ರಾಮ ಮಂದಿರದ ಮೇಲೆ ದಾಳಿ ನಡೆಸುವುದಾಗಿ ಖಲಿಸ್ತಾನಿ ಉಗ್ರ ಪನ್ನುನ್ ಬೆದರಿಕೆ

ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (ಎಸ್​ಎಫ್​ಜೆ) ಸಂಘಟನೆಯು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಗುರುಪತ್ವಂತ್ ಸಿಂಗ್ ಪನ್ನುನ್ ನವೆಂಬರ್ 16 ಮತ್ತು 17ರಂದು ದಾಳಿಯನ್ನು ನಡೆಸುವುದಾಗಿ ಎಚ್ಚರಿಸಿದ್ದಾರೆ. ಹಾಗೇ, ಹಿಂದೂ ದೇವಾಲಯಗಳ ಮೇಲಿನ ಖಲಿಸ್ತಾನಿ ದಾಳಿಯಿಂದ ದೂರವಿರುವಂತೆ ಕೆನಡಾದಲ್ಲಿರುವ ಭಾರತೀಯರಿಗೆ ಪನ್ನುನ್ ಬೆದರಿಕೆ ಹಾಕಿದ್ದಾರೆ.

ರಾಮ ಮಂದಿರದ ಮೇಲೆ ದಾಳಿ ನಡೆಸುವುದಾಗಿ ಖಲಿಸ್ತಾನಿ ಉಗ್ರ ಪನ್ನುನ್ ಬೆದರಿಕೆ
ರಾಮ ಮಂದಿರ

Updated on: Nov 11, 2024 | 4:15 PM

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಅಯೋಧ್ಯೆಯ ರಾಮಮಂದಿರ ಸೇರಿದಂತೆ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಿದ್ದಾನೆ. ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಪನ್ನುನ್ ನವೆಂಬರ್ 16 ಮತ್ತು 17ರಂದು ಈ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕೆನಡಾದ ಬ್ರಾಂಪ್ಟನ್‌ನಲ್ಲಿ ರೆಕಾರ್ಡ್ ಮಾಡಲಾದ ವಿಡಿಯೋ ಹಿಂದೂ ಪೂಜಾ ಮಂದಿರಗಳ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಗುರಿಯನ್ನು ಹೊಂದಿದೆ.

ಗುರುಪತ್ವಂತ್ ಪನ್ನುನ್ ತಮ್ಮ ಹೇಳಿಕೆಯಲ್ಲಿ “ಹಿಂಸಾತ್ಮಕ ಹಿಂದುತ್ವ ಸಿದ್ಧಾಂತದ ಜನ್ಮಸ್ಥಳವಾದ ಅಯೋಧ್ಯೆಯ ಅಡಿಪಾಯವನ್ನು ನಾವು ಅಲುಗಾಡಿಸುತ್ತೇವೆ” ಎಂದು ಭಾರತದ ಅತ್ಯಂತ ಪವಿತ್ರ ತಾಣಗಳಲ್ಲಿ ಒಂದಕ್ಕೆ ನೇರ ಬೆದರಿಕೆ ಹಾಕಿದ್ದಾನೆ. ಈ ವರ್ಷದ ಜನವರಿಯಲ್ಲಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅದರಲ್ಲಿ ಪ್ರಾರ್ಥಿಸುತ್ತಿರುವ ಚಿತ್ರಗಳನ್ನು ವೀಡಿಯೊದಲ್ಲಿ ನೋಡಬಹುದು. ಹಿಂದೂ ದೇವಾಲಯಗಳ ಮೇಲಿನ ಖಲಿಸ್ತಾನಿ ದಾಳಿಯಿಂದ ದೂರವಿರುವಂತೆ ಕೆನಡಾದಲ್ಲಿರುವ ಭಾರತೀಯರಿಗೆ ಪನ್ನುನ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಪನ್ನುನ್ ಕೊಲೆ ಸಂಚು ರೂಪಿಸಿದ ಮಾಜಿ ಭಾರತೀಯ ಅಧಿಕಾರಿ ವಿಕಾಸ್ ಯಾದವ್ ಯಾರು?

ಕಳೆದ ತಿಂಗಳು ನವೆಂಬರ್ 1 ಮತ್ತು 19ರ ನಡುವೆ ಏರ್ ಇಂಡಿಯಾ ವಿಮಾನಗಳಲ್ಲಿ ಹಾರಾಟ ಮಾಡದಂತೆ ಪನ್ನುನ್ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದರು. ಪನ್ನುನ್ ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ. ಇದು ಭಾರತೀಯ ಮತ್ತು ವಲಸಿಗ ಸಮುದಾಯಗಳಲ್ಲಿ ಅಶಾಂತಿ ಮತ್ತು ಉದ್ವಿಗ್ನತೆಯನ್ನು ಪ್ರಚೋದಿಸುವ ವ್ಯಾಪಕ ಪ್ರಯತ್ನವನ್ನು ಸೂಚಿಸುತ್ತದೆ.

ಪ್ರತ್ಯೇಕ ಸಿಖ್ ರಾಜ್ಯದ ಕಲ್ಪನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಪನ್ನುನ್ ನೇತೃತ್ವದ ಎಸ್​ಎಫ್​ಜೆ ವಿವಿಧ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಪನ್ನುನ್ ಕೋಮು ಸೌಹಾರ್ದತೆಯನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಹಲವಾರು ಬೆಂಕಿಯಿಡುವ ಹೇಳಿಕೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಪನ್ನುನ್ ಪ್ರಕರಣ: ‘ವಿಫಲವಾದ ಹತ್ಯೆ ಸಂಚು’ ತನಿಖೆಗೆ ಭಾರತೀಯ ತನಿಖಾ ಸಮಿತಿ ಇಂದು ಅಮೆರಿಕಕ್ಕೆ ಭೇಟಿ

ಇತ್ತೀಚಿನ ವರ್ಷಗಳಲ್ಲಿ, ಕೆನಡಾದಲ್ಲಿ ತೀವ್ರವಾದಿ ಖಲಿಸ್ತಾನಿ ಅಂಶಗಳಿಂದ ಹಿಂದೂ ದೇವಾಲಯಗಳ ಮೇಲಿನ ದಾಳಿಗಳು ಮತ್ತು ಹಿಂದೂ ಸಮುದಾಯದ ವಿರುದ್ಧ ಬೆದರಿಕೆಗಳು ಹೆಚ್ಚಿವೆ. ವಿಧ್ವಂಸಕ ಕೃತ್ಯಗಳು, ದೇವಾಲಯದ ಗೋಡೆಗಳ ಮೇಲಿನ ದ್ವೇಷದ ಬರಹ ಮತ್ತು ಸಮುದಾಯದ ವಿರುದ್ಧ ಸಾರ್ವಜನಿಕ ಬೆದರಿಕೆಗಳಲ್ಲಿ ಕೂಡ ಏರಿಕೆಯಾಗಿದೆ.

ಕಳೆದ ವಾರ, ಖಲಿಸ್ತಾನಿ ಪರ ಪ್ರತಿಭಟನಾಕಾರರು ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದಲ್ಲಿ ಭಕ್ತರೊಂದಿಗೆ ಘರ್ಷಣೆ ನಡೆಸಿದ್ದಾರೆ. ಭಾರತವು ಪದೇ ಪದೇ ಕಳವಳ ವ್ಯಕ್ತಪಡಿಸಿದ ಹೊರತಾಗಿಯೂ ಖಲಿಸ್ತಾನಿ ಪರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೆನಡಾದ ಅಧಿಕಾರಿಗಳಿಂದ ಪ್ರತಿಕ್ರಿಯೆಯು ನೀರಸವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us