
ಐಪಿಎಲ್ ಅಂಗಳದಲ್ಲಿ ಅಬ್ಬರಿಸಿದ್ದ ‘ಫಿನಿಶರ್’ ದಿನೇಶ್ ಕಾರ್ತಿಕ್, ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್. ಆಟಗಾರನಾಗಿ ನಿವೃತ್ತಿ ಹೊಂದಿದ ಬೆನ್ನಲ್ಲೇ ಡಿಕೆ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಎರಡನೇ ಇನಿಂಗ್ಸ್ ಆರಂಭಿಸಿದ್ದರು. ಇದಕ್ಕೆ ವಿರಾಟ್ ಕೊಹ್ಲಿ ಎಂಬ ಕುತೂಹಲಕಾರಿ ವಿಷಯವನ್ನು ದಿನೇಶ್ ಕಾರ್ತಿಕ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ಗೆ ನಿವೃತ್ತಿ ಘೋಷಿಸಿದ ಬಳಿಕ ನಾನು ಗೊಂದಲದಲ್ಲಿದ್ದೆ. ಈ ವೇಳೆ ನಾನು ವಿರಾಟ್ ಕೊಹ್ಲಿಯನ್ನು ಎರಡು ಬಾರಿ ಭೇಟಿಯಾಗಿದ್ದೆ. ಈ ವೇಳೆ ಅವರು ನೀಡಿದ ಸಲಹೆಯು ನಾನು ಸೆಕೆಂಡ್ ಇನಿಂಗ್ಸ್ ಆರಂಭಿಸಲು ಕಾರಣವಾಯ್ತು ಎಂದಿದ್ದಾರೆ.
ವಿರಾಟ್ ಕೊಹ್ಲಿಯ ಈ ಸಲಹೆಗಳು ಮತ್ತು ಪ್ರೊತ್ಸಾಹದೊಂದಿಗೆ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಲು ಒಪ್ಪಿಕೊಂಡರು. ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಡಿಕೆ ಮೊದಲ ಸೀಸನ್ನಲ್ಲೇ ಆರ್ಸಿಬಿ ತಂಡಕ್ಕೆ ಕಪ್ ಗೆದ್ದು ಕೊಡುವ ಮೂಲಕ ಯಶಸ್ಸು ಸಾಧಿಸಿದರು.
ದಿನೇಶ್ ಕಾರ್ತಿಕ್ ಅವರ ಅಪಾರ ಅನುಭವ ಮತ್ತು ಭಾರತೀಯ ಕ್ರಿಕೆಟ್ನ ಆಳವಾದ ಜ್ಞಾನವು ತಂಡಕ್ಕೆ ವರದಾನವಾಗಿದೆ. ಮುಖ್ಯ ಕೋಚ್ ಆಂಡಿ ಫ್ಲವರ್ ಕೂಡ ತಂಡದಲ್ಲಿ ಒಬ್ಬ ಭಾರತೀಯ ಮಾರ್ಗದರ್ಶಕ ಇರಬೇಕು ಎಂದು ಬಯಸಿದ್ದರು. ಕಾರ್ತಿಕ್ ಅವರ ಮಾರ್ಗದರ್ಶನದಲ್ಲಿ ಆರ್ಸಿಬಿ ತಂಡವು ಈಗಾಗಲೇ 2025ರ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿನ ನಂತರ, ದಿನೇಶ್ ಕಾರ್ತಿಕ್ ಅವರ ಕೋಚಿಂಗ್ ಬೇಡಿಕೆ ಹೆಚ್ಚಾಗಿದೆ. 2026ರ ‘ದಿ ಹಂಡ್ರೆಡ್’ (The Hundred) ಕ್ರಿಕೆಟ್ ಟೂರ್ನಿಯಲ್ಲಿ ಅವರು ಲಂಡನ್ ಸ್ಪಿರಿಟ್ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ‘ಹುಳುಕು’ ಬಹಿರಂಗ ಪಡಿಸಿದ ಮಂಜ್ರೇಕರ್
ಒಟ್ಟಿನಲ್ಲಿ, ಮೈದಾನದಲ್ಲಿ ಫಿನಿಶರ್ ಆಗಿ ಮಿಂಚಿದ್ದ ದಿನೇಶ್ ಕಾರ್ತಿಕ್, ಈಗ ಮೈದಾನದ ಹೊರಗೂ ಕೊಹ್ಲಿಯ ಬೆಂಬಲದೊಂದಿಗೆ ಯಶಸ್ವಿ ತರಬೇತುದಾರರಾಗಿ ಹೊರಹೊಮ್ಮುತ್ತಿದ್ದಾರೆ.