
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ 22ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಕೇವಲ ಒಂದು ಓವರ್ ಮಾತ್ರ ಎಸೆದಿದ್ದಾರೆ. ಅದು ಸಹ 17ನೇ ಓವರ್ನಲ್ಲಿ. ಅಂದರೆ 16 ಓವರ್ಗಳವರೆಗೆ ಚಹಲ್ಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಚೆಂಡು ನೀಡಿರಲಿಲ್ಲ. ಇನ್ನು 17ನೇ ಓವರ್ ಎಸೆದ ಯುಜ್ವೇಂದ್ರ ಚಹಲ್ 9 ರನ್ ನೀಡಿದರು. ಇದಾಗ್ಯೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಯುಜ್ವೇಂದ್ರ ಚಹಲ್ಗೆ ಓವರ್ ನೀಡದಿರಲು ಕಾರಣವೇನು? ಎಂಬ ಪ್ರಶ್ನೆಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಉತ್ತರ ನೀಡಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅಯ್ಯರ್, ಇದು ನಮ್ಮ ತಂಡದ ಕಾರ್ಯತಂತ್ರದ ನಿರ್ಧಾರವಾಗಿತ್ತು.
ಏಕೆಂದರೆ ಶಿವಂ ದುಬೆ ಮತ್ತು ಡೆವೊನ್ ಕಾನ್ವೇ ಕ್ರೀಸ್ನಲ್ಲಿದ್ದರು. ಇಬ್ಬರೂ ಸ್ಪಿನ್ ವಿರುದ್ಧ ಉತ್ತಮವಾಗಿ ಬ್ಯಾಟ್ ಮಾಡುತ್ತಾರೆ. ಮಧ್ಯದ ಓವರ್ಗಳಲ್ಲಿ ಅವರು ಚೆನ್ನಾಗಿ ಆಡಿದ್ದರು. ಅಂತಹ ಪರಿಸ್ಥಿತಿಯಲ್ಲಿ ಚಹಲ್ಗೆ ಓವರ್ ನೀಡುವುದು ಸರಿಯಾದ ಕ್ರಮವಾಗಿರಲಿಲ್ಲ.
ಒಂದು ವೇಳೆ ನಾವು ಯುಜ್ವೇಂದ್ರ ಚಹಲ್ ಅವರನ್ನು ದಾಳಿಗಿಳಿಸಿದ್ದರೆ, ಅವರು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವ ಸಾಧ್ಯತೆಯಿತ್ತು. ಹೀಗಾಗಿ ಶಿವಂ ದುಬೆ ಔಟಾಗುವ ತನಕ ಚಹಲ್ಗೆ ಬೌಲಿಂಗ್ ನೀಡದಿರಲು ನಿರ್ಧರಿಸಿದೆವು ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಇದೇ ವೇಳೆ ಯುಜ್ವೇಂದ್ರ ಚಹಲ್ ಅವರ ಬೌಲಿಂಗ್ ಸಾಮರ್ಥ್ಯವನ್ನು ಹಾಡಿಹೊಗಳಿರುವ ಶ್ರೇಯಸ್ ಅಯ್ಯರ್, ಅವರೊಬ್ಬರು ಬುದ್ಧಿವಂತ ಬೌಲರ್. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಕೆಲವೊಮ್ಮೆ ನಾವು ನಮ್ಮ ಕಾರ್ಯತಂತ್ರಗಳನ್ನು ಸಹ ನೋಡಬೇಕಿರುತ್ತದೆ.
ಹೀಗಾಗಿ ಸಿಎಸ್ಕೆ ವಿರುದ್ಧ ವೇಗಿಗಳೊಂದಿಗೆ ಮುಂದುವರೆಯಲು ನಿರ್ಧರಿಸಿದೆವು. ಅಲ್ಲದೆ ವೇಗದ ಬೌಲರ್ಗಳು ನಿಧಾನಗತಿಯ ಎಸೆತಗಳೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಪರ ಯುವ ಎಡಗೈ ದಾಂಡಿಗ ಪ್ರಿಯಾಂಶ್ ಆರ್ಯ (103) ಶತಕ ಬಾರಿಸಿದ್ದರು. ಈ ಶತಕದ ನೆರವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು 20 ಒವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ ಕಲೆಹಾಕಿತು.
ಇದನ್ನೂ ಓದಿ: IPL 2025: ಗೆಲುವಿನ ಬೆನ್ನಲ್ಲೇ RCB ನಾಯಕ ರಜತ್ ಪಾಟಿದಾರ್ಗೆ ದಂಡ ವಿಧಿಸಿದ ಬಿಸಿಸಿಐ
220 ರನ್ಗಳ ಕಠಿಣ ಗುರಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವು 18 ರನ್ಗಳ ಜಯ ಸಾಧಿಸಿದೆ.