Video: ನಮ್ಮವರಿಗೆ ನಾಗರಿಕ ಪ್ರಜ್ಞೆ ಇಲ್ಲ, ಹಾಗಾಗಿ ಭಾರತ ಹೀಗಿದೆ ಎಂದ ಭಾರತೀಯ ವ್ಲಾಗರ್
ನಾವೆಲ್ಲರೂ ಶಿಕ್ಷಣ ಪಡೆದು ವಿದ್ಯಾವಂತರೇನು ಆಗಿದ್ದೇವೆ. ಸಾರ್ವಜನಿಕ ಸ್ಥಳಗಳನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳ ಬೇಕು ಎನ್ನುವ ಕನಿಷ್ಠ ಪ್ರಜ್ಞೆಯೂ ನಮಗಿಲ್ಲ. ಆದರೆ ಇದೀಗ ಭಾರತೀಯ ವ್ಲಾಗರ್ ಒಬ್ಬರು ವಿಡಿಯೋದಲ್ಲಿ ಹಾಂಗ್ ಕಾಂಗ್ನ ಸ್ವಚ್ಛತೆಯನ್ನು ಭಾರತದ ನಗರಗಳಿಗೆ ಹೋಲಿಸಿದ್ದಾರೆ. ಈ ವೇಳೆಯಲ್ಲಿ ವಿದೇಶವು ಇಷ್ಟೊಂದು ಸ್ವಚ್ಛವಾಗಿರಲು ಕಾರಣವೇನು ಎನ್ನುವುದನ್ನು ಇಲ್ಲಿ ತಿಳಿಸಿದ್ದಾರೆ. ಈ ಕುರಿತಾದ ವಿಡಿಯೋ ಇಲ್ಲಿದೆ.

ನಾವೆಲ್ಲರೂ ಮಾತಿಗೆ ಮಾತು ಸ್ವಚ್ಛತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮ ಭಾರತೀಯ ಮನಸ್ಥಿತಿ ಹೇಗಿದೆಯೆಂದರೆ ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿದ್ದರೆ ಸಾಕು. ಆದರೆ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛವಾಗಿಲ್ಲದಿದ್ದರೆ ನಮಗೇನು ಎನ್ನುವವರೇ ಹೆಚ್ಚು. ಭಾರತೀಯ ವ್ಲಾಗರ್ ಸಮಲ್ (Samal) ಹಾಂಗ್ ಕಾಂಗ್ ಗೆ ಭೇಟಿ ನೀಡಿದ್ದು, ಇಲ್ಲಿನ ಸ್ಥಳಗಳನ್ನು ವೀಕ್ಷಿಸುತ್ತ, ವಿದೇಶದಲ್ಲಿ ಸಾರ್ವಜನಿಕ ಸ್ಥಳಗಳು, ನದಿಗಳು ಎಷ್ಟು ಸ್ವಚ್ಛವಾಗಿದೆ. ಇಲ್ಲಿನ ಜನರು ಸ್ವಚ್ಛತೆಗೆ ಎಷ್ಟು ಗಮನ ಕೊಡುತ್ತಾರೆ ಎಂದು ವಿವರಿಸಿದ್ದಾರೆ. ಇದೇ ವೇಳೆ ಹಾಂಗ್ ಕಾಂಗ್ನ (Hong Kong) ಸ್ವಚ್ಛತೆಯನ್ನು ಭಾರತೀಯ ನಗರಗಳಿಗೆ ಹೋಲಿಸಿದ್ದು, ಭಾರತೀಯರು ಸ್ವಚ್ಛತೆಯ ಬಗ್ಗೆ ಗಮನ ಕೊಡುತ್ತಿಲ್ಲ ಎನ್ನುವುದನ್ನು ನೇರವಾಗಿ ಹೇಳಿದ್ದಾರೆ.
travelwithsamalvlogs ಹೆಸರಿನ ಖಾತೆಯಲ್ಲಿ ಭಾರತೀಯ ವ್ಲಾಗರ್ ಸಮಲ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇವರು ಹಾಂಗ್ ಕಾಂಗ್ನ ಸ್ವಚ್ಛವಾದ ನದಿ ತೀರದಲ್ಲಿ ನಡೆದುಕೊಂಡು ಹೋಗುತ್ತಾ, ವಿದೇಶಗಳು ಹೆಚ್ಚು “ಅಭಿವೃದ್ಧಿ ಹೊಂದಿದವು” ಎಂದು ಭಾವಿಸಲು ಕಾರಣವೇನು ಎನ್ನುವುದನ್ನು ವಿವರಿಸುವುದನ್ನು ಕಾಣಬಹುದು. ಅದಲ್ಲದೇ, ನಮ್ಮ ನಗರಗಳನ್ನು ಇದನ್ನಾಗಿ ಪರಿವರ್ತಿಸಲು ನಾವು ಬಯಸಿದರೆ, ನಮಗೆ ಬೇಕಾಗಿರುವುದು ಸರ್ಕಾರ ಮತ್ತು ಜನರ ಬೆಂಬಲ. ನಮಗೆ ಎತ್ತರದ ಕಟ್ಟಡಗಳು, ಹಚ್ಚ ಹಸಿರಾದ ಪರಿಸರ ಮತ್ತು ನದಿಗಳಿವೆ ಎಂದು ಹೇಳುವುದನ್ನು ನೀವಿಲ್ಲಿ ನೋಡಬಹುದು.
ವಿದೇಶಕ್ಕೂ ಹಾಗೂ ಭಾರತಕ್ಕೂ ಇರುವ ಒಂದೇ ವ್ಯತ್ಯಾಸವೆಂದರೆ ಸ್ವಚ್ಛತೆ ಮತ್ತು ನಾಗರಿಕ ಪ್ರಜ್ಞೆ. ಹೌದು, ಇಲ್ಲಿನ ರಸ್ತೆಗಳು ಸ್ವಚ್ಛವಾಗಿವೆ. ಹಚ್ಚ ಹಸಿರಾದ ಗಿಡಗಳು ಹಾಗೂ ಈ ಗಿಡಗಳಲ್ಲಿ ಹೂವುಗಳು ಮಾತ್ರ ಇರುತ್ತವೆ, ಬಿಸಾಡಲಾದ ಗುಟ್ಕಾ ಪ್ಯಾಕೆಟ್ಗಳಲ್ಲ. ಹೂವಿನ ಬಣ್ಣವನ್ನು ಬದಲಾಯಿಸಲು ಯಾರೂ ಅವುಗಳ ಮೇಲೆ ಪಾನ್ ಮಸಾಲವನ್ನು ಉಗುಳಿಲ್ಲ. ಯಾರೂ ಹೂವುಗಳನ್ನು ಕೀಳುವುದಿಲ್ಲ ಸಸ್ಯಗಳನ್ನು ಕದಿಯುವುದಿಲ್ಲ ಎಂದು ನಮ್ಮ ಭಾರತೀಯರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇಲ್ಲಿನ ನದಿಗಳು ಕೂಡ ಅಷ್ಟೇ ಸ್ವಚ್ಛವಾಗಿವೆ, ಅವುಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತೇಲುತ್ತಿಲ್ಲ. ಎಲ್ಲಿಯೂ ಕಸ ಕಾಣುತ್ತಿಲ್ಲ. ನಾವು ಇಲ್ಲಿಗೆ ಬರಲು ತುಂಬಾ ಹಣ ಖರ್ಚು ಮಾಡುತ್ತೇವೆ. ಈ ದೇಶಗಳಿಂದ ಕಲಿಯುವ ಮೂಲಕ ನಾವು ಇದನ್ನು ನಮ್ಮ ಮನೆಯಲ್ಲಿಯೂ ಪುನರಾವರ್ತಿಸಬಹುದು. ಇವು ದೊಡ್ಡ ಸಮಸ್ಯೆಗಳಾಗಿ ಕಾಣದಿರಬಹುದು ಆದರೆ ಇಂತಹ ಸಣ್ಣ ಪುಟ್ಟ ವಿಚಾರಗಳೇ ನಮ್ಮ ಭಾರತವನ್ನು ಹಿಂದಕ್ಕೆ ತಳ್ಳುತ್ತಿವೆ ಎಂದು ಕಟುವಾಸ್ತವವನ್ನು ಏನಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :Viral: ಹನಿಮೂನ್ಗೆ ಹೋಗಿ ಬೆಡ್ ಮೇಲೆ ಮೂತ್ರ ಮಾಡಿದ ಉದ್ಯಮಿ
ಈ ವಿಡಿಯೋವೊಂದು ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಕನಿಷ್ಠ ನಾಗರಿಕ ಪ್ರಜ್ಞೆ ಇರುವುದು ಮುಖ್ಯ ಎಂದಿದ್ದಾರೆ. ಇನ್ನೊಬ್ಬರು, ಭಾರತದಲ್ಲಿ ಈ ರೀತಿ ಪುನರಾವರ್ತನೆಯಾಗಬೇಕೆಂದು ನಾನು ಬಯಸುತ್ತೇನೆ ಆದರೆ ನಮಗೆ ನಾಗರಿಕ ಪ್ರಜ್ಞೆ ಇಲ್ಲ. ಜಾತಿ, ಧರ್ಮ ಮತ್ತು ಭಾಷೆಯ ಬಗ್ಗೆ ಹೋರಾಡುವುದರಲ್ಲಿ ನಾವು ತುಂಬಾ ಕಾರ್ಯನಿರತರಾಗಿದ್ದು, ಹೀಗಾಗಿ ಈ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಮಯವಿಲ್ಲ ಎಂದು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಸತ್ಯವಾದ ಮಾತು, ಭಾರತೀಯರಿಗೆ ನಾಗರಿಕ ಪ್ರಜ್ಞೆಯೇ ಇಲ್ಲ ಎಂದು ವ್ಲಾಗರ್ ಅವರ ಮಾತನ್ನು ಒಪ್ಪಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Tue, 22 July 25