
ಜೂನ್ 20 ರಿಂದ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ (Team India’s England Tour 2025) ಆರಂಭವಾಗಲಿದೆ. ಇದಕ್ಕಾಗಿ ಭಾರತ ಯುವ ತಂಡ ಕಠಿಣ ತಯಾರಿ ನಡೆಸುತ್ತಿದೆ. ಸರಣಿಗೆ ಆಯ್ಕೆಯಾದ ಎಲ್ಲಾ ಆಟಗಾರರು ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ. ಇದೇ ವೇಳೆ ಹೊಸ ಆಟಗಾರರನ್ನು ತಂಡಕ್ಕೆ ಸ್ವಾಗತಿಸಿದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir), ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ (Virat Kohli) ಅವರನ್ನು ಸಹ ಈ ಸಮಯದಲ್ಲಿ ನೆನಪಿಸಿಕೊಂಡಿದ್ದಾರೆ. ಹಾಗೆಯೇ ಗಂಭೀರ್, ಎಲ್ಲಾ ಆಟಗಾರರಲ್ಲಿ ಉತ್ಸಾಹ ತುಂಬುವ ಭಾಷಣ ಮಾಡಿದ ವಿಡಿಯೋವನ್ನು ಇದೀಗ ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ.
ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೂ ಮುನ್ನ ಗೌತಮ್ ಗಂಭೀರ್ ತಮ್ಮ ಭಾಷಣದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಪ್ರಸ್ತಾಪಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದು ಈಗ ಚರ್ಚೆಯ ಕೇಂದ್ರಬಿಂದುವಾಗಿದೆ. ತಮ್ಮ ಭಾಷಣದಲ್ಲಿ ತಂಡದ ಹೊಸ ಆರಂಭ ಮತ್ತು ಯುವ ಆಟಗಾರರ ಜವಾಬ್ದಾರಿಯ ಮೇಲೆ ಹೆಚ್ಚು ಒತ್ತು ನೀಡಿದ ಗಂಭೀರ್, ತಂಡದೊಳಗಿನ ಹೊಸ ಶಕ್ತಿ ಮತ್ತು ಬದ್ಧತೆಯ ಬಗ್ಗೆ ಮಾತನಾಡಿದರು. ಇದೇ ವೇಳೆ, ಇತ್ತೀಚೆಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ, ಇದು ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ. ಅದೇ ಸಮಯದಲ್ಲಿ, ಆರ್. ಅಶ್ವಿನ್ ಕೂಡ ನಿವೃತ್ತರಾಗಿದ್ದಾರೆ. ತಂಡದ ಹಿರಿಯ ಆಟಗಾರರ ನಿರ್ಗಮನದಿಂದ ಉಂಟಾದ ಶೂನ್ಯವನ್ನು ತುಂಬುವ ಜವಾಬ್ದಾರಿ ಈಗ ಶುಭ್ಮನ್ ಗಿಲ್ ಮತ್ತು ಇತರ ಉದಯೋನ್ಮುಖ ಯುವ ಆಟಗಾರರ ಮೇಲಿದೆ ಎಂದು ಗಂಭೀರ್ ಹೇಳಿದ್ದಾರೆ.
‘ಈ ಪ್ರವಾಸವನ್ನು ನಾವು ಎರಡು ರೀತಿಯಲ್ಲಿ ನೋಡಬಹುದು. ಮೊದಲನೆಯದ್ದು, ನಮ್ಮ ಮೂವರು ಅತ್ಯಂತ ಅನುಭವಿ ಆಟಗಾರರು ಈಗ ತಂಡದಲ್ಲಿ ಇಲ್ಲ. ಅವರ ಅನುಪಸ್ಥಿತಿಯಲ್ಲಿ ನಮಗೆ ದೇಶಕ್ಕಾಗಿ ಏನಾದರೂ ಮಾಡಲು ಈ ಉತ್ತಮ ಅವಕಾಶ ಸಿಕ್ಕಿದೆ. ತಂಡದ ಉತ್ಸಾಹವನ್ನು ಬಲಪಡಿಸುವ ಮತ್ತು ಇಂಗ್ಲೆಂಡ್ನಂತಹ ಕಠಿಣ ಪ್ರವಾಸಕ್ಕೆ ಸಿದ್ಧರಾಗುವ ನಿಟ್ಟಿನಲ್ಲಿ ಹಿರಿಯ ಆಟಗಾರರ ನಿಲುವನ್ನು ಒಂದು ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗುತ್ತಿದೆ’ ಎಂದು ಗಂಭೀರ್ ಹೇಳಿದ್ದಾರೆ.
Karun Nair: ಟೀಕಿಸುವವರಿಗೆ ದ್ವಿಶತಕದ ಉತ್ತರ ನೀಡಿದ ಕನ್ನಡಿಗ ಕರುಣ್ ನಾಯರ್
ಈ ಸರಣಿ ಕರುಣ್ ನಾಯರ್ ಅವರಿಗೆ ಬಹಳ ಮುಖ್ಯ. ಅವರು ಹಲವು ವರ್ಷಗಳ ನಂತರ ಭಾರತ ತಂಡಕ್ಕೆ ಮರಳಿದ್ದಾರೆ. ತಮ್ಮ ಭಾಷಣದಲ್ಲಿ ಇದನ್ನು ಸ್ಮರಿಸಿದ ಗಂಭೀರ್, ‘ಪುನರಾಗಮನ ಎಂದಿಗೂ ಸುಲಭವಲ್ಲ, ಕರುಣ್ 7 ವರ್ಷಗಳ ನಂತರ ತಂಡಕ್ಕೆ ಮರಳಿದ್ದಾರೆ. ಕಳೆದ ವರ್ಷ ಕರುಣ್ ನಾಯರ್ ಅದ್ಭುತ ಪ್ರದರ್ಶನ ನೀಡಿದರು, ನೀವು ಗಳಿಸಿದ ರನ್ಗಳ ಸಂಖ್ಯೆ ಮತ್ತು ಮುಖ್ಯವಾಗಿ ಎಂದಿಗೂ ಬಿಟ್ಟುಕೊಡದ ಮನೋಭಾವ, ಇದು ಸ್ಪೂರ್ತಿದಾಯಕ ವಿಷಯ. ಕರುಣ್ ನಾಯರ್ಗೆ ಮತ್ತೆ ಸ್ವಾಗತ’ ಎಂದರು. ಇದರ ಹೊರತಾಗಿ, ಮೊದಲ ಬಾರಿಗೆ ಟೆಸ್ಟ್ ತಂಡದ ಭಾಗವಾಗಿರುವ ಸಾಯಿ ಸುದರ್ಶನ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಸಹ ಗಂಭೀರ್ ಸ್ವಾಗತಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Thu, 12 June 25