‘ರ‍್ಯಾಂಕ್ ಮುಖ್ಯವಲ್ಲ, ಟ್ರೋಫಿಗಳಷ್ಟೇ ಮುಖ್ಯ’; ಗೌತಮ್ ಗಂಭೀರ್

India vs Sri Lanka Test: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಡಬ್ಲ್ಯೂಟಿಸಿ ಫೈನಲ್ ರೇಸ್‌ನಲ್ಲಿ ಜೀವಂತವಾಗಿರಲು ಈ ಪಂದ್ಯ ಗೆಲ್ಲುವುದು ಮುಖ್ಯ. ಪತ್ರಿಕಾಗೋಷ್ಠಿಯಲ್ಲಿ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ತಂಡದ ಪ್ರದರ್ಶನ, ಡಬ್ಲ್ಯೂಟಿಸಿ ಸ್ಥಾನ ಮತ್ತು ಕುಲ್ದೀಪ್ ಯಾದವ್ ಬೌಲಿಂಗ್ ಕುರಿತು ನೇರ ಉತ್ತರ ನೀಡಿದರು. "ಶ್ರೇಯಾಂಕಗಳ ಬಗ್ಗೆ ನಮಗೆ ಕಾಳಜಿ ಇಲ್ಲ, ಟ್ರೋಫಿ ಗೆಲ್ಲುವುದೇ ನನ್ನ ಕೆಲಸ" ಎಂದು ಗಂಭೀರ್ ಸ್ಪಷ್ಟಪಡಿಸಿದರು.

‘ರ‍್ಯಾಂಕ್ ಮುಖ್ಯವಲ್ಲ, ಟ್ರೋಫಿಗಳಷ್ಟೇ ಮುಖ್ಯ’; ಗೌತಮ್ ಗಂಭೀರ್
Gautam Gambhir

Updated on: Aug 22, 2026 | 4:22 PM

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್​ಗೆ ಟೀಂ ಇಂಡಿಯಾ (India vs Sri Lanka) ಸಜ್ಜಾಗಿದೆ. ಉಭಯ ತಂಡಗಳ ನಡುವಿನ ಕೊನೆಯ ಟೆಸ್ಟ್ ಪಂದ್ಯ ಭಾನುವಾರದಿಂದ ಅಂದರೆ ಆಗಸ್ಟ್ 23 ರಿಂದ ಕೊಲಂಬೊದಲ್ಲಿ ಆರಂಭವಾಗಲಿದೆ. ಮೊದಲ ಟೆಸ್ಟ್‌ನಲ್ಲಿ ಸುಲಭ ಜಯ ದಾಖಲಿಸಿದ್ದ ಟೀಂ ಇಂಡಿಯಾ ಇದೀಗ ಎರಡನೇ ಟೆಸ್ಟ್ ಗೆದ್ದು ಸರಣಿ ವಶಪಡಿಸಿಕೊಳ್ಳುವುದರ ಜೊತೆಗೆ ಡಬ್ಲ್ಯೂಟಿಸಿ ಫೈನಲ್ ರೇಸ್​ನಲ್ಲಿ ಜೀವಂತವಾಗಿರಲು ಪ್ರಯತ್ನಿಸಲಿದೆ. ಆದರೆ ಆ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಪತ್ರಕರ್ತರ ಪ್ರಶ್ನೆಗಳಿಗೆ ಸ್ವಲ್ಪ ಖಾರವಾಗಿಯೇ, ನೇರ ನೇರ ಉತ್ತರ ನೀಡಿದರು.

ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನ

ವಾಸ್ತವವಾಗಿ ಗೌತಮ್ ಗಂಭೀರ್ ಟೀಂ ಇಂಡಿಯಾದ ಹೆಡ್ ಕೋಚ್ ಆದ ಬಳಿಕ ತಂಡದ ಪ್ರದರ್ಶನ ಏರಿಳಿತಗಳಿಂದ ಕೂಡಿದೆ. ಅದರಲ್ಲೂ ಟೆಸ್ಟ್ ತಂಡದ ಪ್ರದರ್ಶನ ಕಳಪೆಯಾಗಿದೆ. ಇದರ ಪರಿಣಾಮವಾಗಿ ಟೀಂ ಇಂಡಿಯಾ 4ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಹೀಗಾಗಿ ಈ ಬಾರಿ ಫೈನಲ್​ಗೇರುವ ಸಾಧ್ಯತೆಗಳು ಕಷ್ಟಕರವಾಗಿದೆ. ಈ ಬಗ್ಗೆ ಗಂಭೀರ್ ಬಳಿ ಪ್ರಶ್ನೆಗಳನ್ನು ಕೇಳಲಾಯಿತು.

ವ್ಯೂವ್ಸ್ ಮತ್ತು ಲೈಕ್ಸ್​ಗಳನ್ನು ನಂಬುವುದಿಲ್ಲ

ಮೊದಲಿಗೆ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ 5ನೇ ಸ್ಥಾನದಲ್ಲಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ‘ಕ್ರಿಕೆಟ್‌ನಲ್ಲಿ ನಾವು ಹೇಗೆ ಮುಂದುವರಿಯಲು ಬಯಸುತ್ತೇವೆ, ಅದಕ್ಕೆ ಏನು ಬೇಕು ಮತ್ತು ಕ್ರಿಕೆಟ್‌ನ ಸುಧಾರಣೆಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆಯೇ ಎಂಬುದು ಮುಖ್ಯವಾಗಿದೆ?. ಆದ್ದರಿಂದ ನಮಗೆ ಶ್ರೇಯಾಂಕಗಳ ಬಗ್ಗೆ ಕಾಳಜಿ ಇಲ್ಲ. ಕಳೆದ ಇಂಗ್ಲೆಂಡ್ ಪ್ರವಾಸದಿಂದಲೂ ನಾವು ಉತ್ತಮ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದೇವೆ. ಮುಖ್ಯ ತರಬೇತುದಾರನಾಗಿ ನನ್ನ ಕೆಲಸ ಟ್ರೋಫಿಗಳನ್ನು ಗೆಲ್ಲುವುದು. ನಾನು ನಂಬುವುದು ಅದನ್ನೇ. ನಾನು ಯೋಚಿಸುವುದು ಅದನ್ನೇ. ಇದೇ ನನ್ನ ಮತ್ತು ಇತರರ ನಡುವಿನ ವ್ಯತ್ಯಾಸ. ನಾನು ವ್ಯೂವ್ಸ್ ಮತ್ತು ಲೈಕ್ಸ್​ಗಳನ್ನು ನಂಬುವುದಿಲ್ಲ’ ಎಂದಿದ್ದಾರೆ.

IND vs SL: 2ನೇ ಟೆಸ್ಟ್​​ಗೂ ಮುನ್ನ ಶ್ರೀಲಂಕಾ ತಂಡದಲ್ಲಿ 2 ಬದಲಾವಣೆ

ಕ್ರಿಕೆಟ್‌ನಲ್ಲಿ ಏರಿಳಿತಗಳು ಸಹಜ

ಇನ್ನು ಕುಲ್ದೀಪ್ ಬೌಲಿಂಗ್ ಬಗ್ಗೆ ಮಾತನಾಡಿದ ಗಂಭೀರ್, ‘ನಾವು ಯಾವಾಗಲೂ ಒಂದು ಪಂದ್ಯದಲ್ಲಿ 20 ವಿಕೆಟ್‌ಗಳನ್ನು ಪಡೆಯುವ ಗುರಿಯನ್ನು ಹೊಂದಿದ್ದೇವೆ. ನಾವು ಉತ್ತಮ ಬೌಲಿಂಗ್ ವಿಭಾಗದೊಂದಿಗೆ ಕಣಕ್ಕಿಳಿಯಲು ಪ್ರಯತ್ನಿಸುತ್ತೇವೆ. ಕುಲ್ದೀಪ್ ಯಾದವ್ ಒಬ್ಬ ಉತ್ತಮ ಬೌಲರ್. ಅದರಲ್ಲಿ ಯಾವುದೇ ಸಂದೇಹವಿಲ್ಲ. ಕೆಲವೊಮ್ಮೆ ನಾಯಕನ ನಿರ್ಧಾರವು ಅಂತಿಮ ತಂಡದ ಆಯ್ಕೆಯ ಮೇಲೆ ಅವಲಂಬಿತವಾಗಿರುತ್ತದೆ. ಕ್ರಿಕೆಟ್‌ನಲ್ಲಿ ಏರಿಳಿತಗಳು ಸಹಜ. ನಾವು ನಮ್ಮ ಆಟಗಾರರನ್ನು ಬೆಂಬಲಿಸುತ್ತೇವೆ. ಒಂದು ಅಥವಾ ಎರಡು ಪಂದ್ಯಗಳ ಪ್ರದರ್ಶನದ ಆಧಾರದ ಮೇಲೆ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:19 pm, Sat, 22 August 26

Loading...
Unable to load recommendations.
Follow Us