ಪಾಕಿಸ್ತಾನದ ಸೇನೆ ಮೇಲೆ ಬಲೂಚಿಸ್ತಾನ ಗ್ರೆನೇಡ್ ದಾಳಿ
ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆಯೇ, ಬಲೂಚಿಸ್ತಾನದಲ್ಲಿಯೂ ಪಾಕಿಸ್ತಾನಿ ಸೇನೆಯ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ಕ್ವೆಟ್ಟಾ, ಟರ್ಬತ್ ಮತ್ತು ಪಂಜ್ಶೀರ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಪಾಕಿಸ್ತಾನ ಸೇನೆಯ ಮೇಲೆ ಗ್ರೆನೇಡ್ ದಾಳಿಗಳನ್ನು ನಡೆಸಿದೆ.

ಬಲೂಚಿಸ್ತಾನ, ಮೇ 10: ಭಾರತ-ಪಾಕಿಸ್ತಾನ (India-Pakistan) ಉದ್ವಿಗ್ನ ಮಧ್ಯೆಯೇ, ಬಲೂಚಿಸ್ತಾನವು (Balochistan) ಪಾಕಿಸ್ತಾನಿ ಸೈನ್ಯದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಪ್ರತ್ಯೇಕ ದೇಶಕ್ಕಾಗಿ ಒತ್ತಾಯಿಸುತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ, ಶುಕ್ರವಾರ ತಡರಾತ್ರಿ (ಮೇ.10) ಕ್ವೆಟ್ಟಾ, ಟರ್ಬತ್ ಮತ್ತು ಪಂಜ್ಶೀರ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಪಾಕಿಸ್ತಾನ ಸೇನೆಯ ಮೇಲೆ ಗ್ರೆನೇಡ್ ದಾಳಿ ಮಾಡಿದೆ. ಗುರುವಾರವೂ ಸಹ, ಬಲೂಚಿಸ್ತಾನ ದಾಳಿ ಮಾಡಿತ್ತು. ಗ್ಯಾಸ್ ಪೈಪ್ಲೈನ್ಗಳನ್ನು ಸ್ಫೋಟಿಸಿತ್ತು. ಈ ಮೂಲಕ ಪಾಕಿಸ್ತಾನಕ್ಕೆ ಎರಡೇರಡು ಕಡೆಯಿಂದ ಪೆಟ್ಟು ತಿನ್ನುತ್ತಿದೆ.
14 ಪಾಕ್ ಸೈನಿಕರ ಸಾವು
ಗುರುವಾರ (ಮೇ.8) ದಂದು ಬಿಎಲ್ಎ ನಡೆಸಿದ ಐಇಡಿ ನಡೆದ ದಾಳಿಯಲ್ಲಿ 14 ಪಾಕಿಸ್ತಾನಿ ಸೈನಿಕರು ಹತರಾಗಿದ್ದರು. ಈ ಬಗ್ಗೆ ಸ್ವತಃ ಬಲೂಚಿಸ್ತಾನ ಲಿಬರೇಶನ್ ಆರ್ಮಿ (ಬಿಎಲ್ಎ) ತನ್ನ ಹೇಳಿಕೆ ಬಿಡುಗಡೆ ಮಾಡಿದ್ದು, ಮಾತ್ರವಲ್ಲದೇ ದಾಳಿಯ ವಿಡಿಯೋ ಕೂಡ ಬಿಡುಗಡೆ ಮಾಡಿತ್ತು. ಬಲೂಚಿಸ್ತಾನದ ಕಚ್ಚಿ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನಾ ಸೈನಿಕರ ವಾಹನವು ಕಣಿವೆಯಲ್ಲಿ ಚಲಿಸುತ್ತಿದ್ದಾಗ ಸುಧಾರಿತ ಸ್ಫೋಟಕ ಸಾಧನ ಸ್ಫೋಟಿಸಲಾಗಿತ್ತು.
ರೈಲನ್ನು ಅಪಹರಿಸಿದ್ದ ಸಂಘಟನೆ
ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಈ ಹಿಂದೆ ಕೂಡ ಹಲವು ಬಾರಿ ಇಂತಹ ದಾಳಿಗಳನ್ನು ನಡೆಸಿತ್ತು. ಇದೇ ವರ್ಷ ಮಾರ್ಚ್ ತಿಂಗಳಲ್ಲಿ, ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುತ್ತಿದ್ದ ಜಾಫರ್ ಎಕ್ಸ್ಪ್ರೆಸ್ ರೈಲನ್ನು ಈ ಗುಂಪು ಅಪಹರಿಸಿತ್ತು. ಈ ಘಟನೆಯಲ್ಲಿ 21 ನಾಗರಿಕರು ಮತ್ತು ನಾಲ್ವರು ಸೈನಿಕರು ಮೃತಪಟ್ಟಿದ್ದರು. ಬಲೂಚಿಸ್ತಾನದಲ್ಲಿ ಸುಮಾರು 20 ವರ್ಷಗಳಿಂದ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ.
ಇದನ್ನೂ ಓದಿ: ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಸಾಲ ಕೊಟ್ಟ IMF
ಬಲೂಚಿಸ್ತಾನ ಪ್ರತ್ಯೇಕ ದೇಶವಾಗಬೇಕು
ಖ್ಯಾತ ಬಲೂಚ್ ಬರಹಗಾರ ಮೀರ್ ಯಾರ್ ಬಲೂಚ್ ಅವರು ಪಾಕಿಸ್ತಾನದಿಂದ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ವಿಶ್ವಸಂಸ್ಥೆ ಎದುರು ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ಬಲೂಚ್ ರಾಯಭಾರ ಕಚೇರಿಯನ್ನು ತೆರೆಯಲು ಅವಕಾಶ ನೀಡಬೇಕೆಂದು ಅವರು ಭಾರತ ಸರ್ಕಾರವನ್ನು ಕೋರಿದ್ದಾರೆ. ಬಲೂಚಿಸ್ತಾನಕ್ಕೆ ಶಾಂತಿಪಾಲನಾ ಪಡೆಗಳನ್ನು ಕಳುಹಿಸುವಂತೆ ಅವರು ವಿಶ್ವಸಂಸ್ಥೆಯನ್ನು ವಿನಂತಿಸಿದರು ಮತ್ತು ಪಾಕಿಸ್ತಾನಿ ಸೈನ್ಯವು ಆ ಪ್ರದೇಶವನ್ನು ತೊರೆಯಬೇಕೆಂದು ಒತ್ತಾಯಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:42 am, Sat, 10 May 25