Viral: ಊಟದ ವಿಚಾರಕ್ಕೆ ನಿಂತ ವಿವಾಹ ಸಮಾರಂಭ; ಠಾಣೆಯಲ್ಲಿ ಮದುವೆ ನೆರವೇರಿಸಿದ ಪೊಲೀಸರು

ಮದುವೆ ಮಂಟಪದಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಜಗಳ ನಡೆಯುವ, ಮನಸ್ತಾಪಗಳು ನಡೆದು ಮದುವೆ ನಿಂತು ಹೋದಂತಹ ಘಟನೆಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಅಂತಹದ್ದೇ ಘಟನೆ ನಡೆದಿದ್ದು, ಊಟದ ವಿಚಾರಕ್ಕೆ ವಧುವರ ಕುಟುಂಬದ ನಡುವೆ ಜಗಳ ಏರ್ಪಟ್ಟಿದ್ದು, ಕೊನೆಗೆ ಪೊಲೀಸರು ಠಾಣೆಯಲ್ಲಿ ಮದುವೆ ನೆರವೇರಿಸಿದ್ದಾರೆ. ಈ ಕುರಿತ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

Viral: ಊಟದ ವಿಚಾರಕ್ಕೆ ನಿಂತ ವಿವಾಹ ಸಮಾರಂಭ; ಠಾಣೆಯಲ್ಲಿ ಮದುವೆ ನೆರವೇರಿಸಿದ ಪೊಲೀಸರು
ವೈರಲ್​​ ವಿಡಿಯೋ
Edited By:

Updated on: Feb 10, 2025 | 11:21 AM

ಸಾಮಾನ್ಯವಾಗಿ ಮದುವೆ ಮದುವೆಯ ವಾತಾವರಣ ತುಂಬಾ ಸುಂದರವಾಗಿರುತ್ತದೆ. ಆದ್ರೆ ಕೆಲವೊಂದು ಮದುವೆಗಳಲ್ಲಿ ಸಣ್ಣಪುಟ್ಟ ಜಗಳಗಳು, ಹೊಡೆದಾಟಗಳು ನಡೆದಾಡುತ್ತಿರುತ್ತವೆ. ಹೀಗೆ ಊಟದ ವಿಚಾರಕ್ಕೆ, ವಧುವಿನ ಕಡೆಯವರು ಸರಿಯಾಗಿ ಉಪಚಾರ ಮಾಡಿಲ್ಲವೆಂದು ವಧು ವರರ ಸಂಬಂಧಿಕರ ನಡುವೆ ಜಗಳಗಳು ಏರ್ಪಟ್ಟು ಮದುವೆ ನಿಂತು ಆಗಬೇಕಿದ್ದ ಮದುವೆಗಳು ನಿಂತುಹೋದ ಅದೆಷ್ಟೋ ಘಟನೆಗಳು ನಡೆದಿವೆ. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಊಟದ ವಿಚಾರಕ್ಕೆ ವಧು ವರರ ಕುಟುಂಬದ ನಡುವೆ ಮನಸ್ತಾಪ ಏರ್ಪಟ್ಟಿದೆ. ಕೊನೆಗೆ ಪೊಲೀಸರೇ ಮದುಮಕ್ಕಳನ್ನು ಕರೆಸಿ ಠಾಣೆಯಲ್ಲಿ ಮದುವೆ ಮಾಡಿಸಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ವೈರಲ್ ಆಗುತ್ತಿದೆ.

ಈ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದ್ದು, ಮದುವೆ ಮನೆಯಲ್ಲಿ ಊಟದ ಕೊರತೆಯಿಂದಾಗಿ ವರನ ಮನೆಯವರು ಮದುವೆ ಬೇಡವೆಂದು ಹೇಳಿದ್ದಾರೆ. ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಪೂರ್ಣಕೊಂಡು ಇನ್ನೇನೂ ಹೂ ಮಾಲೆ ವಿನಿಮಯ ಮಾಡಬೇಕು ಎನ್ನುವಷ್ಟರಲ್ಲಿ ಊಟದ ವಿಚಾರಕ್ಕೆ ವಧು ಮತ್ತು ವರನ ಕುಟುಂಬದ ನಡುವೆ ಜಗಳ ಏರ್ಪಟ್ಟಿದೆ. ವರನ ಕುಟುಂಬದವರ ವರ್ತನೆಯಿಂದ ಅಸಮಾಧಾನಗೊಂಡ ವಧುವಿನ ಕುಟುಂಬವು ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದೆ.

ವಧು ವರರ ಸಮೇತ ಎರಡೂ ಕುಟುಂಬಗಳನ್ನು ಪೊಲೀಸ್ ಠಾಣೆಗೆ ಕರೆಸಿ, ಎರಡೂ ಕುಟುಂಬದ ನಡುವೆ ಸಂಧಾನ ನಡೆಸಿ ಬಳಿಕ ವರನ ಸಂಬಂಧಿಕರು ಸಮಾರಂಭವನ್ನು ಮುಂದುವರಿಸಲು ಒಪ್ಪಿಕೊಂಡಿದ್ದು, ಕೊನೆಗೆ ಠಾಣೆಯಲ್ಲಿಯೇ ಮದುವೆ ನೆರವೇರಿಸಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:


ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೊಲೀಸ್ ಠಾಣೆಯಲ್ಲಿ ವಧು ಮತ್ತು ವರ ಹಾರ ಬದಲಾಯಿಸುವ ದೃಶ್ಯವನ್ನು ಕಾಣಬಹುದು. ಊಟದ ಕೊರತೆಯಿಂದ ಮದುವೆ ಮಂಟಪದಲ್ಲಿ ಜಗಳ ಏರ್ಪಟ್ಟಿದ್ದು, ಕೊನೆಗೆ ಪೊಲೀಸರು ಮದುಮಕ್ಕಳನ್ನು ಠಾಣೆಗೆ ಕರೆಸಿ ಮದುವೆ ಮಾಡಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಆಗಮನಕ್ಕಾಗಿ ಕಾಯುತ್ತಿದ್ದೇವೆ; ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೃತರ ಹೆಸರನ್ನು ಪ್ರಿಂಟ್ ಮಾಡಿಸಿದ ಕುಟುಂಬ

ಫೆಬ್ರವರಿ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಒಳ್ಳೆಯ ಕೆಲಸ. ಕೆಲವೊಮ್ಮೆ ಪೊಲೀಸರು ತಮ್ಮ ಮಾನವೀಯತೆಯಿಂದ ಹೃದಯ ಗೆಲ್ಲುತ್ತಾರೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ವರನಿಗೆ ಪ್ರೀತಿಗಿಂತ ಊಟ ಹೆಚ್ಚಾಯಿತೇ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us