ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2025) ಚೊಚ್ಚಲ ಟ್ರೋಫಿ ಎತ್ತಿ ಹಿಡಿಯಬೇಕೆಂಬ ಧ್ಯೇಯದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಐಪಿಎಲ್ ಸೀಸನ್-18 ಗಾಗಿ ಸಜ್ಜಾಗಿ ನಿಂತಿದೆ. ಈ ಸಜ್ಜಾಗುವಿಕೆಯ ನಡುವೆ ಆರ್ಸಿಬಿ ತಂಡವು ಈ ಬಾರಿ ಕೂಡ ಸೋತು ಸುಣ್ಣವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಆ್ಯಡಂ ಗಿಲ್ಕ್ರಿಸ್ಟ್.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ನಡೆಸುವ ಕ್ಲಬ್ ಪ್ರೈರಿ ಫೈರ್ ಪಾಡ್ಕ್ಯಾಸ್ಟ್ನಲ್ಲಿ ಐಪಿಎಲ್ ಕುರಿತು ಮಾತನಾಡಿದ ಆ್ಯಡಂ ಗಿಲ್ಕ್ರಿಸ್ಟ್, ಈ ಬಾರಿ ಆರ್ಸಿಬಿ ತಂಡವು ಕೊನೆಯ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇಂಗ್ಲೆಂಡ್ ಆಟಗಾರರು ಹೆಚ್ಚಿದ್ದಾರೆ. ಹೀಗಾಗಿ ಅವರು ಗೆಲ್ಲುವ ಸಾಧ್ಯತೆಯಿಲ್ಲ ಎಂದು ಗಿಲ್ಕ್ರಿಸ್ಟ್, ಮೈಕಲ್ ವಾನ್ ಅವರ ಕಾಲೆಳೆದಿದ್ದಾರೆ.
ಈ ಮೂಲಕ ಈ ಬಾರಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುವುದನ್ನು ನಿರೀಕ್ಷಿಸಬೇಡಿ. ನಾನು ವಿರಾಟ್ ಕೊಹ್ಲಿಯ ವಿರೋಧಿ ಏನಲ್ಲ. ಆರ್ಸಿಬಿ ಅಭಿಮಾನಿಗಳ ವಿರುದ್ಧವೂ ಇಲ್ಲ. ಇಂತಹ ಕಠೋರ ಹೇಳಿಕೆಗೆ ಮೊದಲೇ ನಾನು ಆರ್ಸಿಬಿ ಫ್ಯಾನ್ಸ್ ಬಳಿ ಕ್ಷಮೆಯಾಚಿಸುತ್ತೇನೆ. ಇಂತಹ ಆಟಗಾರರನ್ನು ಆಯ್ಕೆ ಮಾಡಿದ ನಿಮ್ಮ ಆಯ್ಕೆಗಾರರ ಬಳಿ ಮಾತನಾಡಡಿದರೆ ಉತ್ತಮ ಎಂದು ಆ್ಯಡಂ ಗಿಲ್ಕ್ರಿಸ್ಟ್ ಹೇಳಿದ್ದಾರೆ.
ಆ್ಯಡಂ ಗಿಲ್ಕ್ರಿಸ್ಟ್ ಹೇಳಿದಂತೆ, ಈ ಬಾರಿ ಆರ್ಸಿಬಿ ತಂಡದಲ್ಲಿ ಮೂವರು ಇಂಗ್ಲೆಂಡ್ ಆಟಗಾರರಿದ್ದಾರೆ. ಅವರೆಂದರೆ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ಜೇಕಬ್ ಬೆಥೆಲ್. ಈ ಮೂವರು ಆಟಗಾರರು ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಅತ್ತ ಮೂವರು ಇಂಗ್ಲೆಂಡ್ ಪ್ಲೇಯರ್ಗಳು ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಆರ್ಸಿಬಿ ತಂಡವು ಇಂಗ್ಲೆಂಡ್ ಆಟಗಾರರ ನೆರವಿನಿಂದ ಕಪ್ ಗೆಲ್ಲಲು ಸಾಧ್ಯವಿಲ್ಲ. ಈ ಬಾರಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಲಿದೆ ಎಂದು ಆ್ಯಡಂ ಗಿಲ್ಕ್ರಿಸ್ಟ್ ಹೇಳಿದ್ದಾರೆ.
ಇದನ್ನೂ ಓದಿ: IPL 2025: ಬರೆದಿಟ್ಕೊಳ್ಳಿ, ಈ ಸಲ ಕಪ್ ಇವರದ್ದೆ… ಎಬಿಡಿ ಭವಿಷ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಝಲ್ವುಡ್, ರಾಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್ಗಿಡಿ.