ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ‘ಹುಳುಕು’ ಬಹಿರಂಗ ಪಡಿಸಿದ ಮಂಜ್ರೇಕರ್

Vaibhav Sooryavanshi: ಕೇವಲ 15ನೇ ವಯಸ್ಸಿಗೆ ಐಪಿಎಲ್ ಅಂಗಳದಲ್ಲಿ ಘಟಾನುಘಟಿ ಬೌಲರ್‌ಗಳನ್ನು ಬೆಂಡೆತ್ತುತ್ತಿರುವ ವೈಭವ್ ಸೂರ್ಯವಂಶಿ ಅವರ ಆಟಕ್ಕೆ ಕ್ರಿಕೆಟ್ ಲೋಕ ಫಿದಾ ಆಗಿದೆ. ಆದರೆ, ಅವರ ಈ ಸ್ಫೋಟಕ ಆಟದ ನಡುವೆಯೇ ಬ್ಯಾಟಿಂಗ್ ಶೈಲಿಯ ಬಗ್ಗೆ ವಿಮರ್ಶಕ ಸಂಜಯ್ ಮಂಜ್ರೇಕರ್ ಗಂಭೀರ ಪ್ರಶ್ನೆಯೊಂದನ್ನು ಎತ್ತಿದ್ದಾರೆ.

ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಹುಳುಕು ಬಹಿರಂಗ ಪಡಿಸಿದ ಮಂಜ್ರೇಕರ್
Vaibhav Sooryavanshi

Updated on: May 06, 2026 | 11:19 AM

ಕ್ರಿಕೆಟ್ ಅಂಗಳದ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ ಭರ್ಜರಿ ಫಾರ್ಮ್​​ನಲ್ಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸುತ್ತಿರುವ ವೈಭವ್ ಅವರ ಬ್ಯಾಟಿಂಗ್​ನಲ್ಲಿನ ಕೆಲ ಸಮಸ್ಯೆಗಳನ್ನು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಬಹಿರಂಗಪಡಿಸಿದ್ದಾರೆ. ಈ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಮೂರು ಸ್ವರೂಪಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಮಂಜ್ರೇಕರ್ ಅವರ ವಿಶ್ಲೇಷಣೆ ಏನು?

ಸಂಜಯ್ ಮಂಜ್ರೇಕರ್ ಅವರ ಪ್ರಕಾರ, ವೈಭವ್ ಸೂರ್ಯವಂಶಿ ಅಪ್ಪಟ ಆಧುನಿಕ ಟಿ20 ಬ್ಯಾಟರ್. ಚೆಂಡಿನಿಂದ ಸ್ವಲ್ಪ ದೂರ ನಿಂತು ಮಿಡಲ್ ಸ್ಟಂಪ್ ಮೇಲಿರುವ ಚೆಂಡನ್ನು ಪಾಯಿಂಟ್ ದಿಕ್ಕಿನತ್ತ ಬಾರಿಸುವುದು ಇವರ ಶೈಲಿ. ಇದು ಟಿ20 ಕ್ರಿಕೆಟ್‌ನಲ್ಲಿ ರನ್ ಗಳಿಸಲು ಸಹಕಾರಿ.

ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಇಂತಹ ಬ್ಯಾಟಿಂಗ್ ಅಸಾಧ್ಯ. ಇಂಗ್ಲೆಂಡ್, ಆಸ್ಟ್ರೇಲಿಯಾ ಅಥವಾ ಸೌತ್ ಆಫ್ರಿಕಾದಂತಹ ದೇಶಗಳಲ್ಲಿ ಚೆಂಡಿನಿಂದ ದೂರ ನಿಂತು ಬ್ಯಾಟ್ ಮಾಡಿದರೆ 20 ರನ್ ಗಳಿಸುವುದು ಕೂಡ ಕಷ್ಟ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಚೆಂಡಿನ ಸಾಲಿಗೆ ಅಂದರೆ ಲೈನ್ ಆಫ್ ದಿ ಬಾಲ್​​ ಹತ್ತಿರ ಹೋಗಿ ಆಡುವುದು ಅತ್ಯಗತ್ಯ. ಇದೀಗ ವೈಭವ್ ಸೂರ್ಯವಂಶಿ ಆಡುತ್ತಿರುವುದು ಲೆಗ್ ಸೈಡ್ ಆಫ್​ ದಿ ಬಾಲ್​ ಸಾಲಿನಲ್ಲಿ. ಈ ಶೈಲಿಯು ಟಿ20 ಕ್ರಿಕೆಟ್​​ಗೆ ಓಕೆ. ಆದರೆ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್​ನ ವೇಗದ ಪಿಚ್​ಗಳಲ್ಲಿ ಈ ರೀತಿಯಾಗಿ ನಿಂತು ಬ್ಯಾಟಿಂಗ್ ಮಾಡಲು ಅಸಾಧ್ಯ.

ಅಲ್ಲದೆ ವೈಭವ್ ಸೂರ್ಯವಂಶಿ ಲೆಗ್ ಸೈಡ್ ಆಫ್​ ದಿ ಬಾಲ್​ ಸಾಲಿನಲ್ಲೇ ನಿಂತು ಬ್ಯಾಟ್ ಮಾಡುವುದನ್ನು ಮುಂದುವರೆಸಿದರೆ ಅದು ಮುಂದೆ ಅವರ ಕೆರಿಯರ್ ಮೇಲೆ ಪರಿಣಾಮ ಬೀರಲಿದೆ. ಏಕೆಂದರೆ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ಪಿಚ್​​ನಲ್ಲಿ ಈ ರೀತಿಯಾಗಿ ಬ್ಯಾಟ್ ಮಾಡಿದರೆ 20 ರನ್​ಗಳಿಸುವುದು ಕೂಡ ಕಷ್ಟ. ಹೀಗಾಗಿ ವೈಭವ್ ಸೂರ್ಯವಂಶಿ ತನ್ನ ಬ್ಯಾಟಿಂಗ್ ಹುಳುಕುಗಳನ್ನು ಈಗಲೇ ಸರಿಪಡಿಸಿಕೊಳ್ಳುವುದು ಉತ್ತಮ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ಟೀಮ್ ಇಂಡಿಯಾ ಕಾಲಿಂಗ್:

ಒಂದೆಡೆ ಸಂಜಯ್ ಮಂಜ್ರೇಕರ್ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಹುಳುಕುಗಳನ್ನು ತೆರೆದಿಟ್ಟರೆ, ಮತ್ತೊಂದೆಡೆ ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ವೈಭವ್ ಸೂರ್ಯವಂಶಿಯನ್ನು ಶೀಘ್ರವೇ ಭಾರತ ಟಿ20 ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಹೇಳಿದ್ದಾರೆ.

ಇದನ್ನೂ ಓದಿ: ನಿತೀಶ್ ರಾಣಾ ‘ಔಟ್’ ಗೊಂದಲ: ಐಪಿಎಲ್ ನಿಯಮ ಏನು ಹೇಳುತ್ತೆ?

ಇದೇ ವೇಳೆ ಟಿ20 ಕ್ರಿಕೆಟ್ ಹಣ ಮತ್ತು ಪ್ರಸಿದ್ಧಿಯನ್ನು ತಂದುಕೊಡಬಹುದು, ಆದರೆ ವಿಮರ್ಶಕರಿಂದ “ಗೌರವ” ಸಿಗುವುದು ಟೆಸ್ಟ್ ಕ್ರಿಕೆಟ್‌ನಲ್ಲಿ ತೋರುವ ತಾಂತ್ರಿಕ ಪ್ರೌಢಿಮೆಯಿಂದ ಮಾತ್ರ. ಹೀಗಾಗಿ ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ ಅನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕೆಂಬುದು ಸಂಜಯ್ ಮಂಜ್ರೇಕರ್ ಅವರ ಕಿವಿಮಾತು.

 

Published On - 11:07 am, Wed, 6 May 26

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us