
2025 ರ ಐಪಿಎಲ್ನಲ್ಲಿ (IPL 2025) ರಾಜಸ್ಥಾನ ರಾಯಲ್ಸ್ ತಂಡವನ್ನು ಚಾಂಪಿಯನ್ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ (Rahul Dravid) ಸಂಬಂಧಿಸಿದಂತೆ ಆಘಾತಕ್ಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಐಪಿಎಲ್ ಆರಂಭಕ್ಕೆ ಇನ್ನು ಕೇವಲ 10 ದಿನಗಳು ಬಾಕಿ ಇರುವಾಗ ರಾಜಸ್ಥಾನ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಗಾಯಗೊಂಡಿದ್ದು, ಕಾಲಿಗೆ ಪ್ಲಾಸ್ಟರ್ ಹಾಕಲಾಗಿದೆ. ರಾಜಸ್ಥಾನ ರಾಯಲ್ಸ್ ತಂಡವು ದ್ರಾವಿಡ್ ಅವರ ಕಾಲಿಗೆ ಗಾಯವಾಗಿರುವ ಫೋಟೋವನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಕ್ರಿಕೆಟ್ ಆಡುವಾಗ ದ್ರಾವಿಡ್ ಗಾಯಗೊಂಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದೆ.
ರಾಹುಲ್ ದ್ರಾವಿಡ್ ಅವರು ಕಾಲಿಗೆ ಪ್ಲಾಸ್ಟರ್ ಹಾಕಿಕೊಂಡು ಕುರ್ಚಿಯ ಮೇಲೆ ಕುಳಿತಿರುವ ಫೋಟೋವನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ, ರಾಹುಲ್ ಹೇಗೆ ಈ ಗಾಯ ಮಾಡಿಕೊಂಡರು ಎಂಬ ಮಾಹಿತಿಯನ್ನು ನೀಡಿದೆ. ಫ್ರಾಂಚೈಸಿ ನೀಡಿರುವ ಹೇಳಿಕೆಯ ಪ್ರಕಾರ, ಕನ್ನಡಿಗ ರಾಹುಲ್ ದ್ರಾವಿಡ್ ಬೆಂಗಳೂರಿನಲ್ಲಿ ಕ್ರಿಕೆಟ್ ಆಡುವಾಗ ಗಾಯಗೊಂಡಿದ್ದು, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಬುಧವಾರ ಜೈಪುರದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬರೆದುಕೊಂಡಿದೆ.
Head Coach Rahul Dravid, who picked up an injury while playing Cricket in Bangalore, is recovering well and will join us today in Jaipur 💗 pic.twitter.com/TW37tV5Isj
— Rajasthan Royals (@rajasthanroyals) March 12, 2025
ವಾಸ್ತವವಾಗಿ ಈ ಮೊದಲು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಟಗಾರನಾಗಿ ಹಾಗೂ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದ ರಾಹುಲ್ ದ್ರಾವಿಡ್, ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಆಯ್ಕೆಯಾದ ಬಳಿಕ ಐಪಿಎಲ್ನಿಂದ ದೂರ ಉಳಿದಿದ್ದರು. ಆದರೆ ಕಳೆದ ವರ್ಷ ಟೀಂ ಇಂಡಿಯಾಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಬಳಿಕ ತಮ್ಮ ಅಧಿಕಾರವಾದಿಯನ್ನು ಮುಗಿಸಿದ್ದ ದ್ರಾವಿಡ್, ಮತ್ತೆ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದರು.
ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಉತ್ತಮವಾಗಿ ಆಡಿತು. ಈ ತಂಡ ಪಾಯಿಂಟ್ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದ್ದರೂ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಈ ಬಾರಿ ರಾಜಸ್ಥಾನ ತಂಡ ದ್ರಾವಿಡ್ ಮಾರ್ಗದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಗಳಿವೆ. 2008 ರಲ್ಲಿ ನಡೆದಿದ್ದ ಐಪಿಎಲ್ನ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆ ಬಳಿಕ ಈ ಟ್ರೋಫಿ ಗಗನ ಕುಸುಮವಾಗಿ ಉಳಿದಿದೆ.
ಇದನ್ನೂ ಓದಿ: IND vs ENG: ರೋಹಿತ್ ಸಿಡಿಲಬ್ಬರದ ಬ್ಯಾಟಿಂಗ್ಗೆ ದ್ರಾವಿಡ್, ಗೇಲ್ ದಾಖಲೆ ಉಡೀಸ್..!
ರಾಜಸ್ಥಾನ ತಂಡ: ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ಸಂದೀಪ್ ಶರ್ಮಾ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ವನಿಂದು ಹಸರಂಗ, ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ, ನಿತೀಶ್ ರಾಣಾ, ತುಷಾರ್ ದೇಶಪಾಂಡೆ, ಶುಭಂ ದುಬೆ, ಯುಧ್ವೀರ್ ಸಿಂಗ್, ಫಜಲ್ಹಕ್ ಫಾರೂಕಿ, ವೈಭವ್ ಸೂರ್ಯವಂಶಿ, ಕ್ವೇನಾ ಎಂಫಕಾ, ಕುನಾಲ್ ರಾಥೋಡ್, ಅಶೋಕ್ ಶರ್ಮಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Wed, 12 March 25