ಅಭಿಮಾನಿಗಳಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾದ ಧೋನಿ

ಗಾಯದ ಸಮಸ್ಯೆಯಿಂದ ಐಪಿಎಲ್ 2026ರಲ್ಲಿ ಹೊರಗುಳಿದಿದ್ದ ಎಂ.ಎಸ್. ಧೋನಿ, 2027ರ ಸೀಸನ್‌ಗೆ ಮರಳಲಿದ್ದಾರೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಖಚಿತಪಡಿಸಿದ್ದಾರೆ. ಚೆನ್ನೈನಲ್ಲಿ ಅಭಿಮಾನಿಗಳಿಗೆ ವಿದಾಯ ಪಂದ್ಯ ಆಡುವ ಧೋನಿ ಮಾತು ಉಳಿಸಿಕೊಳ್ಳಲಿದ್ದಾರೆ ಎಂದು ಸಿಎಸ್‌ಕೆ ಭರವಸೆ ನೀಡಿದೆ. ಇದು ಧೋನಿ ಅಭಿಮಾನಿಗಳಿಗೆ ಭಾರಿ ಸಂತಸ ತಂದಿದೆ.

ಅಭಿಮಾನಿಗಳಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾದ ಧೋನಿ
ಧೋನಿ

Updated on: May 28, 2026 | 10:43 AM

ಐಪಿಎಲ್ 2026ರ ಸೀಸನ್‌ನಲ್ಲಿ (IPL 2026) ಒಂದೂ ಪಂದ್ಯ ಆಡದಿದ್ದರೂ ಎಂ.ಎಸ್. ಧೋನಿ ಅವರ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಇಡೀ ಸೀಸನ್‌ನಲ್ಲಿ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಧೋನಿ, ಮುಂದಿನ ಐಪಿಎಲ್ 2027ರಲ್ಲಿ ಮರಳಿ ಮೈದಾನಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ ಧೋನಿ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಧೋನಿ ಮುಂದಿನ ಸೀಸನ್‌ನಲ್ಲಿ ಆಡಲಿದ್ದಾರೆ ಮತ್ತು ಸಿಎಸ್‌ಕೆ ಅಭಿಮಾನಿಗಳಿಗೆ ಚೆನ್ನೈನಲ್ಲಿ ವಿದಾಯದ ಪಂದ್ಯ ಆಡುವುದಾಗಿ ಕೊಟ್ಟಿರುವ ಮಾತನ್ನು ಅವರು ಖಂಡಿತ ಉಳಿಸಿಕೊಳ್ಳಲಿದ್ದಾರೆ ಎಂದು ತಂಡದ ಮ್ಯಾನೇಜ್‌ಮೆಂಟ್ ವಿಶ್ವಾಸ ವ್ಯಕ್ತಪಡಿಸಿದೆ.

ಈ ಬಾರಿಯ ಸೀಸನ್‌ನ ಆರಂಭದಲ್ಲಿ ಕಾಲಿನ ಸ್ನಾಯು ಸೆಳೆತ ಮತ್ತು ನಂತರದ ದಿನಗಳಲ್ಲಿ ಹೆಬ್ಬೆರಳಿನ ಗಾಯಕ್ಕೆ ಒಳಗಾದ ಧೋನಿ, 19 ವರ್ಷಗಳ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಡೀ ಸೀಸನ್‌ನಲ್ಲಿ ಒಂದೂ ಪಂದ್ಯ ಆಡದೆ ಹೊರಗುಳಿದರು. ಜುಲೈ ತಿಂಗಳಲ್ಲಿ ಧೋನಿಗೆ 45 ವರ್ಷ ತುಂಬಲಿದ್ದು, ಅವರ ವಯಸ್ಸು ಮತ್ತು ಫಿಟ್‌ನೆಸ್ ನೋಡಿದರೆ ಅವರು ಈಗಾಗಲೇ ತಮ್ಮ ಕೊನೆಯ ಪಂದ್ಯ ಆಡಿದ್ದಾರಾ ಎಂಬ ಆತಂಕ ಫ್ಯಾನ್ಸ್‌ನಲ್ಲಿ ಮನೆಮಾಡಿತ್ತು.

ಮೇ 18 ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಸಿಎಸ್‌ಕೆ ತಂಡದ ಕೊನೆಯ ತವರು ಪಂದ್ಯ ಧೋನಿಯ ವಿದಾಯದ ಪಂದ್ಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ, ಗಾಯದ ಕಾರಣ ಧೋನಿ ಅಂಗಳಕ್ಕಿಳಿಯಲಿಲ್ಲ.

ಕೊಟ್ಟ ಮಾತು ಉಳಿಸಿಕೊಳ್ಳಲಿದ್ದಾರೆ ಧೋನಿ: ಸಿಎಸ್‌ಕೆ ಸಿಇಒ

ಧೋನಿ ನಿವೃತ್ತಿ ವದಂತಿಗಳ ಬೆನ್ನಲ್ಲೇ ‘ಕ್ರಿಕ್‌ಬಜ್’ ಜೊತೆ ಮಾತನಾಡಿರುವ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್, ‘ನನ್ನ ಪ್ರಕಾರ ಧೋನಿ ಮುಂದಿನ ಸೀಸನ್‌ನಲ್ಲಿ ಆಡಲಿದ್ದಾರೆ. ಈ ಬಗ್ಗೆ ನಾವು ಇನ್ನೂ ಅವರ ಜೊತೆ ಅಧಿಕೃತವಾಗಿ ಮಾತನಾಡಿಲ್ಲವಾದರೂ, ಅವರು ಮರಳಿ ಬರುತ್ತಾರೆಂಬ ಭರವಸೆ ನಮಗಿದೆ. ತಾವು ಆಡುವ ಕೊನೆಯ ಐಪಿಎಲ್ ಪಂದ್ಯವನ್ನು ಚೆನ್ನೈನಲ್ಲೇ ಆಡುವುದಾಗಿ ಧೋನಿ ಸಿಎಸ್‌ಕೆ ಅಭಿಮಾನಿಗಳಿಗೆ ಮಾತು ಕೊಟ್ಟಿದ್ದಾರೆ. ಅವರು ಆ ಮಾತನ್ನು ಖಂಡಿತ ಉಳಿಸಿಕೊಳ್ಳಲಿದ್ದಾರೆ ಎನ್ನುವ ನಂಬಿಕೆ ನಮಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ರಾಹುಲ್ ದ್ರಾವಿಡ್ ಸಿಎಸ್‌ಕೆ ಕೋಚ್ ಆಗ್ತಾರಾ?

ಮತ್ತೊಂದೆಡೆ, ಕಳೆದ ಮೂರು ಸೀಸನ್‌ಗಳಿಂದ ಸಿಎಸ್‌ಕೆ ಪ್ಲೇಆಫ್ ತಲುಪಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರನ್ನು ಬದಲಾಯಿಸಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಫ್ಲೆಮಿಂಗ್ ಜಾಗಕ್ಕೆ ಭಾರತದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಬರಲಿದ್ದಾರೆ ಎಂಬ ವದಂತಿಗಳೂ ಹಬ್ಬಿವೆ.

ಇದನ್ನೂ ಓದಿ:  ರಾಜಸ್ಥಾನ್ ವಿರುದ್ಧ ಸೋತು ಐಪಿಎಲ್​ನಿಂದ ಹೊರಬಿದ್ದ ಸನ್‌ರೈಸರ್ಸ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಶಿ ವಿಶ್ವನಾಥನ್, ‘ನಾವು ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ದ್ರಾವಿಡ್ ಅವರನ್ನೂ ಸಂಪರ್ಕಿಸಿಲ್ಲ’ ಎಂದು ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us