
ಜಕಾರ್ತಾ,ಆಗಸ್ಟ್ 02: : ದಕ್ಷಿಣ ಏಷ್ಯಾದ ಪ್ರಮುಖ ದ್ವೀಪ ರಾಷ್ಟ್ರವಾದ ಇಂಡೋನೇಷ್ಯಾದ ಮಧುರಾ ದ್ವೀಪದ ಕರಾವಳಿಯಲ್ಲಿ ಪ್ರಯಾಣಿಕರ ಹಡಗಿನಲ್ಲಿ ದಿಢೀರ್ ಭೀಕರ ಬೆಂಕಿ ಕಾಣಿಸಿಕೊಂಡು, ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, 41 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ದೇಶದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ದೃಢಪಡಿಸಿದೆ.
ಅಗ್ನಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆಯೇ ನೌಕಾಪಡೆ ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದು, ಕಾಣೆಯಾದವರಿಗಾಗಿ ಸಮುದ್ರದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಮಧುರಾ ದ್ವೀಪದಿಂದ ಹೊರಟಿದ್ದ ಪ್ರಯಾಣಿಕರ ಹಡಗಿನಲ್ಲಿ ಮಧ್ಯಾಹ್ನ ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಗೆ ಹಾಗೂ ದಟ್ಟ ಹೊಗೆ ಆವರಿಸಿದ್ದರಿಂದ ದೋಣಿಯಲ್ಲಿದ್ದ ಪ್ರಯಾಣಿಕರು ಪ್ರಾಣಭಯದಿಂದ ನೀರಿಗೆ ಜಿಗಿದಿದ್ದಾರೆ. ರಕ್ಷಣಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಕೆಲವರನ್ನು ರಕ್ಷಿಸಿವೆಯಾದರೂ, ಐದು ಜನರ ಶವಗಳು ಸಮುದ್ರದಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಹಡಗಿನಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಪ್ರಯಾಣಿಕರಿದ್ದರೆನ್ನಲಾಗಿದ್ದು, ಸದ್ಯ 41 ಜನರು ಕಾಣೆಯಾಗಿದ್ದಾರೆ. ಇವರಲ್ಲಿ ಹಲವರು ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಸಂಸ್ಥೆಯ ಹೆಲಿಕಾಪ್ಟರ್ಗಳು ಹಾಗೂ ಹೈ-ಸ್ಪೀಡ್ ಬೋಟ್ಗಳು ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಬದುಕುಳಿದವರ ಹುಡುಕಾಟ ತೀವ್ರಗೊಳಿಸಲಾಗಿದೆ.
ದೋಣಿಯ ಇಂಜಿನ್ನಲ್ಲಾದ ತಾಂತ್ರಿಕ ದೋಷ ಹಾಗೂ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ.ಸುಮಾರು 17,000ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ಜನರಿಗೆ ಹಾಗೂ ಸರಕು ಸಾಗಣೆಗೆ ಹಡಗುಗಳೇ ಮುಖ್ಯ ಸಾರಿಗೆ ಮಾರ್ಗವಾಗಿವೆ. ಆದರೆ, ಭದ್ರತಾ ನಿಯಮಗಳ ಕೊರತೆ, ಮಿತಿಮೀರಿದ ಪ್ರಯಾಣಿಕರ ಏರಿಕೆ ಮತ್ತು ಹಳೆಯ ಬೋಟ್ಗಳ ಬಳಕೆಯಿಂದಾಗಿ ದೇಶದಲ್ಲಿ ಆಗಾಗ ಇಂತಹ ಭೀಕರ ಜಲ ದುರಂತಗಳು ಸಂಭವಿಸುತ್ತಿರುತ್ತವೆ.
ಮತ್ತಷ್ಟು ಓದಿ: ಜಬಲ್ಪುರ ದೋಣಿ ದುರಂತ, ಸಾವು ಬಂದ್ರೂ, ತಬ್ಬಿಕೊಂಡ ಮಗನನ್ನು ಬಿಡದ ತಾಯಿ
ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಸಮುದ್ರದ ಅಲೆಗಳ ಭೋರ್ಗರೆತ ಹೆಚ್ಚಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಭಾರಿ ಸವಾಲಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ