ಲೈವ್​ನಲ್ಲೇ ಸಂಜಯ್ ಮಂಜ್ರೇಕರ್ – ಮುರಳಿ ಕಾರ್ತಿಕ್ ನಡುವೆ ‘ಅಸಹ್ಯ’ ವಾಗ್ವಾದ!

Sri Lanka vs India, 1st Test: ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ತನ್ನ ಮೊದಲ ಇನಿಂಗ್ಸ್‌ನಲ್ಲಿ 462 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಆಲೌಟ್ ಆಗಿದೆ. ಭಾರತದ ಈ ಬೃಹತ್ ಸ್ಕೋರ್‌ಗೆ ಉತ್ತರವಾಗಿ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಆತಿಥೇಯ ಶ್ರೀಲಂಕಾ ತಂಡ, ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ನಲುಗಿ ಕೇವಲ 284 ರನ್‌ಗಳಿಗೆ ಸರ್ವಪತನ ಕಂಡಿದೆ.

ಲೈವ್​ನಲ್ಲೇ ಸಂಜಯ್ ಮಂಜ್ರೇಕರ್ - ಮುರಳಿ ಕಾರ್ತಿಕ್ ನಡುವೆ ಅಸಹ್ಯ ವಾಗ್ವಾದ!
Murali Karthik - Sanjay Manjrekar
Image Credit source: Sonyliv.com

Updated on: Aug 18, 2026 | 12:05 PM

ಕ್ರಿಕೆಟ್ ಮೈದಾನದಲ್ಲಿ ಆಟಗಾರರ ನಡುವೆ ಜಗಳ, ಸ್ಲೆಡ್ಜಿಂಗ್ ಅಥವಾ ವಾಕ್ಸಮರ ನಡೆಯುವುದು ಹೊಸದೇನಲ್ಲ. ಅಭಿಮಾನಿಗಳು ಕೂಡ ಇಂತಹ ಆನ್-ಫೀಲ್ಡ್ ಡ್ರಾಮಾಗಳನ್ನು ನೋಡಿ ಒಗ್ಗಿಕೊಂಡಿದ್ದಾರೆ. ಆದರೆ, ಪಂದ್ಯದ ವಿಶ್ಲೇಷಣೆ ನಡೆಸುವ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು, ಕೋಟ್ಯಂತರ ವೀಕ್ಷಕರು ಲೈವ್ ನೋಡುತ್ತಿರುವಾಗಲೇ ಇಬ್ಬರು ಮಾಜಿ ಭಾರತೀಯ ಕ್ರಿಕೆಟಿಗರು ಪರಸ್ಪರ ವೈಯಕ್ತಿಕ ನಿಂದನೆಗೆ ಇಳಿದಿರುವುದು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹಿರಿಯ ವಿಶ್ಲೇಷಕ ಸಂಜಯ್ ಮಂಜ್ರೇಕರ್ ಮತ್ತು ಮುರಳಿ ಕಾರ್ತಿಕ್ ನಡುವೆ ನಡೆದ ಈ ಆನ್-ಏರ್ ವಾಕ್ಸಮರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕ್ರೀಡಾ ಮನೋಭಾವದ ಮೌಲ್ಯಗಳ ಮೇಲೆಯೇ ಪ್ರಶ್ನೆ ಎತ್ತುವಂತೆ ಮಾಡಿದೆ.

ವಾಗ್ವಾದ ಶುರುವಾಗಿದ್ದು ಹೇಗೆ?

ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ 3ನೇ ದಿನದ ಲಂಚ್ ಬ್ರೇಕ್ ವೇಳೆ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದೆ. ಚರ್ಚೆಯ ವೇಳೆ ಮುರಳಿ ಕಾರ್ತಿಕ್ ಅವರು ಸಂಜಯ್ ಮಂಜ್ರೇಕರ್ ಅವರ ಮುಖದ ಹಾವಭಾವವನ್ನು ಅಣಕಿಸಿದರು.

ಮಂಜ್ರೇಕರ್ ಅವರ ಮುಖದ ಎಕ್ಸ್‌ಪ್ರೆಶನ್ ಅನ್ನು “ಶತಮಾನದ ಪೌಟ್” ಎಂದು ತಮಾಷೆ ಮಾಡಿದ ಕಾರ್ತಿಕ್, “ನಿಮ್ಮ ಮುಖ ನೋಡಿ ನೀವು ಏನು ಹೇಳುತ್ತಿದ್ದೀರಾ ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟ” ಎಂದರು. ಇಲ್ಲಿ ಪೌಟ್ ಎಂದು ಬಳಿಸಿರುವುದು ಸಂಜಯ್ ಮಂಜ್ರೇಕರ್ ಮುಖವನ್ನು ಸೊಟ್ಟಗೆ ಇಟ್ಟುಕೊಂಡಿದ್ದಾರೆ ಎಂದು ಹೀಯಾಳಿಸಲು.

ತಿರುಗೇಟು ನೀಡಿದ ಮಂಜ್ರೇಕರ್!

ಇತ್ತ ಹೀಯಾಳಿಕೆಯ ಮಾತಿನಿಂದ ತೀವ್ರ ಅಸಮಾಧಾನಗೊಂಡ ಸಂಜಯ್ ಮಂಜ್ರೇಕರ್ ತಕ್ಷಣವೇ ಲೈವ್‌ನಲ್ಲೇ ನಿರ್ದೇಶಕರಿಗೆ “ಸ್ಕ್ರೀನ್ ಅನ್ನು ಸ್ಪ್ಲಿಟ್ ಮಾಡಿ, ಕ್ಯಾಮೆರಾವನ್ನು ಕಾರ್ತಿಕ್ ಕಡೆಯಿಂದ ಬೇರೆಡೆ ತಿರುಗಿಸಿ” ಎಂದು ಕಟುವಾಗಿ ಹೇಳಿದರು. ಅಷ್ಟಕ್ಕೇ ನಿಲ್ಲಿಸದ ಅವರು, ಪಕ್ಕದಲ್ಲೇ ಕುಳಿತಿದ್ದ ಅಜಿಂಕ್ಯ ರಹಾನೆ ಅವರತ್ತ ಕೈ ತೋರಿಸಿ, “ಅವರಿಗಿಂತ ರಹಾನೆ ಅವರ ಮುಖ ನೋಡುವುದು ತುಂಬಾ ಆಹ್ಲಾದಕರವಾಗಿದೆ” ಎಂದು ತಿರುಗೇಟು ನೀಡಿದರು.

ಇದರಿಂದ ಇಬ್ಬರ ನಡುವಿನ ವಾಗ್ವಾದ ಮತ್ತಷ್ಟು ತಾರಕಕ್ಕೇರಿತು. “ನೀವು ಎಂದಾದರೂ ಕನ್ನಡಿ ನೋಡಿಕೊಂಡಿದ್ದೀರಾ?” ಎಂದು ಮಂಜ್ರೇಕರ್ ಕೇಳಿದರೆ, ಅದಕ್ಕೆ ಕಾರ್ತಿಕ್ “ಕನ್ನಡಿ ನೋಡಿಕೊಳ್ಳುವ ಹವ್ಯಾಸ ನಿಮಗೇ ಜಾಸ್ತಿ” ಎಂದು ಪ್ರತ್ಯುತ್ತರ ನೀಡಿದರು. ಈ ಇಬ್ಬರ ಜಗಳದ ಮಧ್ಯೆ ಸಿಲುಕಿದ ಅಜಿಂಕ್ಯ ರಹಾನೆ, “ನನಗೂ ಈ ಜಗಳಕ್ಕೂ ಯಾವುದೇ ಸಂಬಂಧವಿಲ್ಲ” ಎನ್ನುವಂತೆ ಕೈ ಸನ್ನೆ ಮಾಡಿ ನಗೆ ಬೀರಿದರು.

“ನಾವು ಮಿತಿ ಮೀರುತ್ತಿದ್ದೇವೆ…”

ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸಂಜಯ್ ಮಂಜ್ರೇಕರ್, “ಹೇಗಿದ್ದರೂ ನಾವಿಬ್ಬರೂ ಈಗ ಮಿತಿ ಮೀರುತ್ತಿದ್ದೇವೆ, ಸೋಶಿಯಲ್ ಮೀಡಿಯಾಗೆ ಇಂದು ದೊಡ್ಡ ಹಬ್ಬ ಸಿಗಲಿದೆ” ಎಂದು ಹೇಳಿ ಮಾತನ್ನು ಮುಗಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು.

ಇದೀಗ ಈ ವಿಡಿಯೋ ಕ್ಲಿಪ್ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು “ಇದು ಕೇವಲ ತಮಾಷೆಯೋ ಅಥವಾ ಇಬ್ಬರ ನಡುವಿನ ನಿಜವಾದ ಅಸಮಾಧಾನವೋ?” ಎಂದು ಪ್ರಶ್ನಿಸುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಾಮೆಂಟರಿ ಬಾಕ್ಸ್ ಅಥವಾ ಸ್ಟುಡಿಯೋ ಚರ್ಚೆಗಳಲ್ಲಿ ಆರೋಗ್ಯಕರ ಹಾಸ್ಯ ಮತ್ತು ಕಾಲೆಳೆಯುವಿಕೆ ಇರಬೇಕಾದದ್ದು ಸಹಜ. ಅದು ಪ್ರಸಾರಕ್ಕೆ ಹೊಸ ಕಳೆ ನೀಡುತ್ತದೆ. ಆದರೆ, ಈ ಹಾಸ್ಯವು ವೈಯಕ್ತಿಕ ನಿಂದನೆ ಮತ್ತು ಅಹಂಕಾರದ ಜಗಳವಾಗಿ ಬದಲಾದಾಗ ಪ್ರಸಾರದ ಗುಣಮಟ್ಟ ಕುಸಿಯುತ್ತದೆ.

ಇದನ್ನೂ ಓದಿ: ಏಕದಿನ ಕ್ರಿಕೆಟ್​ಗೆ ಇಟಲಿ ಎಂಟ್ರಿ!

ಸಂಜಯ್ ಮಂಜ್ರೇಕರ್ ಅವರೇ ಹೇಳಿದಂತೆ, ಈ ಇಬ್ಬರು ಮಾಜಿ ಆಟಗಾರರು ಲೈವ್‌ನಲ್ಲೇ ಮಿತಿ ಮೀರಿ ನಡೆದುಕೊಂಡಿರುವುದು ಸೋಶಿಯಲ್ ಮೀಡಿಯಾಗೆ ಆಹಾರ ಒದಗಿಸಿರಬಹುದು. ಆದರೆ, ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಗೌರವಿಸುವ ಇಂತಹ ಹಿರಿಯ ವಿಶ್ಲೇಷಕರು ಲೈವ್ ಟಿವಿಯಲ್ಲಿ ಕನಿಷ್ಠ ಸಂಯಮ ಮತ್ತು ವೃತ್ತಿಪರತೆಯನ್ನು ಕಾಯ್ದುಕೊಳ್ಳಬೇಕಿತ್ತು ಎಂಬುದು ಕ್ರೀಡಾಭಿಮಾನಿಗಳ ವಾದವಾಗಿದೆ.

Loading...
Unable to load recommendations.
Follow Us