Shubman Gill: 255 ರನ್​ಗಳನ್ನು ಚೇಸ್ ಮಾಡಬಹುದಿತ್ತು, ಆದರೆ..!

IPL 2026 RCB vs GT: ಐಪಿಎಲ್​ನ ಕ್ವಾಲಿಫೈಯರ್-1 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 254 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡ 19.3 ಓವರ್​ಗಳಲ್ಲಿ 162 ರನ್​​ಗಳಿಗೆ ಆಲೌಟ್ ಆಗಿದ್ದಾರೆ. ಈ ಮೂಲಕ ಆರ್​ಸಿಬಿ ತಂಡ 92 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Shubman Gill: 255 ರನ್​ಗಳನ್ನು ಚೇಸ್ ಮಾಡಬಹುದಿತ್ತು, ಆದರೆ..!
Shubman Gill

Updated on: May 27, 2026 | 10:02 AM

IPL 2026: ಐಪಿಎಲ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡ ಸೋಲನುಭವಿಸಿದೆ. ಧರ್ಮಶಾಲಾದ ಹೆಚ್​ಪಿಸಿಎ ಮೈದಾನದಲ್ಲಿ ನಡೆದ ಆರ್​ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಶುಭ್​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ ಬರೋಬ್ಬರಿ 254 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 19.3 ಓವರ್​ಗಳಲ್ಲಿ 162 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ 92 ರನ್​ಗಳಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್, ನಮ್ಮ ಸೋಲಿಗೆ ಕಳಪೆ ಫೀಲ್ಡಿಂಗ್ ಪ್ರಮುಖ ಕಾರಣ ಎಂದಿದ್ದಾರೆ. ಈ ಪಂದ್ಯದಲ್ಲಿ 12 ಅಥವಾ 13ನೇ ಓವರ್​ವರೆಗೆ ನಾವು ಉತ್ತಮ ಹಿಡಿತ ಸಾಧಿಸಿದ್ದೆವು. ಆದರೆ ಆ ಬಳಿಕ ನಮ್ಮ ಕಳಪೆ ಫೀಲ್ಡಿಂಗ್​ಗೆ ಭಾರೀ ಬೆಲೆ ತೆರಬೇಕಾಯಿತು.

ನಮ್ಮ ಫೀಲ್ಡಿಂಗ್​ ಅತ್ಯಂತ ಕಳಪೆ ಮಟ್ಟದಲ್ಲಿತ್ತು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಏಕೆಂದರೆ ಕೆಲ ಪ್ರಮುಖ ಕ್ಯಾಚ್​ಗಳನ್ನು ಕೈ ಬಿಟ್ಟೆವು. ಇದರ ಸಂಪೂರ್ಣ ಲಾಭ ಪಡೆದ ಆರ್​ಸಿಬಿ ಬ್ಯಾಟರ್​ಗಳು ಬೃಹತ್ ಮೊತ್ತ ಪೇರಿಸಿದ್ದಾರೆ. ಇದರಿಂದ ನಾವು ಸೋಲಬೇಕಾಯಿತು ಎಂದು ಗಿಲ್ ಹೇಳಿದ್ದಾರೆ.

ಇನ್ನು 255 ರನ್​ಗಳ ಗುರಿ ಬೆನ್ನತ್ತಲು ಸಾಧ್ಯವಿತ್ತೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶುಭ್​ಮನ್ ಗಿಲ್, ನಾವು ಉತ್ತಮ ಆರಂಭ ಪಡೆದಿದ್ದರೆ ಖಂಡಿತವಾಗಿಯೂ ಸಾಧ್ಯವಿತ್ತು. ಏಕೆಂದರೆ ಪವರ್​ಪ್ಲೇನಲ್ಲಿ ಉತ್ತಮವಾಗಿ ರನ್​ ಗಳಿಸಿದ್ದರೆ ಈ ಗುರಿಯನ್ನು ಚೇಸ್ ಮಾಡುವುದು ಕಷ್ಟವಾಗಿರಲಿಲ್ಲ.

ಆದರೆ ನಮ್ಮ ಆರಂಭಿಕ ದಾಂಡಿಗ ಸಾಯಿ ಸುದರ್ಶನ್ ದುರಾದೃಷ್ಟಕರ ರೀತಿಯಲ್ಲಿ ಔಟಾದರು. ಇಂತಹ ಹಿಟ್ ವಿಕೆಟ್​ ಔಟ್​ಗಳು ಸಾಮಾನ್ಯವಾಗಿ ಕಾಣಿಸುವುದಿಲ್ಲ. ಆದರೆ ಇಂದು ದುರಾದೃಷ್ಟದಿಂದ ಅವರು ಬೇಗನೆ ವಿಕೆಟ್ ಒಪ್ಪಿಸಿದರು. ಇನ್ನು ನಮ್ಮ ಕಡೆಯಿಂದಲೂ ಉತ್ತಮ ಬ್ಯಾಟಿಂಗ್ ಬಂದಿರಲಿಲ್ಲ.

ಒಂದು ವೇಳೆ ಪವರ್​ಪ್ಲೇನಲ್ಲಿ ನಾವು ಉತ್ತಮವಾಗಿ ಬ್ಯಾಟ್ ಬೀಸಿದ್ದರೆ, 255 ರನ್ ಚೇಸ್ ಮಾಡುವುದು ಕಷ್ಟವೇನು ಆಗುತ್ತಿರಲಿಲ್ಲ. ಏಕೆಂದರೆ ಈ ಮೈದಾನವು ವೇಗದ ಔಟ್ ಫೀಲ್ಡ್​ ಹೊಂದಿದೆ. ಹೀಗಾಗಿ ದಾಖಲೆಯ ಮೊತ್ತವನ್ನು ಚೇಸ್ ಮಾಡಲು ಅವಕಾಶವಿತ್ತು. ಆದರೆ ನಾವು ಆರಂಭಿಕ ಆಘಾತಕ್ಕೆ ಒಳಗಾದ ಕಾರಣ ಸೋಲಬೇಕಾಯಿತು ಎಂದರು.

ಈ ಸೋಲಿನ ಹೊರತಾಗಿಯೂ ನಮಗೆ ಮತ್ತೊಂದು ಅವಕಾಶವಿದೆ. ದ್ವಿತೀಯ ಕ್ವಾಲಿಫೈಯರ್​ನಲ್ಲಿ ಗೆದ್ದು ಫೈನಲ್​ಗೇರಬಹುದು. ಹೀಗಾಗಿ ಈ ಸೋಲನ್ನು ನಾವು ಆದಷ್ಟು ಬೇಗ ಮರೆಯಬೇಕು ಎಂದು ಶುಭ್​ಮನ್ ಗಿಲ್ ಸಹ ಆಟಗಾರರಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ: IPL 2026: ಪ್ಲೇಆಫ್ ಚರಿತ್ರೆಯನ್ನೇ ಬದಲಿಸಿದ RCB

ಅಲ್ಲದೆ ಮೊಹಾಲಿಯಲ್ಲಿ ನಡೆಯಲಿರುವ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಇಂದಿನ ತಪ್ಪುಗಳನ್ನು ತಿದ್ದುಕೊಂಡು ಕಣಕ್ಕಿಳಿಯಬೇಕಿದೆ. ಅಲ್ಲಿ ಹೊಸ ಆರಂಭ ಹಾಗೂ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯುವ ಮೂಲಕ ಗೆಲ್ಲುವ ವಿಶ್ವಾಸವಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಫೈನಲ್​ಗೇರುವ ವಿಶ್ವಾಸವನ್ನು ಶುಭ್​ಮನ್ ಗಿಲ್ ವ್ಯಕ್ತಪಡಿಸಿದ್ದಾರೆ.

 

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us