
ಢಾಕಾ, ಆಗಸ್ಟ್ 06: ಬಾಂಗ್ಲಾದೇಶದಲ್ಲಿ 2024 ರಲ್ಲಿ ಶೇಖ್ ಹಸೀನಾ(Sheikh Hasina) ಸರ್ಕಾರ ಪತನಗೊಂಡ ನಂತರ, ಮುಹಮ್ಮದ್ ಯೂನಸ್ (Muhammad Yunus) ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸುವುದನ್ನು ದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಜಮಾನ್ ಆರಂಭದಲ್ಲಿ ತೀವ್ರವಾಗಿ ವಿರೋಧಿಸಿದ್ದರು ಎಂಬ ಅಪರೂಪದ ರಹಸ್ಯ ತೆರೆಮರೆಯ ರಾಜಕೀಯ ಸತ್ಯ ಬೆಳಕಿಗೆ ಬಂದಿದೆ.
ಬಾಂಗ್ಲಾದೇಶದ ಮಾಜಿ ಕಾನೂನು ಸಲಹೆಗಾರ ಹಾಗೂ ಢಾಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆಸಿಫ್ ನಜ್ರುಲ್ ಅವರು ಪತ್ರಿಕೆ ‘ಪ್ರೋಥೋಮ್ ಅಲೋ’ಗೆ (Prothom Alo) ನೀಡಿದ ಸಂದರ್ಶನದಲ್ಲಿ ಈ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.
ನಜ್ರುಲ್ ಅವರ ಪ್ರಕಾರ, ವಿದ್ಯಾರ್ಥಿ ನಾಯಕರು ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಚುಕ್ಕಾಣಿ ಹಿಡಿಯಲು ಆಯ್ಕೆ ಮಾಡಿದ್ದರು. ಆದರೆ ಸೇನಾ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜನರಲ್ ವಾಕರ್ ಎರಡು ಪ್ರಮುಖ ಕಾರಣಗಳನ್ನು ನೀಡಿ ಯೂನಸ್ ನೇಮಕವನ್ನು ನಿರಾಕರಿಸಿದ್ದರು.
ಜನವರಿ 2024 ರಲ್ಲಿ ಯೂನಸ್ ಅವರ ‘ಗ್ರಾಮೀಣ ಟೆಲಿಕಾಂ’ ಸಂಸ್ಥೆಯಲ್ಲಿ ಕಾರ್ಮಿಕರ ಕಲ್ಯಾಣ ನಿಧಿ ನೀಡದ ಆರೋಪದ ಮೇಲೆ ಅವರಿಗೆ 6 ತಿಂಗಳ ಜೈಲು ಶಿಕ್ಷೆಯಾಗಿತ್ತು. ಜೂನ್ 2024 ರಲ್ಲಿ ಯೂನಸ್ ಹಾಗೂ ಇತರ 13 ಜನರ ವಿರುದ್ಧ 3 ಮಿಲಿಯನ್ ಡಾಲರ್ಗಿಂತ ಅಧಿಕ ಹಣ ದುರುಪಯೋಗಪಡಿಸಿಕೊಂಡ ಆರೋಪ ಹೊರಿಸಲಾಗಿತ್ತು. ಈ ಪ್ರಕರಣಗಳು ಶೇಖ್ ಹಸೀನಾ ಸರ್ಕಾರದ ರಾಜಕೀಯ ದ್ವೇಷದ ಪಿತೂರಿಯಿಂದ ಕೂಡಿದ್ದವು ಎಂದು ಆಸಿಫ್ ನಜ್ರುಲ್ ಸೇನಾ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟರು.
ಮತ್ತಷ್ಟು ಓದಿ: ಶೇಖ್ ಹಸೀನಾರ ಕಾರ್ಯಕ್ರಮದಲ್ಲಿ ಭಾಗಿ: ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವಿದ್ಯಾರ್ಥಿ ನಾಯಕರ ಸಂಪೂರ್ಣ ಬೆಂಬಲ ಯೂನಸ್ ಅವರಿಗೇ ಇದೆ ಎಂಬುದನ್ನು ಮನಗಂಡ ನಂತರವೇ ಜನರಲ್ ವಾಕರ್-ಉಜ್-ಜಮಾನ್ ಅವರು ಯೂನಸ್ ಅವರ ಹೆಸರನ್ನು ಉನ್ನತ ಹುದ್ದೆಗೆ ಬೆಂಬಲಿಸಲು ಒಪ್ಪಿಕೊಂಡರು. ನಂತರ ಯೂನಸ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಅವರ ಮೇಲಿದ್ದ ಶಿಕ್ಷೆಯನ್ನು ನ್ಯಾಯಾಲಯ ರದ್ದುಗೊಳಿಸಿತು.
2024 ರ ಹಸೀನಾ ವಿರೋಧಿ ಬೃಹತ್ ಪ್ರತಿಭಟನೆಯಲ್ಲಿ ನಜ್ರುಲ್ ಪ್ರಮುಖ ಮಾರ್ಗದರ್ಶಕರಾಗಿದ್ದರು. ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ ನಂತರ ಮಿಲಿಟರಿ ಮತ್ತು ನಾಗರಿಕ ನಾಯಕರ ನಡುವೆ ಸಂಧಾನಕಾರರಾಗಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಪ್ರಸ್ತುತ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವು ಅಧಿಕಾರದಲ್ಲಿದ್ದು, ಚುನಾವಣೆಗೆ ಹಾಗೂ ಮೂಲಭೂತ ಪ್ರಜಾಸತ್ತಾತ್ಮಕ ಸುಧಾರಣೆಗಳಿಗೆ ಮಿಲಿಟರಿ ಮತ್ತು ಯೂನಸ್ ಆಡಳಿತದ ನಡುವೆ ಹಲವು ವಿಷಯಗಳಲ್ಲಿ ಇನ್ನೂ ಚರ್ಚೆಗಳು ಮುಂದುವರೆದಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ