Virat Kohli: ಅಭಿಮಾನಿಗಳನ್ನು ಮನೆಯೊಳಗೆ ಕರೆದು ಆಟ್ರೋಗ್ರಾಫ್ ನೀಡಿದ ವಿರಾಟ್ ಕೊಹ್ಲಿ
Virat Kohli: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ತನಗಾಗಿ ಗಂಟೆಗಟಲೇ ಕಾಯುತ್ತ ಕುಳಿತ್ತಿದ್ದ ಅಭಿಮಾನಿಗಳನ್ನು ಗುರುಗ್ರಾಮದಲ್ಲಿರುವ ತಮ್ಮ ಮನೆಯೊಳಗೆ ಆಹ್ವಾನಿಸಿದ್ದಾರೆ. ಇದರ ಜೊತೆಗೆ ಅವರು ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ್ದಾರೆ. ಇದೀಗ ಕೊಹ್ಲಿಯ ಈ ಸರಳತೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ವಿಶ್ವ ಕ್ರಿಕೆಟ್ನ ರನ್ ಸಾಮ್ರಾಟ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿರುವುದು ಹೊಸ ವಿಷಯವೆನ್ನಲ್ಲ. ಆದಾಗ್ಯೂ ತನ್ನ ಹಳೆಯ ಫಾರ್ಮ್ ಕಂಡುಕೊಳ್ಳಲು ಕೊಹ್ಲಿ ನಾನಾ ಪ್ರಯತ್ನ ಮಾಡುತ್ತಿದ್ದಾರೆಯಾದರೂ ಅದ್ಯಾಕೋ ಯಾವುದು ಕೊಹ್ಲಿ ಅಂದುಕೊಂಡಂತೆ ನಡೆಯುತ್ತಿಲ್ಲ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಂದು ಶತಕ ಸಿಡಿಸಿದ್ದನ್ನು ಬಿಟ್ಟರೆ ಕೊಹ್ಲಿ ಬ್ಯಾಟ್ ಭಾಗಶಃ ಮೌನಕ್ಕೆ ಶರಣಾಗಿತ್ತು. ಹೀಗಾಗಿ ದೇಶೀ ಕ್ರಿಕೆಟ್ನತ್ತ ಮುಖ ಮಾಡಿದ್ದ ಕೊಹ್ಲಿ ಅಲ್ಲೂ ಕೂಡ ಒಂದಂಕಿಗೆ ಸುಸ್ತಾಗಿದ್ದರು. ಹೀಗಾಗಿ ಕೊಹ್ಲಿಯ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳು ಕೂಡ ಭಾರಿ ನಿರಾಸೆಗೊಂಡಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಗುರುಗ್ರಾಮದಲ್ಲಿರುವ ತಮ್ಮ ಹೊಸ ಮನೆಯಲ್ಲಿಯೇ ಅಭ್ಯಾಸ ನಡೆಸುತ್ತಿರುವ ಕೊಹ್ಲಿ ತಮ್ಮ ಸರಳತೆಯಿಂದಾಗಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಭಿಮಾನಿಗಳನ್ನು ಮನೆಗೆ ಆಹ್ವಾನಿಸಿದ ಕೊಹ್ಲಿ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಇದೇ ಫೆಬ್ರವರಿ 6 ರಿಂದ ಆರಂಭವಾಗಲಿದೆ. ಅದರ ತಯಾರಿಗಾಗಿ ವಿರಾಟ್ ಕೊಹ್ಲಿ ಗುರುಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ವಾಸ್ತ್ಯವ ಹೂಡಿದ್ದಾರೆ. ಈ ವೇಳೆ ಕೊಹ್ಲಿಯನ್ನು ಕಾಣುವ ಸಲುವಾಗಿ ನೂರಾರು ಅಭಿಮಾನಿಗಳು ಅವರ ಮನೆಯ ಬಳಿ ಜಮಾಯಿಸುತ್ತಿದ್ದಾರೆ. ಇದರಲ್ಲಿ ಕೆಲವು ಅಭಿಮಾನಿಗಳು ಅವರನ್ನು ನೋಡುವ ಭರವಸೆಯಿಂದ ತಡರಾತ್ರಿಯವರೆಗೂ ಮನೆ ಮುಂದೆ ಕಾದುಕುಳಿತಿದ್ದಾರೆ. ಅಂತಿಮವಾಗಿ ತನ್ನ ಅಭಿಮಾನಿಗಳ ಈ ಅಭಿಮಾನಕ್ಕೆ ಕರಗಿದ ಕೊಹ್ಲಿ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದ್ದಲ್ಲದೆ, ವೈಯಕ್ತಿಕವಾಗಿ ಅವರಿಗೆ ಆಟೋಗ್ರಾಫ್ಗಳನ್ನು ನೀಡಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪ್ರಪಂಚದಾದ್ಯಂತದ ಕ್ರಿಕೆಟ್ ಪ್ರಿಯರು ಕೊಹ್ಲಿಯನ್ನು ಮನಸಾರೆ ಹೊಗಳಿದ್ದಾರೆ.
Fans waited for hours during night outside Virat Kohli's house in Gurugram.
– Virat called the fans inside his house and gave them autographs. 🥹❤️ pic.twitter.com/uW6luzbj79
— Mufaddal Vohra (@mufaddal_vohra) February 3, 2025
ರಣಜಿಯಲ್ಲೂ ವಿರಾಟ್ ಫೇಲ್
ಇನ್ನು ಕಿಂಗ್ ಕೊಹ್ಲಿಯ ಇತ್ತೀಚಿನ ಪ್ರದರ್ಶನದ ಬಗ್ಗೆ ಹೇಳುವುದಾದರೆ… ಬಿಸಿಸಿಐನ ಆದೇಶದ ಮೇರೆಗೆ ಸುಮಾರು 13 ವರ್ಷಗಳ ನಂತರ ಕೊಹ್ಲಿ ದೆಹಲಿ ಪರ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದರು. ಅವರ ಆಟವನ್ನು ವೀಕ್ಷಿಸಲು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸಾವಿರಾರು ಅಭಿಮಾನಿಗಳು ನೆರೆದಿದ್ದರು. ಆದಾಗ್ಯೂ, ದೇಶೀಯ ಕ್ರಿಕೆಟ್ಗೆ ಅವರ ಮರಳುವಿಕೆ ನಿರೀಕ್ಷೆಯಂತೆ ಇರಲಿಲ್ಲ. ರೈಲ್ವೇಸ್ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 15 ಎಸೆತಗಳನ್ನು ಎದುರಿಸಿದ್ದ ಕೇವಲ 6 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಎರಡನೇ ಇನ್ನಿಂಗ್ಸ್ನಲ್ಲಿ ಕೊಹ್ಲಿಗೆ ಬ್ಯಾಟಿಂಗ್ ಮಾಡುವ ಅವಕಾಶವೇ ಸಿಗಲಿಲ್ಲ.
ಏಕದಿನ ಸರಣಿಯತ್ತ ಕೊಹ್ಲಿ ಚಿತ್ತ
ರಣಜಿ ಪಂದ್ಯದಲ್ಲಿ ಅಗ್ಗವಾಗಿ ಔಟಾಗಿದ್ದರೂ, ವಿರಾಟ್ ಈಗ ಇಂಗ್ಲೆಂಡ್ ವಿರುದ್ಧ ಭಾರತದ ತವರಿನಲ್ಲಿ ನಡೆಯಲಿರುವ ಏಕದಿನ ಸರಣಿಯತ್ತ ಗಮನ ಹರಿಸಲಿದ್ದಾರೆ. ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತದ ಸಿದ್ಧತೆಗೆ ಅವರ ಫಾರ್ಮ್ ನಿರ್ಣಾಯಕವಾಗಲಿದೆ. ಈ ಸರಣಿಗಾಗಿ ವಿರಾಟ್ ಮತ್ತು ನಾಯಕ ರೋಹಿತ್ ಶರ್ಮಾ ನಾಗ್ಪುರ ತಲುಪಿದ್ದಾರೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಲ್ಲಿಂದ ಆರಂಭವಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Mon, 3 February 25