ಮೊಹಮ್ಮದ್ ಶಮಿ ಹುಟ್ಟೂರಿನಲ್ಲಿ ಕ್ರೀಡಾಂಗಣ ನಿರ್ಮಿಸಲು ಮುಂದಾದ ಯೋಗಿ ಸರ್ಕಾರ
Mohammad Shami: ಮೊಹಮ್ಮದ್ ಶಮಿ ಅವರ ಗ್ರಾಮದಲ್ಲಿ ಮಿನಿ ಕ್ರೀಡಾಂಗಣ ನಿರ್ಮಿಸಲು ಪ್ರಸ್ತಾವನೆ ಕಳುಹಿಸುತ್ತಿದ್ದೇವೆ. ಪ್ರಸ್ತಾವನೆಯಲ್ಲಿ ಮುಕ್ತ ವ್ಯಾಯಾಮಶಾಲೆಯ ನಿರ್ಮಾಣದ ಬಗ್ಗೆಯೂ ಮನವಿ ಮಾಡಲಾಗಿದೆ. ಹಾಗೆಯೇ ಶಮಿ ಅವರ ಗ್ರಾಮದಲ್ಲಿ ಈ ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಾದಷ್ಟು ಭೂಮಿ ಕೂಡ ಇದೆ ಎಂದಿದ್ದಾರೆ.

ತನ್ನ ಮಾರಕ ಬೌಲಿಂಗ್ ದಾಳಿಯಿಂದ ಟೀಂ ಇಂಡಿಯಾವನ್ನು ವಿಶ್ವಕಪ್ (ICC World Cup 2023) ಸೆಮಿಫೈನಲ್ಗೇರಿಸುವಲ್ಲಿ ಪ್ರಮುಖ ಅಸ್ತ್ರ ಎನಿಸಿಕೊಂಡಿರುವ ವೇಗಿ ಮೊಹಮ್ಮದ್ ಶಮಿ (Mohammad Shami), ಪ್ರಸ್ತುತ ವಿಶ್ವ ಕ್ರಿಕೆಟ್ನಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗುತ್ತಿರುವ ಆಟಗಾರ ಎನಿಸಿಕೊಂಡಿದ್ದಾರೆ. ಮಾಜಿ ದಿಗ್ಗಜ ಕ್ರಿಕೆಟಿಗರಿಂದ ಹಿಡಿದು, ಪ್ರಧಾನಿ ಮೋದಿವರೆಗೂ (PM Modi) ಗಣ್ಯಾತಿಗಣ್ಯರು ಶಮಿ ಸಾಧನೆಯನ್ನು ಮನಸಾರೆ ಕೊಂಡಾಡಿದ್ದಾರೆ. ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಮೊಹಮ್ಮದ್ ಶಮಿ ಅವರ ಹುಟ್ಟೂರಾದ ಉತ್ತರ ಪ್ರದೇಶದ ಸಹಸ್ಪುರ್ ಅಲಿನಗರದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಯೋಗಿ ಸರ್ಕಾರ (Yogi Adityanath government) ಮುಂದಾಗಿದೆ ಎಂದು ವರದಿಯಾಗಿದೆ.
ಮಿನಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ
ಮೊಹಮ್ಮದ್ ಶಮಿ ಅವರ ಹುಟ್ಟೂರಾದ ಸಾಹಸಪುರ್ ಅಲಿನಗರದ ಅಮ್ರೋಹನಲ್ಲಿ ಮಿನಿ ಸ್ಟೇಡಿಯಂ ಮತ್ತು ಓಪನ್ ಜಿಮ್ ನಿರ್ಮಿಸಲು ಅಮ್ರೋಹದ ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ. ಅಮ್ರೋಹ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ತ್ಯಾಗಿ ಈ ಬಗ್ಗೆ ಮಾತನಾಡಿ, ಮೊಹಮ್ಮದ್ ಶಮಿ ಅವರ ಗ್ರಾಮದಲ್ಲಿ ಮಿನಿ ಕ್ರೀಡಾಂಗಣ ನಿರ್ಮಿಸಲು ಪ್ರಸ್ತಾವನೆ ಕಳುಹಿಸುತ್ತಿದ್ದೇವೆ. ಪ್ರಸ್ತಾವನೆಯಲ್ಲಿ ಮುಕ್ತ ವ್ಯಾಯಾಮಶಾಲೆಯ ನಿರ್ಮಾಣದ ಬಗ್ಗೆಯೂ ಮನವಿ ಮಾಡಲಾಗಿದೆ. ಹಾಗೆಯೇ ಶಮಿ ಅವರ ಗ್ರಾಮದಲ್ಲಿ ಈ ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಾದಷ್ಟು ಭೂಮಿ ಕೂಡ ಇದೆ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ತ್ಯಾಗಿ ಮತ್ತು ಮುಖ್ಯ ಅಭಿವೃದ್ಧಿ ಅಧಿಕಾರಿ ಅಮ್ರೋಹಾ ನೇತೃತ್ವದ ಜಿಲ್ಲಾಡಳಿತದ ತಂಡವು ಶಮಿ ಅವರ ಸಾಹಸಪುರ ಅಲಿನಗರ ಗ್ರಾಮಕ್ಕೆ ಭೇಟಿ ನೀಡಿತ್ತು. ಮಿನಿ ಸ್ಟೇಡಿಯಂ ಹಾಗೂ ಓಪನ್ ಜಿಮ್ ನಿರ್ಮಿಸಲು ಜಾಗ ಹುಡುಕಿಕೊಂಡು ತಂಡ ಅಲ್ಲಿಗೆ ಆಗಮಿಸಿತ್ತು. ಮೊಹಮ್ಮದ್ ಶಮಿಯಂತೆ ಕ್ರೀಡೆಯಲ್ಲಿ ಪ್ರಗತಿ ಸಾಧಿಸಲು ತಮ್ಮ ಪ್ರದೇಶದ ಯುವಕರಿಗೆ ಸಹಾಯ ಮಾಡುವುದು ಇದರ ಗುರಿಯಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅಮ್ರೋಹ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ತ್ಯಾಗಿ,‘ಯುಪಿ ಸರ್ಕಾರವು ರಾಜ್ಯದಾದ್ಯಂತ 20 ಕ್ರೀಡಾಂಗಣಗಳನ್ನು ನಿರ್ಮಿಸಲು ಮುಂದಾಗಿದೆ. ಆ ನಿಟ್ಟಿನಲ್ಲಿ ಅಮ್ರೋಹ ಜಿಲ್ಲೆಯ ಮೊಹಮ್ಮದ್ ಶಮಿ ಅವರ ಗ್ರಾಮವನ್ನು ಸಹ ಕ್ರೀಡಾಂಗಣ ನಿರ್ಮಿಸಲು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.
UP CM Yogi Adityanath to make cricket stadium in Mohammed Shami's village, Massive move by UP govt
Local administration team visited his village today for the inspection of the areapic.twitter.com/1FXoJRK63x
— Megh Updates 🚨™ (@MeghUpdates) November 17, 2023
ವಿಶ್ವಕಪ್ನಲ್ಲಿ ಶಮಿ ಪ್ರದರ್ಶನ
ವಾಸ್ತವವಾಗಿ 2023 ರ ಏಕದಿನ ವಿಶ್ವಕಪ್ನ ಮೊದಲ ನಾಲ್ಕು ಪಂದ್ಯಗಳಲ್ಲಿ ಮೊಹಮ್ಮದ್ ಶಮಿಯವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿರಲಿಲ್ಲ. ಆದರೆ, ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ ಶಮಿಗೆ ತಂಡದಲ್ಲಿ ಅವಕಾಶ ನೀಡಲಾಯಿತು. ಆ ಸಮಯದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ನ್ಯೂಜಿಲೆಂಡ್ ವಿರುದ್ಧ ಆಡುವ ಅವಕಾಶ ಪಡೆಇದ್ದ ಶಮಿ, ಆ ಪಂದ್ಯದಲ್ಲಿ ಐದು ವಿಕೆಟ್ಗಳನ್ನು ಕಬಳಿಸುವ ಮೂಲಕ ಅಬ್ಬರಿಸಿದರು. ಇದರ ನಂತರ ಅವರು ಇಂಗ್ಲೆಂಡ್ ವಿರುದ್ಧ ನಾಲ್ಕು ಮತ್ತು ಶ್ರೀಲಂಕಾ ವಿರುದ್ಧ ಐದು ವಿಕೆಟ್ಗಳನ್ನು ಉರುಳಿಸಿದ್ದರು.
ಆ ಬಳಿಕ ನಡೆದ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶಮಿ, ಕಿವೀಸ್ ಆರಂಭಿಕರಿಬ್ಬರನ್ನು ಪೆವಿಲಿಯನ್ಗಟ್ಟಿದರು. ನಂತರ ನಿಯಮಿತ ಅಂತರದಲ್ಲಿ ವಿಕೆಟ್ಗಳನ್ನು ಪಡೆದು ಒಟ್ಟು ಏಳು ವಿಕೆಟ್ಗಳನ್ನು ಪಡೆದರು. ಇದರೊಂದಿಗೆ ಶಮಿ 2023ರ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಅವರು ವಿಶ್ವಕಪ್ ಪಂದ್ಯವೊಂದರಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಕೂಡ ಆಗಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Sat, 18 November 23