RCB vs GT Final: ಕೃನಾಲ್ ಪಾಂಡ್ಯ ಬೌಲಿಂಗ್​ಗೆ ಕ್ರಿಕೆಟ್ ದೇವರೂ ಫಿದಾ..! ಏನಂದ್ರು ನೋಡಿ

Krunal Pandya's Brilliance: ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2026 ಫೈನಲ್‌ನಲ್ಲಿ ಆರ್‌ಸಿಬಿ ಬೌಲರ್‌ಗಳು ಗುಜರಾತ್ ಟೈಟಾನ್ಸ್ ತಂಡವನ್ನು 156 ರನ್‌ಗಳಿಗೆ ಕಟ್ಟಿಹಾಕಿದರು. ಕೃನಾಲ್ ಪಾಂಡ್ಯ ತಮ್ಮ ಜಾಣ್ಮೆಯ ಸ್ಪಿನ್ ಮೂಲಕ ಜೋಸ್ ಬಟ್ಲರ್ ಅವರನ್ನು ಸ್ಟಂಪ್ ಮಾಡಿದರು. ಈ ಅದ್ಭುತ ಬೌಲಿಂಗ್‌ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಬೌಲಿಂಗ್ ಪ್ರದರ್ಶನ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ.

RCB vs GT Final: ಕೃನಾಲ್ ಪಾಂಡ್ಯ ಬೌಲಿಂಗ್​ಗೆ ಕ್ರಿಕೆಟ್ ದೇವರೂ ಫಿದಾ..! ಏನಂದ್ರು ನೋಡಿ
Krunal Pandya

Updated on: May 31, 2026 | 10:19 PM

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ ಫೈನಲ್ (IPL 2026 Final) ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಗುಜರಾತ್ ಟೈಟಾನ್ಸ್ ತಂಡ, ಆರ್​ಸಿಬಿಯ (GT vs RCB) ಸಾಂಘಿಕ ದಾಳಿಗೆ ಅಕ್ಷರಶಃ ನಲುಗಿ ಹೋಯಿತು. ಈ ಪಂದ್ಯದಲ್ಲಿ ಆರ್​ಸಿಬಿಯ ಪ್ರತಿಯೊಬ್ಬ ಬೌಲರ್​ಗಳು ಕರಾರುವಕ್ಕಾದ ದಾಳಿ ನಡೆಸಿದರು. ಹೀಗಾಗಿ ತವರಿನ ಲಾಭ ಪಡೆಯುವಲ್ಲಿ ವಿಫಲವಾದ ಗುಜರಾತ್ 156 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಗುಜರಾತ್ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ ಆರ್​ಸಿಬಿ ಬೌಲಿಂಗ್ ವಿಭಾಗಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ತಮ್ಮ ಮ್ಯಾಜಿಕಲ್ ಸ್ಪಿನ್ ಮೂಲಕ ಗುಜರಾತ್ ತಂಡದ ಅನುಭವಿ ಬ್ಯಾಟರ್ ಜೋಸ್ ಬಟ್ಲರ್ (Jos Buttler) ಅವರನ್ನು ಔಟ್ ಮಾಡಿದ ಕೃನಾಲ್ ಪಾಂಡ್ಯ (Krunal Pandya) ಅವರ ಬೌಲಿಂಗ್​ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಟ್ಲರ್ ಬಲಿ ಪಡೆದ ಕೃನಾಲ್

ಫೈನಲ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ ಕೃನಾಲ್ ಪಾಂಡ್ಯ ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 23 ರನ್‌ಗಳನ್ನು ಬಿಟ್ಟುಕೊಟ್ಟು ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ ಅವರ ವಿಕೆಟ್ ಪಡೆದರು. ಗುಜರಾತ್ ಇನ್ನಿಂಗ್ಸ್‌ನ 13 ನೇ ಓವರ್ ಅನ್ನು ಕೃನಾಲ್ ಪಾಂಡ್ಯ ಬೌಲಿಂಗ್ ಮಾಡಿದರು. ಇತ್ತ ಸ್ಟ್ರೈಕ್​ನಲ್ಲಿದ್ದ ಜೋಸ್ ಬಟ್ಲರ್ ಈಗಾಗಲೇ ಕ್ರೀಸ್‌ನಲ್ಲಿ ನೆಲೆಸಿದ್ದರು. ಓವರ್‌ನ ಮೊದಲ ಎಸೆತದಲ್ಲೇ ಬಟ್ಲರ್ ದೊಡ್ಡ ಶಾಟ್ ಹೊಡೆಯಲು ಮುಂದಾಗಿ ಕ್ರೀಸ್​ನಿಂದ ಹೊರಬಂದರು.

ಈ ಹಂತದಲ್ಲಿ ಜಾಣತನ ತೊರಿದ ಕೃನಾಲ್, ಚೆಂಡನ್ನು ಸ್ವಲ್ಪ ವೇಗವಾಗಿ ಯಾರ್ಕರ್ ಬೌಲ್ ಮಾಡಿದರು. ಹೀಗಾಗಿ ಬಟ್ಲರ್​ಗೆ ಆ ಚೆಂಡನ್ನು ಆಡಲು ಸಾಧ್ಯವಾಗಲಿಲ್ಲ. ಇತ್ತ ಸ್ಟಂಪ್ಸ್ ಹಿಂದೆ ಇದ್ದ ಜಿತೇಶ್ ಶರ್ಮಾ ಯಾವುದೇ ತಪ್ಪು ಮಾಡದೆ ಬಟ್ಲರ್ ಅವರನ್ನು ಸ್ಟಂಪ್ ಮಾಡಿದರು. ಹೀಗಾಗಿ ಬಟ್ಲರ್ 23 ಎಸೆತಗಳಲ್ಲಿ ಕೇವಲ 18 ರನ್ ಬಾರಿಸಲಷ್ಟೇ ಶಕ್ತವಾದರು. ಬಟ್ಲರ್ ಅವರ ಈ ವಿಕೆಟ್ ಗುಜರಾತ್ ತಂಡದ ಸ್ಕೋರ್ ಬೋರ್ಡ್​ಗೆ ದೊಡ್ಡ ಬ್ರೇಕ್ ಹಾಕಿತು.

ಕೃನಾಲ್ ಬೌಲಿಂಗ್​ಗೆ ಸಚಿನ್ ಮೆಚ್ಚುಗೆ

ಇದೀಗ ಕೃನಾಲ್ ಅವರ ಈ ಜಾಣ್ಮೆಯ ಬೌಲಿಂಗ್​ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ, ‘ಕೃನಾಲ್ ಪಾಂಡ್ಯ ಅವರಿಂದ ಎಂತಹ ಅದ್ಭುತ ಎಸೆತ! ಕೊನೆಯವರೆಗೂ ಬ್ಯಾಟ್ಸ್‌ಮನ್‌ನ ಪಾದಚಲನೆಯನ್ನು ಗಮನಿಸಿ ಚೆಂಡನ್ನು ಬೌಲ್ ಮಾಡಿದರು. ಇದರೊಂದಿಗೆ ಜೋಸ್ ಬಟ್ಲರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು’ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us