ಟಿಮ್ ಡೇವಿಡ್​​ಗೆ ದುಬಾರಿ ಆಯ್ತು ಅಶ್ಲೀಲ ಸನ್ನೆ; ಬ್ಯಾನ್ ಭೀತಿ

ಮೇ 10ರ ಆರ್‌ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಟಿಮ್ ಡೇವಿಡ್ ಅಸಭ್ಯ 'ಮಧ್ಯದ ಬೆರಳು' ಸನ್ನೆ ಮಾಡಿ ವಿವಾದಕ್ಕೀಡಾಗಿದ್ದಾರೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಗಾಗಿ ಅವರಿಗೆ ಪಂದ್ಯದ ಸಂಭಾವನೆಯ ಶೇ. 30ರಷ್ಟು ದಂಡ ಹಾಗೂ 2 ಡಿಮೆರಿಟ್ ಪಾಯಿಂಟ್‌ಗಳನ್ನು ವಿಧಿಸಲಾಗಿದೆ. ಮತ್ತಷ್ಟು ಡಿಮೆರಿಟ್ ಪಾಯಿಂಟ್‌ಗಳು ಒಂದು ಪಂದ್ಯದ ನಿಷೇಧಕ್ಕೆ ಕಾರಣವಾಗಬಹುದು.

ಟಿಮ್ ಡೇವಿಡ್​​ಗೆ ದುಬಾರಿ ಆಯ್ತು ಅಶ್ಲೀಲ ಸನ್ನೆ; ಬ್ಯಾನ್ ಭೀತಿ
ಟಿಮ್ ಡೇವಿಡ್

Updated on: May 12, 2026 | 7:35 AM

ಮೇ 10ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ ನಡುವಿನ ಹಣಾಹಣಿ ಕೇವಲ ಆಟದಿಂದ ಮಾತ್ರವಲ್ಲದೆ ವಿವಾದದಿಂದಲೂ ಸುದ್ದಿಯಲ್ಲಿದೆ. ರಾಯಪುರದಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ ಟಿಮ್ ಡೇವಿಡ್ ನಡೆದುಕೊಂಡ ರೀತಿ ಚರ್ಚೆಗೆ ಕಾರಣ ಆಗಿತ್ತು. ಅವರು ಓಪನ್ ಆಗಿ ಮುಂಬೈ ಆಟಗಾರರಿಗೆ ಮಧ್ಯ ಬೆಟ್ಟು ತೋರಿಸಿದ್ದರು. ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಅವರಿಗೆ ದಂಡ ವಿಧಿಸಲಾಗಿದೆ.

ಪಂದ್ಯದ ಕೊನೆಯ ಎಸೆತದವರೆಗೂ ಸಾಗಿದ ಈ ರೋಚಕ ಹೋರಾಟದಲ್ಲಿ ಆರ್‌ಸಿಬಿ ಜಯಭೇರಿ ಬಾರಿಸಿತು. ಜಯದ ಸಂಭ್ರಮದಲ್ಲಿದ್ದಾಗ ಟಿಮ್ ಡೇವಿಡ್ ಅವರು ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದರು. ಅವರು ಪಂದ್ಯ ಮುಗಿದ ನಂತರ ಅಸಭ್ಯವಾಗಿ ‘ಮಧ್ಯದ ಬೆರಳು’ ತೋರಿಸುವ ಸನ್ನೆ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಐಪಿಎಲ್ ನಿಯಮ 2.6 ರ ಅಡಿಯಲ್ಲಿ ‘ಅಸಭ್ಯ, ಆಕ್ಷೇಪಾರ್ಹ ಅಥವಾ ಅವಮಾನಕರ’ ವರ್ತನೆ ಎಂದು ಪರಿಗಣಿಸಲಾಗಿದೆ.

ದಂಡದ ವಿವರ:

ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಮ್ಯಾಚ್ ರೆಫರಿ ಅಮಿತ್ ಶರ್ಮಾ, ಟಿಮ್ ಡೇವಿಡ್ ಅವರಿಗೆ ದಂಡ ವಿಧಿಸಿದ್ದಾರೆ. ಪಂದ್ಯದ ಸಂಭಾವನೆಯಲ್ಲಿ ಶೇ. 30ರಷ್ಟು ದಂಡ ವಿಧಿಸಿದ್ದು ಅಲ್ಲದೆ, ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಲಾಗಿದೆ. ಟಿಮ್ ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ವಿಧಿಸಲಾದ ದಂಡಕ್ಕೆ ಸಮ್ಮತಿಸಿದ್ದಾರೆ. ಟಿಮ್ ಡೇವಿಡ್ ಅವರಿಗೆ ಈಗ 2 ಡಿಮೆರಿಟ್ ಪಾಯಿಂಟ್ಸ್ ನೀಡಲಾಗಿದೆ. ಅಂದರೆ, ಅವರು ಮುಂದಿನ ಪಂದ್ಯಗಳಲ್ಲಿ ಇನ್ನು ಕೇವಲ 2 ಪಾಯಿಂಟ್ಸ್ ಪಡೆದರೂ ಒಂದು ಪಂದ್ಯದ ನಿಷೇಧ ಎದುರಿಸಬೇಕಾಗುತ್ತದೆ.

ಪಂದ್ಯದ ಹೈಲೈಟ್ಸ್:

ಈ ಪಂದ್ಯವು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿತು. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ಸಿಲುಕಿ ಆರಂಭಿಕ ಆಘಾತ ಅನುಭವಿಸಿತು. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅಲ್ಪ ಮೊತ್ತಕ್ಕೆ ಔಟಾದರು. ಆದರೆ ತಿಲಕ್ ವರ್ಮಾ ಮತ್ತು ನಮನ್ ಧೀರ್ ಅವರ ಹೋರಾಟದಿಂದ ಮುಂಬೈ 166 ರನ್ ಗಳಿಸಿತು.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​​ ವಿರುದ್ಧ ‘ಅಸಭ್ಯ’ವಾಗಿ ಸಂಭ್ರಮಿಸಿದ ಟಿಮ್ ಡೇವಿಡ್

ಗುರಿ ಬೆನ್ನಟ್ಟಿದ ಆರ್‌ಸಿಬಿ ಕೂಡ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದಾಗ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕೃನಾಲ್ ಪಾಂಡ್ಯ 46 ಎಸೆತಗಳಲ್ಲಿ 73 ರನ್ ಚಚ್ಚಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಕೊನೆಯ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಅವರ ಸಿಕ್ಸರ್ ಮತ್ತು ರಸಿಖ್ ಸಲಾಮ್ ಅವರ ಸಮಯೋಚಿತ ಆಟದಿಂದ ಆರ್‌ಸಿಬಿ ಗೆಲುವಿನ ನಗೆ ಬೀರಿತು. ಗೆಲುವಿನ ನಂತರದ ಟಿಮ್ ಡೇವಿಡ್ ಮಾಡಿದ ಈ ಸನ್ನೆ ಈಗ ಅವರಿಗೆ ಆರ್ಥಿಕವಾಗಿ ನಷ್ಟ ತಂದೊಡ್ಡಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us