
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸತತ ಮೂರನೇ ಬಾರಿಗೆ ತವರಿನಲ್ಲಿ ಸೋತಿದೆ. ಏಪ್ರಿಲ್ 18 ರಂದು ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 11 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ಗಳಿಂದ ಆರ್ಸಿಬಿಯನ್ನು ಸೋಲಿಸಿತು. ಆರ್ಸಿಬಿಯ ಈ ಹೀನಾಯ ಸೋಲಿನಲ್ಲಿ ಬ್ಯಾಟ್ಸ್ಮನ್ಗಳು ದೊಡ್ಡ ಪಾತ್ರ ವಹಿಸಿದರು. ತಲಾ 14 ಓವರ್ ನಡೆದ ಈ ಪಂದ್ಯದಲ್ಲಿ ಆರ್ಸಿಬಿ ಬ್ಯಾಟರ್ಗಳು ಕೇವಲ 95 ರನ್ ಮಾತ್ರ ಕಲೆಹಾಕಿದರು. ನಾಯಕ ರಜತ್ ಪಾಟಿದಾರ್ (23 ರನ್) ಮತ್ತು ಟಿಮ್ ಡೇವಿಡ್ (50 ರನ್) ಹೊರತುಪಡಿಸಿದರೆ ಉಳಿದವರಿಂದ ಕಳಪೆ ಪ್ರದರ್ಶನ ಕಂಡುಬಂತು. ಇದೀಗ ಈ ಕಳಪೆ ಪ್ರದರ್ಶನವನ್ನು ನೋಡಿದ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virendra Sehwag ), ಬೆಂಗಳೂರು ಬ್ಯಾಟ್ಸ್ಮನ್ಗಳನ್ನು ಗುರಿಯಾಗಿಸಿಕೊಂಡು ಮಧ್ಯಮ ಕ್ರಮಾಂಕವನ್ನು ತಂಡದ ದೊಡ್ಡ ದೌರ್ಬಲ್ಯ ಎಂದು ಬಣ್ಣಿಸಿದ್ದಾರೆ.
ಕ್ರಿಕ್ಬಜ್ ಕಾರ್ಯಕ್ರಮದಲ್ಲಿ ಪಂದ್ಯವನ್ನು ವಿಶ್ಲೇಷಿಸುವಾಗ ಮಾತನಾಡಿದ ವೀರೇಂದ್ರ ಸೆಹ್ವಾಗ್, ‘ಆರ್ಸಿಬಿಯ ಮಧ್ಯಮ ಕ್ರಮಾಂಕ ದೊಡ್ಡ ದೌರ್ಬಲ್ಯವಾಗಿದೆ. ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಕೃನಾಲ್ ಪಾಂಡ್ಯ ಅವರ ಬ್ಯಾಟಿಂಗ್ ಸಾಕಷ್ಟು ನಿರಾಶೆಗೊಳಿಸಿದೆ. ಈ ಮೂವರು ಯಾವುದೇ ಪಂದ್ಯದಲ್ಲೂ ಸರಿಯಾಗಿ ಕೊಡುಗೆ ನೀಡುತ್ತಿಲ್ಲ, ಇದರಿಂದಾಗಿ ಬೆಂಗಳೂರು ಈ ಸ್ಥಿತಿಗೆ ತಲುಪಿದೆ. ಆರ್ಸಿಬಿ ತಂಡವು ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮತ್ತು ರಜತ್ ಪಾಟಿದಾರ್ ಅವರ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ಅದೇ ಸಮಯದಲ್ಲಿ, ಟಿಮ್ ಡೇವಿಡ್ ಕೂಡ ಕೆಳ ಕ್ರಮಾಂಕದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಮೇಲಿನ ಮೂವರು ಬ್ಯಾಟ್ಸ್ಮನ್ಗಳು ವಿಫಲವಾದ ದಿನಗಳಲ್ಲಿ, ಬೆಂಗಳೂರು ಕಷ್ಟಪಟ್ಟಿದೆ. ಪಂಜಾಬ್ ವಿರುದ್ಧವೂ ಇದೇ ಪರಿಸ್ಥಿತಿ ಕಂಡುಬಂದಿದೆ.
‘ಲಿವಿಂಗ್ಸ್ಟೋನ್ ಎರಡನೇ ಮ್ಯಾಕ್ಸ್ವೆಲ್ ಆಗಲಿದ್ದಾರೆ. ಜಿತೇಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ಕೂಡ ಏನೂ ಮಾಡಿಲ್ಲ. ಟಾಪ್ ಕ್ರಮಾಂಕ ಕುಸಿದಾಗ ಮಧ್ಯಮ ಕ್ರಮಾಂಕದಲ್ಲಿ ಯಾರಾದರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಟಿಮ್ ಡೇವಿಡ್ ಚೆನ್ನಾಗಿ ಆಡುತ್ತಿದ್ದಾರೆ ಆದರೆ ಅವರಿಗೆ ಕಡಿಮೆ ಎಸೆತಗಳು ಸಿಗುತ್ತಿವೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಗೆ ಹೆಚ್ಚು ಎಸೆತಗಳು ಸಿಗುತ್ತಿವೆಯಾದರೂ ಅವರು ಬೇಗ ಔಟಾಗುತ್ತಿದ್ದಾರೆ. ಈ ಮೂವರು ಬ್ಯಾಟಿಂಗ್ನಲ್ಲಿ ಸ್ಥಿರವಾಗಿ ಕೊಡುಗೆ ನೀಡಬೇಕು. ಆಗ ಮಾತ್ರ ನಾವು ತವರು ಮೈದಾನದಲ್ಲಿ ಗೆಲ್ಲುತ್ತೇವೆ. ಇಲ್ಲದಿದ್ದರೆ, ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ 15 ಓವರ್ಗಳನ್ನು ಆಡಲಿ ಮತ್ತು ಕೊನೆಯ 5 ಓವರ್ಗಳಲ್ಲಿ ಚೆಂಡನ್ನು ಹೊಡೆಯುವ ಮೂಲಕ ಸಾಧ್ಯವಾದಷ್ಟು ರನ್ಗಳನ್ನು ಗಳಿಸಲಿ ಎಂದು ನಾವು ಪ್ರಾರ್ಥಿಸಬೇಕಾಗುತ್ತದೆ. ಇದು ಹೀಗೆಯೇ ಮುಂದಿವರೆದರೆ ಆರ್ಸಿಬಿ ಟ್ರೋಫಿ ಗೆಲ್ಲುವ ಸಾಧ್ಯತೆಗಳಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.
RCB vs PBKS Highlights, IPL 2025: ಬ್ಯಾಟರ್ಗಳ ಬೇಜವಾಬ್ದಾರಿ ಆಟಕ್ಕೆ ಸೋಲಿನ ಬೆಲೆ ತೆತ್ತ ಆರ್ಸಿಬಿ
ಈ ವೇಳೆ ವೀರೇಂದ್ರ ಸೆಹ್ವಾಗ್ ಕೂಡ ಆರ್ಸಿಬಿ ನಾಯಕ ರಜತ್ ಪತಿದಾರ್ ಮೇಲೆ ಕೋಪಗೊಂಡರು, ‘ತವರಿನಲ್ಲಿ ಏಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂದು ರಜತ್ ಯೋಚಿಸಬೇಕು. ನಾವು ಎಲ್ಲಿ ತಪ್ಪು ಮಾಡುತ್ತಿದ್ದೇವೆ? ಎಂಬುದರ ಬಗ್ಗೆ ಯೋಚಿಸದಿರುವುದು ಒಳ್ಳೆಯದಲ್ಲ. ನೀವು ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ನಿಮ್ಮ ಬೌಲಿಂಗ್ ವಿಭಾಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ನಿಮ್ಮ ಬ್ಯಾಟಿಂಗ್ ಎಲ್ಲಿ ಕುಸಿತಿದೆಯೋ ಅಲ್ಲಿ ನೀವು ಕೆಲಸ ಮಾಡುತ್ತಿಲ್ಲ ಎಂದು ರಜತ್ಗೆ ಸೆಹ್ವಾಗ್ ಕಿವಿಮಾತು ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ