Ranji Trophy Final: ಕೇರಳ ವಿರುದ್ಧ ಗೆಲುವಿನ ಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್

Ranji Trophy Final, Karun Nair's Century: ವಿದರ್ಭ ತಂಡವು ರಣಜಿ ಟ್ರೋಫಿ ಫೈನಲ್‌ನಲ್ಲಿ ಕೇರಳ ವಿರುದ್ಧ ಮೇಲುಗೈ ಸಾಧಿಸಿದೆ. ಕರುಣ್ ನಾಯರ್ ಅವರ ಅದ್ಭುತ ಅಜೇಯ ಶತಕದಿಂದ ವಿದರ್ಭ ತಂಡ ಗೆಲುವಿನತ್ತ ಸಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಕರುಣ್, ಈ ಸೀಸನ್‌ನಲ್ಲಿ ನಾಲ್ಕನೇ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.

Ranji Trophy Final: ಕೇರಳ ವಿರುದ್ಧ ಗೆಲುವಿನ ಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್
Karun Nair

Updated on: Mar 01, 2025 | 4:06 PM

ರಣಜಿ ಟ್ರೋಫಿ ಫೈನಲ್ (Ranji Trophy Final) ಪಂದ್ಯದಲ್ಲಿ ವಿದರ್ಭ ಮತ್ತು ಕೇರಳ ತಂಡಗಳು ಮುಖಾಮುಖಿಯಾಗಿವೆ. ಈ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡ ಮೇಲುಗೈ ಸಾಧಿಸಿದ್ದು, ಮೊದಲ ಇನ್ನಿಂಗ್ಸ್​ನಲ್ಲಿ ಮುನ್ನಡೆ ಕೂಡ ಪಡೆದುಕೊಂಡಿದೆ. ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ವಿದರ್ಭ ತಂಡದ ಪರ ಕನ್ನಡಿಗ ಕರುಣ್ ನಾಯರ್ (Karun Nair) ಪಂದ್ಯದ ನಾಲ್ಕನೇ ದಿನದಂದು, ಅದ್ಭುತ ಶತಕ ಬಾರಿಸುವ ಮೂಲಕ ತಮ್ಮ ತಂಡವನ್ನು ಪ್ರಶಸ್ತಿಯ ಹತ್ತಿರಕ್ಕೆ ಕೊಂಡೊಯ್ದಿದ್ದಾರೆ. ಕರುಣ್ ಅವರ ಈ ಅಜೇಯ ಶತಕದ ಆಧಾರದ ಮೇಲೆ ವಿದರ್ಭ ತಂಡವು ನಾಲ್ಕನೇ ದಿನದಂದು 250 ರನ್​ಗಳಿಗೂ ಅಧಕ ರನ್ ಕಲೆಹಾಕಿದೆ.

ಕೇರಳ ತಂಡವನ್ನು 342 ರನ್​ಗಳಿಗೆ ಆಲೌಟ್ ಮಾಡಿ 37 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ವಿದರ್ಭ ತಂಡ ನಾಲ್ಕನೇ ದಿನದಾಟದ ಮೊದಲ ಸೆಷನ್​ನಲ್ಲಿಯೇ ಕೇವಲ ಏಳು ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಇಲ್ಲಿಂದ ತಂಡದ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡ ಕರುಣ್ ನಾಯರ್ 184 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಅಜೇಯ ಶತಕ ಬಾರಿಸಿದರು. ಕರುಣ್​ಗೆ ಡ್ಯಾನಿಶ್ ಮಾಲೆವಾರ್ ಅವರಿಂದ ಉತ್ತಮ ಬೆಂಬಲವೂ ದೊರೆಯಿತು. ಡ್ಯಾನಿಶ್​ ಕೂಡ 162 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 73 ರನ್ ಗಳಿಸಿದರು. ಇಬ್ಬರೂ ಮೂರನೇ ವಿಕೆಟ್‌ಗೆ 182 ರನ್‌ಗಳ ಜೊತೆಯಾಟ ನೀಡಿದರು.

ಇದನ್ನೂ ಓದಿ
ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌; ಕರುಣ್ ನಾಯರ್ ಅಜೇಯ ಶತಕ
ರೈಲ್ವೇಸ್ ವೇಗಿಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ

ಮೊದಲ ಇನ್ನಿಂಗ್ಸ್‌ನಲ್ಲೂ ಮಿಂಚಿದ ನಾಯರ್

ಎರಡನೇ ಇನ್ನಿಂಗ್ಸ್​ನಲ್ಲಿ ಶತಕ ಬಾರಿಸುವುದಕ್ಕೂ ಮುನ್ನ ಮೊದಲ ಇನ್ನಿಂಗ್ಸ್​ನಲ್ಲೂ ನಾಯರ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 86 ರನ್​ಗಳ ಕಾಣಿಕೆ ನೀಡಿದರು. ಕರುಣ್ ಅವರ ಈ ಆಟದಿಂದಾಗಿ ವಿದರ್ಭ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 379 ರನ್‌ ಕಲೆಹಾಕಿತು. ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸುವುದರೊಂದಿಗೆ ಕರುಣ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8,000 ರನ್‌ಗಳನ್ನು ಪೂರ್ಣಗೊಳಿಸಿದರು. ಅಲ್ಲದೆ ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಾಯರ್ ಅವರ 36 ನೇ ಅರ್ಧಶತಕವಾಗಿತ್ತು.

ಇದನ್ನೂ ಓದಿ: Ranji Trophy 2025: ಮತ್ತೊಂದು ಅಜೇಯ ಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್

ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟ್ಸ್‌ಮನ್

ನಾಯರ್ ಈಗ 2024/25 ರಣಜಿ ಟ್ರೋಫಿ ಆವೃತ್ತಿಯಲ್ಲಿ 800 ಕ್ಕೂ ಅಧಿಕ ರನ್ ಕಲೆಹಾಕಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಬಾರಿಯ ರಣಜಿ ಟೂರ್ನಿಯಲ್ಲಿ ಇದು ಕರುಣ್ ಸಿಡಿಸಿರುವ ನಾಲ್ಕನೇ ಶತಕವಾಗಿದೆ. ಈ ಸೀಸನ್​ನಲ್ಲಿ ಆಡಿರುವ 16 ಇನ್ನಿಂಗ್ಸ್‌ಗಳಲ್ಲಿ ಕರುಣ್ 55 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಇನ್ನು ಕರುಣ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಇಲ್ಲಿಯವರೆಗೆ ಅವರು 114 ಪಂದ್ಯಗಳ 183 ಇನ್ನಿಂಗ್ಸ್‌ಗಳಲ್ಲಿ ಎಂಟು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Sat, 1 March 25