AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನು ಮಾಡ್ತಿದ್ದೀರಾ? ರೋಹಿತ್ ಶರ್ಮಾ ಮುಖದಲ್ಲಿ ಹತಾಶೆ, ನೋವು, ನಿರಾಸೆ!

IPL 2026 Chennai Super Kings vs Mumbai Indians: ಐಪಿಎಲ್​ನ 44ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 159 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 18.1 ಓವರ್​ಗಳಲ್ಲಿ 160 ರನ್ ಕಲೆಹಾಕಿದೆ. ಈ ಮೂಲಕ ಸಿಎಸ್​ಕೆ ತಂಡ 8 ವಿಕೆಟ್​ಗಳ ಜಯ ಸಾಧಿಸಿದೆ.

ಏನು ಮಾಡ್ತಿದ್ದೀರಾ? ರೋಹಿತ್ ಶರ್ಮಾ ಮುಖದಲ್ಲಿ ಹತಾಶೆ, ನೋವು, ನಿರಾಸೆ!
Rohit Sharma
ಝಾಹಿರ್ ಯೂಸುಫ್
|

Updated on: May 03, 2026 | 9:25 AM

Share

ಐಪಿಎಲ್ 2026ರ ಅತ್ಯಂತ ನಿರೀಕ್ಷಿತ ಪಂದ್ಯಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ (MI) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹಣಾಹಣಿಯು ಅಭಿಮಾನಿಗಳಿಗೆ ಕೇವಲ ಆಟದ ರೋಮಾಂಚನವನ್ನಷ್ಟೇ ನೀಡಲಿಲ್ಲ, ಬದಲಿಗೆ ಒಂದು ಭಾವನಾತ್ಮಕ ಕ್ಷಣಕ್ಕೂ ಸಾಕ್ಷಿಯಾಯಿತು. ಮೇ 2ರಂದು ನಡೆದ ಈ ಪಂದ್ಯದಲ್ಲಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಡಗೌಟ್‌ನಲ್ಲಿ ಅತ್ಯಂತ ನಿರಾಶೆ ಮತ್ತು ಅಸಮಾಧಾನದಿಂದ ಕುಳಿತಿದ್ದ ದೃಶ್ಯಗಳು ಈಗ ಕ್ರೀಡಾ ಲೋಕದಲ್ಲಿ ಚರ್ಚೆಗೆ ಕಾರಣವಾಗಿವೆ.

ಈ ಪಂದ್ಯದ ವೇಳೆ ನಾಯಕ ಹಾರ್ದಿಕ್ ಪಾಂಡ್ಯ ತೆಗೆದುಕೊಳ್ಳುತ್ತಿದ್ದ ಕೆಲ ನಿರ್ಧಾರಗಳಿಂದ, ಪ್ರಮುಖವಾಗಿ ಬೌಲಿಂಗ್ ಬದಲಾವಣೆಗಳ ವೇಳೆ ರೋಹಿತ್ ಶರ್ಮಾ ಡಗೌಟ್​ನಲ್ಲಿ ನಿರಾಸೆ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. ಅಲ್ಲದೆ ತಂಡದ ಒಟ್ಟಾರೆ ಪ್ರದರ್ಶನವನ್ನು ನೋಡಿ ಹತಾಶರಾಗಿ ಕೂತಿದ್ದರು. ಇದೀಗ ಹಿಟ್​ಮ್ಯಾನ್ ಅವರ ಈ ಭಾವನಾತ್ಮಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

2024ರಲ್ಲೇ ನಿರಾಸೆ ವ್ಯಕ್ತಪಡಿಸಿದ್ದ ಹಿಟ್​ಮ್ಯಾನ್!

ಐಪಿಎಲ್ 2024ರ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸಹಾಯಕ ಕೋಚ್ ಅಭಿಷೇಕ್ ನಾಯರ್ ನಡುವಿನ ಖಾಸಗಿ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಈ ವಿಡಿಯೋದಲ್ಲಿ ರೋಹಿತ್ ಶರ್ಮಾ, ಒಂದೊಂದಾಗಿ ಎಲ್ಲವೂ ಬದಲಾಗುತ್ತಿದೆ… ಅದು ಅವರ ಇಷ್ಟ, ನಾನದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿದ ನಂತರ ತಂಡದಲ್ಲಿ ಆದ ಬದಲಾವಣೆಗಳ ಬಗ್ಗೆ ಅವರು ಈ ಮಾತು ಹೇಳಿರಬಹುದು ಎಂದು ವಿಶ್ಲೇಷಿಸಲಾಗಿತ್ತು.

ಅಷ್ಟೇ ಅಲ್ಲದೆ ಇದೇ ವೇಳೆ  ಮುಂಬೈ ಇಂಡಿಯನ್ಸ್ ತಂಡದೊಂದಿಗಿನ ತಮ್ಮ ದಶಕದ ಸುದೀರ್ಘ ಸಂಬಂಧವನ್ನು ಸ್ಮರಿಸಿದ ರೋಹಿತ್, “ಏನೇ ಆದರೂ ಇದು ನನ್ನ ಮನೆ. ಈ ತಂಡವನ್ನು ಕಟ್ಟಿದ್ದು ನಾನು” ಎಂದು ಭಾವುಕರಾಗಿ ನುಡಿದಿದ್ದರು. ಇದೀಗ ಅದೇ ತಂಡದ ಕುಸಿತವನ್ನು ರೋಹಿತ್ ಶರ್ಮಾ ಕಣ್ಣಾರೆ ಕಾಣುತ್ತಿದ್ದಾರೆ. ಇದಕ್ಕೆ ಸಾಕ್ಷಿ ಸಿಎಸ್​ಕೆ ವಿರುದ್ಧದ ಪಂದ್ಯದ ವೇಳೆ ಹಿಟ್​ಮ್ಯಾನ್ ಮುಖದಲ್ಲಿ ಕಾಣಿಸಿಕೊಂಡ ಹಾವಭಾವ.

ರೋಹಿತ್ ಶರ್ಮಾ ಬೇಸರಕ್ಕೆ ಕಾರಣವೇನು?

  • ಗಾಯದ ಸಮಸ್ಯೆ ಮತ್ತು ಅಸಹಾಯಕತೆ: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ರೋಹಿತ್, ಈ ಮಹತ್ವದ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಗುಳಿಯಬೇಕಾಯಿತು. ತಮ್ಮ ನೆಚ್ಚಿನ ತಂಡ ಸಂಕಷ್ಟದಲ್ಲಿರುವಾಗ ಮೈದಾನಕ್ಕಿಳಿದು ನೆರವಾಗಲು ಸಾಧ್ಯವಾಗದ ಅಸಹಾಯಕತೆ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.
  • ತಂಡದ ಕಳಪೆ ಪ್ರದರ್ಶನ: ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಕೇವಲ 159 ರನ್‌ಗಳಿಗೆ ಸೀಮಿತವಾಯಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಸಿಎಸ್‌ಕೆ, ತುತುರಾಜ್ ಗಾಯಕ್ವಾಡ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ತನ್ನ ತಂಡದ ಸತತ ಸೋಲು ರೋಹಿತ್ ಅವರ ಬೇಸರಕ್ಕೆ ಮುಖ್ಯ ಕಾರಣವಾಗಿತ್ತು.
  • ಅಂಕಪಟ್ಟಿಯಲ್ಲಿ ಕುಸಿತ: ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿಯಿತು. 9 ಪಂದ್ಯಗಳಲ್ಲಿ ಕೇವಲ ಎರಡು ಜಯ ದಾಖಲಿಸಿರುವ ಮುಂಬೈ ತಂಡಕ್ಕೆ ಪ್ಲೇ-ಆಫ್ ಹಾದಿ ಬಹುತೇಕ ಮುಚ್ಚಿಹೋಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಅವರ ಈ ಫೋಟೋಗಳು ವೈರಲ್ ಆಗಿದ್ದು, “ಮುಂಬೈ ಸಾಮ್ರಾಜ್ಯವನ್ನು ಕಟ್ಟಿದ ವ್ಯಕ್ತಿ ಇಂದು ಅಸಹಾಯಕನಾಗಿ ಕುಳಿತಿದ್ದಾರೆ” ಎಂದು ಅಭಿಮಾನಿಗಳು ಮರುಗುತ್ತಿದ್ದಾರೆ. ಅನೇಕರು ಇದನ್ನು ಮುಂಬೈ ಇಂಡಿಯನ್ಸ್‌ನಲ್ಲಿ ರೋಹಿತ್ ಶರ್ಮಾ ಅವರ ಶಕೆಯ ಅಂತ್ಯ ಎಂದು ಬಣ್ಣಿಸುತ್ತಿದ್ದಾರೆ.

ಇದನ್ನೂ ಓದಿ: IPL 2026: ಐಪಿಎಲ್​ ಅಂಗಳದಲ್ಲಿ CSK ಯುವ ದಾಂಡಿಗನ ಗನ್ ಸೆಲೆಬ್ರೇಷನ್!

ಒಟ್ಟಾರೆಯಾಗಿ, ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ಮುಂಬೈ ಇಂಡಿಯನ್ಸ್​ ಅಭಿಮಾನಿಗಳಿಗೆ ಕೇವಲ ಸೋಲನ್ನಷ್ಟೇ ಅಲ್ಲದೆ, ತಮ್ಮ ನೆಚ್ಚಿನ ಆಟಗಾರನ ಕಣ್ಣಲ್ಲಿನ ನೋವನ್ನೂ ಉಣಬಡಿಸಿತು ಎಂದರೆ ತಪ್ಪಾಗಲಾರದು.

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ