
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಎರಡನೇ ದಿನದಾಟ ಅಂತ್ಯವಾಗಿದೆ. ಇದರೊಂದಿಗೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪೂರ್ವ ವಲಯ ತಂಡದ ಮೊದಲ ಇನ್ನಿಂಗ್ಸ್ ಕೂಡ ಅಂತ್ಯವಾಗಿದೆ. ಎರಡನೇ ದಿನದಾಟದ ಅಂತ್ಯದ ವೇಳೆಗೆ ಪೂರ್ವ ವಲಯ ತಂಡ ತನ್ನೇಲ್ಲ ವಿಕೆಟ್ಗಳನ್ನು ಕಳೆದುಕೊಂಡು ಬರೋಬ್ಬರಿ 708 ರನ್ಗಳನ್ನು ಕಲೆಹಾಕಿತು. ಇದರೊಂದಿಗೆ ದಿನದಾಟವೂ ಅಂತ್ಯವಾಯಿತು. ಹೀಗಾಗಿ ಮೂರನೇ ದಿನದಂದು ದಕ್ಷಿಣ ವಲಯ ತಂಡ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಲಿದೆ. ಪೂರ್ವ ವಲಯ ಪರ ನಾಯಕ ಇಶಾನ್ ಕಿಶನ್ ಅತ್ಯಧಿಕ 270 ರನ್ಗಳ ಇನ್ನಿಂಗ್ಸ್ ಆಡಿದರೆ, ಕುಮಾರ್ ಕುಶಾಗ್ರ ಶತಕ ಬಾರಿಸಿದರು. ದಕ್ಷಿಣ ವಲಯ ಪರ ತ್ರಿಪುರನ್ ವಿಜಯ್ ಅತ್ಯಧಿಕ 4 ವಿಕೆಟ್ಗಳನ್ನು ಪಡೆದರು.
ಮೊದಲ ದಿನದಂದು ಪೂರ್ವ ವಲಯ ತಂಡ 4 ವಿಕೆಟ್ಗಳನ್ನು ಕಳೆದುಕೊಂಡು 385 ರನ್ ಕಲೆಹಾಕಿತ್ತು. ನಾಯಕ ಕಿಶನ್ 111 ರನ್ ಮತ್ತು ಕುಮಾರ್ ಕುಶಾಗ್ರ 63 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಇಲ್ಲಿಂದ ಎರಡನೇ ದಿನದಾಟವನ್ನು ಮುಂದುವರೆಸಿದ್ದ ಇವರಿಬ್ಬರು ತಂಡವನ್ನು 471 ರನ್ಗಳ ಗಡಿ ದಾಟಿಸಿದರು. ಈ ಹಂತದಲ್ಲಿ ಕುಮಾರ್ ಕುಶಾಗ್ರ 101 ರನ್ ಬಾರಿಸಿ ಔಟಾಗುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು. ಇತ್ತ ನಾಯಕ ಇಶಾನ್ ಕಿಶನ್ ಕೂಡ 200 ರನ್ಗಳ ಗಡಿ ದಾಟಿದರು. ಆದರೆ ಗಾಯದಿಂದಾಗಿ ನಿವೃತ್ತಿ ಹೊಂದಿದರು.
ಒಂದೇ ಒಂದು ಪಂದ್ಯವನ್ನು ಸೋಲದ ನಾಯಕ ಇಶಾನ್ ಕಿಶನ್
ಇವರಿಬ್ಬರನ್ನು ಹೊರತುಪಡಿಸಿ ಅನುಕುಲ್ ರಾಯ್ 45, ಮೊಹಮ್ಮದ್ ಕೌನೆನ್ ಖುರೇಷಿ 40 ಮತ್ತು ಮೊಹಮ್ಮದ್ ಶಮಿ 28 ರನ್ಗಳ ಕಾಣಿಕೆ ನೀಡಿದರು. ಇತ್ತ ಕೊನೆಯಲ್ಲಿ ಬ್ಯಾಟಿಂಗ್ಗೆ ಬಂದ ನಾಯಕ ಇಶಾನ್ ಕಿಶನ್ 270 ರನ್ ಬಾರಿಸಿ ಔಟಾದರೆ ಮುಖೇಶ್ ಕುಮಾರ್ ವಿಕೆಟ್ ಪತನದೊಂದಿಗೆ ಪೂರ್ವ ವಲಯ ತಂಡದ ಇನ್ನಿಂಗ್ಸ್ ಅಂತ್ಯವಾಯಿತು. ದಕ್ಷಿಣ ವಲಯದ ಪರ ವಿಜಯ್ ನಾಲ್ಕು ವಿಕೆಟ್ ಪಡೆದರೆ, ಚಾಮ ಮಿಲಿಂದ್ ಮತ್ತು ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟ್ ಪಡೆದರು. ಶೇಖ್ ರಶೀದ್ ಒಂದು ವಿಕೆಟ್ ಪಡೆದರು. ಆದರೆ ತಂಡದಲ್ಲಿದ್ದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ 25 ಓವರ್ಗಳನ್ನು ಎಸೆದರಾದರೂ ಒಂದೇ ಒಂದು ವಿಕೆಟ್ ಸಿಗಲಿಲ್ಲ. ಅಲ್ಲದೆ ಸಿರಾಜ್ 140 ರನ್ಗಳನ್ನು ಬಿಟ್ಟುಕೊಟ್ಟು ದುಬಾರಿ ಕೂಡ ಆದರು.
Published On - 6:16 pm, Mon, 7 September 26