
ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟ ಅಂತ್ಯವಾಗಿದೆ. ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲ ದಿನ ಕೇವಲ2 ವಿಕೆಟ್ಗಳನ್ನು ಕಳೆದುಕೊಂಡಿದ್ದ ಟೀಂ ಇಂಡಿಯಾ ಎರಡನೇ ದಿನದಾಟದ ಕೆಲವೇ ಗಂಟೆಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡಿತು. ಹೀಗಾಗಿ ಎರಡನೇ ದಿನದಾಟದ ಅಂತ್ಯದ ವೇಳೆಗೆ ಭಾರತ 9 ವಿಕೆಟ್ ಕಳೆದುಕೊಂಡು 460 ರನ್ ಕಲೆಹಾಕಿದೆ. ತಂಡದ ಪರ ಕುಲ್ದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ ಕ್ರೀಸ್ನಲ್ಲಿದ್ದಾರೆ. ಮಳೆಯಿಂದಾಗಿ ಎರಡನೇ ದಿನದ ಆಟ ಸಮಯಕ್ಕೆ ಸರಿಯಾಗಿ ಆರಂಭವಾಗಲಿಲ್ಲ. ಎರಡನೇ ದಿನದ ಮೊದಲ ಸೆಷನ್ ಮಳೆಯಿಂದ ರದ್ದಾಯಿತು. ಹೀಗಾಗಿ ಎರಡನೇ ದಿನದ ಆಟವನ್ನು ಪೂರ್ಣ 4 ಗಂಟೆಗಳ ಕಾಲವೂ ಆಡಲು ಸಾಧ್ಯವಾಗಲಿಲ್ಲ.
ಮೊದಲ ದಿನದಂದು 2 ವಿಕೆಟ್ಗೆ 288 ರನ್ ಕಲೆಹಾಕಿದ್ದ ಟೀಂ ಇಂಡಿಯಾ ಎರಡನೇ ದಿನದಂದು 7 ವಿಕೆಟ್ಗಳನ್ನಿ ಕಳೆದುಕೊಂಡು 172 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಆದಾಗ್ಯೂ, ದೇವದತ್ ಪಡಿಕ್ಕಲ್ ಅವರ 167 ರನ್ಗಳು ಮತ್ತು ಕೆಳ ಕ್ರಮಾಂಕದ ಕೊಡುಗೆಗಳಿಂದಾಗಿ 460 ರನ್ ಕಲೆಹಾಕಿತು. ಮಳೆ ಮತ್ತು ತೇವವಾದ ಔಟ್ಫೀಲ್ಡ್ನಿಂದಾಗಿ, ಎರಡನೇ ದಿನದ ಆಟವು ಮಧ್ಯಾಹ್ನ 2:35 ಕ್ಕೆ ಪ್ರಾರಂಭವಾಯಿತು. ಮಳೆಯಿಂದಾಗಿ ಆತಿಥೇಯರಿಗೆ ಪ್ರಯೋಜನ ಸಿಕ್ಕಿತು. ತಂಡದ ಸ್ಪಿನ್ನರ್ಗಳು ಅತ್ಯುತ್ತಮ ಬೌಲಿಂಗ್ ಮಾಡುವ ಮೂಲಕ ತಂಡವನ್ನು ಮತ್ತೆ ಪಂದ್ಯಕ್ಕೆ ಕರೆತಂದರು.
ಮೊದಲ ದಿನದಂದು ಅಜೇಯರಾಗಿದ್ದ ದೇವದತ್ ಪಡಿಕ್ಕಲ್ ಎರಡನೇ ದಿನದಂದು 215 ಎಸೆತಗಳಲ್ಲಿ ತಮ್ಮ ಮೊದಲ 150 ರನ್ಗಳ ಗಡಿ ದಾಟಿದರು. ಆದಾಗ್ಯೂ 167 ರನ್ಗಳಿಗೆ ಅವರ ಇನ್ನಿಂಗ್ಸ್ ಅಂತ್ಯವಾಯಿತು. ಇತ್ತ ದೊಡ್ಡ ಹೊಡೆತವನ್ನು ಆಡುವ ಆತುರದಲ್ಲಿ ರಿಷಭ್ ಪಂತ್ ಕ್ಯಾಚ್ ನೀಡಿ 39 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಸ್ನಾಯು ಸೆಳೆತದಿಂದ ಚೇತರಿಸಿಕೊಂಡು ಬ್ಯಾಟಿಂಗ್ಗೆ ಮರಳಿದ ರಾಹುಲ್, ನಿನ್ನೆಯ ಸ್ಕೋರ್ಗೆ ಕೇವಲ 5 ರನ್ಗಳನ್ನು ಸೇರಿಸಿ ಔಟಾದರು. ನಂತರ ಬಂದ ರವೀಂದ್ರ ಜಡೇಜಾ ಕೂಡ ಬೇಗನೇ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ 377 ರನ್ಗಳಿಗೆ ಆರು ವಿಕೆಟ್ಗಳನ್ನು ಕಳೆದುಕೊಂಡಿತು. ಇಲ್ಲಿಂದ ತಂಡದ ಇನ್ನಿಂಗ್ಸ್ ನಿಭಾಯಿಸಿದ ಧ್ರುವ್ ಜುರೆಲ್ ನಿರ್ಣಾಯಕ ಅರ್ಧಶತಕ ಬಾರಿಸಿದರು. ಇದರ ಜೊತೆಗೆ ಮಾನವ್ ಸುತಾರ್ ಅವರೊಂದಿಗೆ ಏಳನೇ ವಿಕೆಟ್ಗೆ 55 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು.
IND vs SL: ಗಾಲೆ ಟೆಸ್ಟ್ 2ನೇ ದಿನದಾಟದ ಸಮಯ ಬದಲಾವಣೆ
ಒಂದು ಹಂತದಲ್ಲಿ, ಭಾರತ 500 ಕ್ಕೂ ಹೆಚ್ಚು ಸ್ಕೋರ್ ಕಲೆಹಾಕುತ್ತದೆ ಎಂದು ತೋರುತ್ತಿತ್ತು, ಆದರೆ ಎರಡನೇ ದಿನದಂದು 172 ರನ್ಗಳಿಗೆ ಏಳು ವಿಕೆಟ್ಗಳನ್ನು ಕಳೆದುಕೊಂಡು ಆ ಅವಕಾಶವನ್ನು ಕಳೆದುಕೊಂಡಿತು. ಮೂರನೇ ದಿನದಂದು ಟೀಂ ಇಂಡಿಯಾ ಮತ್ತೆ ಬ್ಯಾಟಿಂಗ್ ಮಾಡುವ ಸಾಧ್ಯತೆಗಳಿಲ್ಲ. ಪಿಚ್ ಸ್ಪಿನ್ನರ್ಗಳಿಗೆ ನೆರವಾಗುತ್ತಿರುವ ಕಾರಣ, ಲಂಕಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಬಹುದು. ಇದರೊಂದಿಗೆ ಬೇಗನೇ ಲಂಕಾ ತಂಡವನ್ನು ಆಲೌಟ್ ಮಾಡಿ ಬೃಹತ್ ಮುನ್ನಡೆ ಪಡೆದುಕೊಳ್ಳುವುದು ಟೀಂ ಇಂಡಿಯಾದ ಉದ್ದೇಶವಾಗಿದೆ.
Published On - 6:20 pm, Sun, 16 August 26