾನ್ಸ್ ಇಲ್ಲ. ಹೀಗೆ ಅವಕಾಶ ವಂಚಿತನಾಗಿ ಕೂತಿದ್ದ ಡಿಕೆಯ ಕಿವಿಗೆ ಇದೇ ಸಂದರ್ಭದಲ್ಲಿ ಬರ ಸಿಡಿಲಿನಂತೆ ಮತ್ತೊಂದು ಆಘಾತಕಾರಿ ಸುದ್ದಿ ಅಪ್ಪಳಿಸಿತ್ತು.

ಟೀಮ್ ಇಂಡಿಯಾದಲ್ಲಿ 2ನೇ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ಅವರಿಗೆ ಗೆಳೆಯನೇ ದ್ರೋಹ ಬಗೆದಿದ್ದ. ಅಂದರೆ ಅತ್ತ ಡಿಕೆ ಟೀಮ್ ಇಂಡಿಯಾದಲ್ಲಿದ್ದರೆ, ಇತ್ತ ತಮಿಳುನಾಡು ತಂಡದ ಸಹ ಆಟಗಾರ ಮುರಳಿ ವಿಜಯ್ ಡಿಕೆಯ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ಇಡೀ ತಮಿಳುನಾಡು ರಣಜಿ ತಂಡಕ್ಕೆ ಗೊತ್ತಿದ್ದರೂ, ಡಿಕೆಗೆ ಮಾತ್ರ ತಿಳಿದಿರಲಿಲ್ಲ.

ಇದನ್ನೂ ಓದಿ
Image
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Image
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಕೊನೆಗೆ ಒಂದು ದಿನ ಪತ್ನಿ ಬಂದು ತಾನು ಮುರಳಿ ವಿಜಯ್‌ನ ಮಗುವಿನ ತಾಯಿಯಾಗುತ್ತಿದ್ದೇನೆ. ನಿನ್ನಿಂದ ವಿಚ್ಛೇದನವನ್ನು ಬಯಸುವುದಾಗಿ ತಿಳಿಸಿದ್ದಳು. ಆಗಷ್ಟೇ ಕ್ರಿಕೆಟ್​ ಕೆರಿಯರ್​ನಲ್ಲಿ ಹೊಸ ಕನಸುಗಳನ್ನು ಹೊತ್ತಿದ್ದ ಯುವ ಆಟಗಾರನಿಗೆ ಇದಕ್ಕಿಂತ ದೊಡ್ಡ ಆಘಾತ ಮತ್ತೇನಿದೆ ಹೇಳಿ. ಅದರಂತೆ ವಿಚ್ಛೇದನ ಪಡೆದು ಸಿಎಸ್​ಕೆ ಹಾಗೂ ಟೀಮ್ ಇಂಡಿಯಾ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದು ಮಿಂಚುತ್ತಿದ್ದ ಮುರಳಿ ವಿಜಯ್ ಜೊತೆ ಆಕೆ ಹೊಸ ಜೀವನ ಆರಂಭಿಸಿದ್ದಳು.

ಇಂತಹದೊಂದು ಮೋಸವನ್ನು ಕನಸು ಮನಸ್ಸಿನಲ್ಲೂ ಊಹಿಸಿರದ ಡಿಕೆ ತೀವ್ರ ಖಿನ್ನತೆಗೆ ಒಳಗಾದರು. ಆಟದ ಮೇಲಿನ ಏಕಾಗ್ರತೆ ಕಳೆದುಕೊಂಡರು. ಮೈದಾನದಲ್ಲಿ ಗಡ್ಡದೊಂದಿಗೆ ಕಾಣಿಸಿಕೊಂಡರು..ಥೇಟ್ ದೇವದಾಸ್​ನಂತೆ….ಅವರ ಪ್ರದರ್ಶನ ಮಟ್ಟ ಕೂಡ ಕುಸಿಯಿತು. ಇದರ ಬೆನ್ನಲ್ಲೇ ಭಾರತ ತಂಡದಿಂದ ಸಹ ಕೈಬಿಡಲಾಯಿತು. ಇತ್ತ ರಣಜಿಯಲ್ಲಿ ವಿಫಲರಾಗಲು ಪ್ರಾರಂಭಿಸಿದರು. ನಾಯಕತ್ವದಿಂದ ಕೂಡ ಕೆಳಗಿಳಿಸಲಾಯಿತು. ದುರಂತ ಎಂದರೆ ಯಾರು ತನಗೆ ಮೋಸ ಮಾಡಿದ್ದಾರೋ ಅವರಿಗೆ ಅಂದರೆ ಮುರಳಿ ವಿಜಯ್​ಗೆ ತಮಿಳುನಾಡು ತಂಡ ನಾಯಕತ್ವ ಲಭಿಸಿತು.

ಇದಾಗ್ಯೂ ಡಿಕೆ ಐಪಿಎಲ್ ಮೂಲಕ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದರು. ಆದರೆ ಮೊದಲೇ ಕುಗ್ಗಿ ಹೋಗಿದ್ದ ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲೂ ವಿಫಲರಾಗಲು ಪ್ರಾರಂಭಿಸಿದರು. ತುಂಬಾ ಖಿನ್ನತೆಗೆ ಒಳಗಾದರು. ರಣಜಿ ತಂಡದ ಸಹ ಆಟಗಾರರಿಂದ ನಿರಾಶೆಗೊಂಡಿದ್ದರು. ಎಲ್ಲಿಯತನಕ ಎಂದರೆ ಡಿಕೆ ಆತ್ಮಹತ್ಯೆ ಮಾಡಿಕೊಳ್ಳಲು ಕೂಡ ಬಯಸಿದ್ದರು.

ಈ ಸಂದರ್ಭದಲ್ಲಿ ಜಿಮ್ ಟ್ರೈನರ್ ದಿನೇಶ್ ಕಾರ್ತಿಕ್ ಅವರ ಮನೆಗೆ ತೆರಳಿ ವಿಚಾರಿಸಿದರು. ಜಿಮ್​ಗೆ ಯಾಕಾಗಿ ಬರುತ್ತಿಲ್ಲ ಎಂದು ಕೇಳಿದ್ದರು. ಈ ವೇಳೆ ತನ್ನೆಲ್ಲಾ ನೋವುಗಳನ್ನು ಡಿಕೆ ಟ್ರೈನರ್ ಬಳಿ ಹಂಚಿಕೊಂಡಿದ್ದರು. ಇದಕ್ಕೆಲ್ಲಾ ಒಂದೇ ಪರಿಹಾರ ಎಂದು ಜಿಮ್​ಗೆ ಬರಲು ಒತ್ತಾಯಿಸಿದರು. ಅಲ್ಲದೆ ತರಬೇತಿಯನ್ನು ಮತ್ತೆ ಶುರು ಮಾಡೋಣ ಎಂದು ಧೈರ್ಯ ತುಂಬಿದರು. ಅದರಂತೆ ಡಿಕೆ ಜಿಮ್ ಕಸರತ್ತನ್ನು ಪುನರಾರಂಭಿಸಿದರು. ಅದು ಕೂಡ ಹೊಸ ಆಟಗಾರನಂತೆ.

ದಿನೇಶ್ ಕಾರ್ತಿಕ್ ಕಸರತ್ತು ನಡೆಸುತ್ತಿದ್ದ ಅದೇ ಜಿಮ್​ನಲ್ಲಿ ಭಾರತೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಕೂಡ ವರ್ಕೌಟ್ ಮಾಡುತ್ತಿದ್ದರು. ದಿನೇಶ್ ಕಾರ್ತಿಕ್ ಅವರ ವೈಯುಕ್ತಿಕ ಜೀವನ ಅದಾಗಲೇ ಚರ್ಚಿತವಾಗಿತ್ತು. ಹೀಗಾಗಿ ಆ ಬಗ್ಗೆ ದೀಪಿಕಾಗೂ ಚೆನ್ನಾಗಿ ಗೊತ್ತಿತ್ತು. ಇಬ್ಬರು ಕ್ರೀಡಾಪಟುಗಳಾಗಿದ್ದ ಕಾರಣ ಟ್ರೈನರ್​ ಇಬ್ಬರಿಗೂ ಜೊತೆಗೆ ತರಬೇತಿ ನೀಡುತ್ತಿದ್ದರು. ಇದರಿಂದ ದೀಪಿಕಾ-ಡಿಕೆ ನಡುವೆ ಆತ್ಮೀಯತೆ ಬೆಳೆಯಿತು. ಮೊದಲೇ ಡಿಕೆಯ ಬಗ್ಗೆ ಗೊತ್ತಿದ್ದ ದೀಪಿಕಾ ಆತನ ಕಹಿ ಘಟನೆಗಳಿಗೆ ಕಿವಿಗೊಟ್ಟು ಸಮಾಧಾನಪಡಿಸಿದರು.

ಈ ಗೆಳೆತನ ದಿನೇಶ್ ಕಾರ್ತಿಕ್ ಅವರಲ್ಲಿ ಹೊಸ ಭರವಸೆ ಮೂಡಿಸಿತು. ಅಲ್ಲದೆ ಡಿಕೆಯ ಮನಸ್ಥಿತಿಯನ್ನು ಅರಿತ ದೀಪಿಕಾ ಜಿಮ್​ನಲ್ಲಿ ಸಲಹೆ ನೀಡಲು ಪ್ರಾರಂಭಿಸಿದಳು. ಮೊದಲೇ ಆಟಗಾರ್ತಿಯಾಗಿದ್ದ ದೀಪಿಕಾಗೆ ಕ್ರೀಡಾಳುಗಳ ಮನಸ್ಥಿತಿ ಚೆನ್ನಾಗಿ ಗೊತ್ತಿತ್ತು. ಅದರಂತೆ ಇಬ್ಬರು ಜೊತೆಯಾಗಿ ವರ್ಕೌಟ್ ಶುರು ಮಾಡಿದ್ದರು. ಇಲ್ಲಿ ಇಬ್ಬರ ಉದ್ದೇಶ ಗೆಲ್ಲುವುದೊಂದೇ ಆಗಿದ್ದ ಕಾರಣ, ಇಬ್ಬರೂ ಕೂಡ ಬೆವರಿಳಿಸಿ ಕಸರತ್ತು ಆರಂಭಿಸಿದರು.

ಒಂದೆಡೆ ದಿನೇಶ್ ಕಾರ್ತಿಕ್ ಪಾಲಿಗೆ ದೀಪಿಕಾ ಪಲ್ಲಿಕಲ್ ಹೊಸ ಭರವಸೆ ಮೂಡಿಸಿದರೆ, ಮತ್ತೊಂದೆಡೆ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದ ಮುರಳಿ ವಿಜಯ್ ವೈಫಲ್ಯ ಶುರುವಾಗಿತ್ತು. ಮೊದಲು ಭಾರತ ತಂಡದಿಂದ ಕೈ ಬಿಡಲಾಯಿತು. ಇದರ ಬೆನ್ನಲ್ಲೇ CSK ತಂಡದಿಂದ ಕೂಡ ಔಟ್ ಆದರು.

ಇತ್ತ ಕಡೆ ಡಿಕೆ ನಿಧಾನವಾಗಿ ಫಾರ್ಮ್​ಗೆ ಮರಳಿದ್ದರು. ದೀಪಿಕಾ ಅವರ ಪ್ರೋತ್ಸಾಹದೊಂದಿಗೆ ದಿನೇಶ್ ಕಾರ್ತಿಕ್ ನೆಟ್ಸ್​ನಲ್ಲೂ ಹೆಚ್ಚಿನ ಸಮಯ ಕಳೆದರು. ದೇಶೀಯ ಪಂದ್ಯಗಳಲ್ಲಿ ಹೆಚ್ಚು ಸ್ಕೋರ್ ಮಾಡಿದರು. ಗೆಳೆತಿಯ ಪ್ರೋತ್ಸಾಹದೊಂದಿಗೆ ಡಿಕೆ ಖಿನ್ನತೆಯಿಂದ ಹೊರಬಂದರು. ಹೊಸ ಭರವಸೆಯೊಂದಿಗೆ ಬ್ಯಾಟ್​ ಬೀಸಲಾರಂಭಿಸಿದರು. ತಮಿಳುನಾಡು ತಂಡಕ್ಕೆ ರಿಎಂಟ್ರಿ ಕೊಟ್ಟರು. ಭರ್ಜರಿ ಬ್ಯಾಟಿಂಗ್ ಮುಂದುವರೆಸಿ ಮತ್ತೆ ನಾಯಕನ ಸ್ಥಾನಕ್ಕೇರಿದರು.

ಅಷ್ಟೇ ಯಾಕೆ ಐಪಿಎಲ್​ನಲ್ಲೂ ಮಿಂಚಲಾರಂಭಿಸಿದರು. ಮತ್ತೆ ಟೀಮ್ ಇಂಡಿಯಾದಲ್ಲೂ ಚಾನ್ಸ್​ ಪಡೆದರು. ಜೊತೆಗೆ ಕೆಕೆಆರ್​ ತಂಡದ ನಾಯಕರಾಗಿ ಕಾಣಿಸಿಕೊಂಡರು. 34ನೇ ವಯಸ್ಸಿನಲ್ಲಿ ಮತ್ತೆ ಕೆರಿಯರ್​ನ ಉತ್ತುಂಗಕ್ಕೇರುವ ತವಕದಲ್ಲಿದ್ದ ಡಿಕೆಗೆ ಮತ್ತೆ ಸವಾಲು ಎದುರಾಗಿತ್ತು. ಈ ಬಾರಿ ರಿಷಭ್ ಪಂತ್ ಮೂಲಕ ಎಂಬುದು ವಿಶೇಷ. ಪಂತ್ ಟೀಮ್ ಇಂಡಿಯಾ ವಿಕೆಟ್​ ಕೀಪರ್​ ಆಗಿ ಎಂಟ್ರಿ ಕೊಟ್ಟಿದ್ದರು.

ಸೋತು ಗೆದ್ದಿದ್ದ ಡಿಕೆಗೆ ಇದ್ಯಾವುದೂ ದೊಡ್ಡ ವಿಷಯವಾಗಿರಲಿಲ್ಲ. ದೇಶೀಯ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಅನ್ನು ಮುಂದುವರೆಸಿದರು. ಅದಾಗಲೇ ಕೆಕೆಆರ್ ತಂಡದಿಂದ ಕೈಬಿಡುವುದು ಡಿಕೆಗೆ ಖಚಿತವಾಗಿತ್ತು. ಆದರೆ ದಿನೇಶ್ ಕಾರ್ತಿಕ್​ಗೆ ಅಂದೊಂದು ಕರೆ ಬಂದಿತ್ತು. ನೀವು ಸಿಎಸ್​ಕೆ ಪರ ಆಡುತ್ತೀರಲ್ವೇ? ಎಂದು ಕರೆ ಮಾಡಿದ ವ್ಯಕ್ತಿ ಕೇಳಿದ್ದರು.

ಹೌದು, ಸಿಎಸ್​ಕೆ ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯಾಗಿ ಡಿಕೆಯನ್ನು ತಂಡಕ್ಕೆ ಆಯ್ಕೆ ಮಾಡಲು ಬಯಸಿದ್ದರು. ಹೀಗಾಗಿ ಸಿಎಸ್​ಕೆ ಸಿಇಒ ಕಾಶಿ ವಿಶ್ವಾನಾಥನ್ ಡಿಕೆಗೆ ಕರೆ ಮಾಡಿ ಮಾತನಾಡಿದ್ದರು. ಅಲ್ಲದೆ ಮೆಗಾ ಹರಾಜಿನಲ್ಲೂ ದಿನೇಶ್ ಕಾರ್ತಿಕ್​ಗಾಗಿ ಸಿಎಸ್​ಕೆ ಫ್ರಾಂಚೈಸಿ ಬಿಡ್ಡಿಂಗ್ ಮಾಡಿತ್ತು. ಆದರೆ ಅದಾಗಲೇ ಡಿಕೆ ಸಾಬ್​​ನನ್ನು ಖರೀದಿಸಬೇಕೆಂದು ಪಣ ತೊಟ್ಟಿದ್ದ ಆರ್​ಸಿಬಿ ಭರ್ಜರಿ ಪೈಪೋಟಿ ನೀಡಿ ತನ್ನದಾಗಿಸಿಕೊಂಡಿತು. ಇದೀಗ ದಿನೇಶ್ ಕಾರ್ತಿಕ್ ಅಲಿಯಾಸ್ ಡಿಕೆ ಆರ್​ಸಿಬಿ ತಂಡದ ಹೊಸ ಭರವಸೆಯಾಗಿದ್ದಾರೆ. ಅಲ್ಲದೆ ಈ ಬಾರಿ ಆರ್​ಸಿಬಿ ಪರ ಫಿನಿಶರ್​ ಪಾತ್ರವನ್ನು ನಿರ್ವಹಿಸಿ ಮಿಂಚಿದ್ದಾರೆ.

ಮತ್ತೊಂದೆಡೆ ದೀಪಿಕಾ ಪಲ್ಲಿಕಲ್ ಸ್ಕ್ವಾಷ್‌ ವಿಶ್ವ ಚಾಂಪಿಯನ್‌ಶಿಪ್ ಅನ್ನು ಆಡಿದರು. ಜೋಶ್ನಾ ಪೊನ್ನಪ್ಪ ಅವರೊಂದಿಗೆ ಮಿಶ್ರ ಡಬಲ್ಸ್ ಮತ್ತು ಮಹಿಳೆಯರ ಡಬಲ್ಸ್ ಎರಡನ್ನೂ ಗೆದ್ದರು. ವಿಶೇಷ ಎಂದರೆ ದೀಪಿಕಾ ಪಲ್ಲಿಕಲ್ ಈಗ ದಿನೇಶ್ ಕಾರ್ತಿಕ್ ಅವರ ಪತ್ನಿ. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ.

ಆರ್​ಸಿಬಿ ಪರ ದಿನೇಶ್ ಕಾರ್ತಿಕ್ ಸಿಕ್ಸ್​-ಫೋರ್​ಗಳ ಸುರಿಮಳೆಗೈಯ್ಯುತ್ತಿದ್ದರೆ ಸ್ಟೇಡಿಯಂ ಗ್ಯಾಲರಿಯಲ್ಲಿ ದೀಪಿಕಾ ಹುರಿದುಂಬಿಸುತ್ತಿದ್ದರು. ಈ ಬೆಂಬಲ ಇದೀಗ 37ನೇ ವಯಸ್ಸಿನಲ್ಲಿ ದಿನೇಶ್ ಕಾರ್ತಿಕ್​ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಗುವಂತೆ ಮಾಡಿದೆ. ಅದರಂತೆ ದಕ್ಷಿಣ ಆಫ್ರಿಕಾ ವಿರುದ್ದ ಟಿ20 ಸರಣಿಯಲ್ಲಿ ಡಿಕೆ ಮಿಂಚಿದರೆ, ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಒಟ್ಟಿನಲ್ಲಿ ಮೋಸದಿಂದ ಸೋತ ಡಿಕೆ, ಪ್ರೀತಿಯಿಂದ ಗೆದ್ದು ನಿಂತಿರುವುದು ಇತಿಹಾಸ. ಎನಿವೇ…ಹ್ಯಾಪಿ ಬರ್ತ್​ಡೇ ದಿನೇಶ್ ಕಾರ್ತಿಕ್.

ಹೆಚ್ಚಿನ ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು