ಭಾರತಕ್ಕೆ ತಲೆನೋವಾಗಿದ್ದ ಜಸ್ಟಿನ್ ಟ್ರುಡೋ ಬದಲು ಕೆನಡಾ ಪ್ರಧಾನಿಯಾಗಲಿದ್ದಾರೆ ಮಾರ್ಕ್ ಕಾರ್ನೆ
ಜಸ್ಟಿನ್ ಟ್ರುಡೋ ಶೀಘ್ರದಲ್ಲೇ ಕೆನಡಾ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಟ್ರೂಡೋ ಅವರ ಲಿಬರಲ್ ಪಾರ್ಟಿಯು ಮಾರ್ಕ್ ಕಾರ್ನೆ ಅವರನ್ನು ಹೊಸ ನಾಯಕ ಮತ್ತು ದೇಶದ ಮುಂದಿನ ಪ್ರಧಾನಿಯಾಗಿ ಆಯ್ಕೆ ಮಾಡಿದೆ. ಈ ವಾರವೇ ಕಾರ್ನೆ ಅಧಿಕಾರ ಸ್ವೀಕರಿಸುವ ನಿರೀಕ್ಷೆ ಇದೆ. ಇದರಿಂದ ಭಾರತ, ಕೆನಡಾ ಬಾಂಧವ್ಯ ಸುಧಾರಿಸಲಿದೆಯೇ? ಕಾರ್ನೆ ಹೇಳಿದ್ದೇನು? ಇಲ್ಲಿದೆ ವಿವರ.

ನವದೆಹಲಿ, ಮಾರ್ಚ್ 10: ಭಾರತಕ್ಕೆ ಸದಾ ತಲೆನೋವಾಗಿದ್ದ ಜಸ್ಟಿನ್ ಟ್ರೂಡೋ ಬದಲಿಗೆ ಕೆನಡಾ (Canada) ಪ್ರಧಾನಿಯಾಗಿ ಮಾರ್ಕ್ ಕಾರ್ನೆ (Mark Carney) ಅಧಿಕಾರ ವಹಿಸಿಕೊಳ್ಳುವುದು ದೃಢಪಟ್ಟಿದೆ. ಕೆನಡಾದ ಲಿಬರಲ್ ಪಾರ್ಟಿಯ ನಾಯಕನಾಗಿ ಮಾರ್ಕ್ ಕಾರ್ನೆ ಆಯ್ಕೆಯಾಗಿದ್ದು, ಈ ವಾರವೇ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಪಕ್ಷದ ನಾಯಕನ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಾರ್ನೆ ಭರ್ಜರಿ ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಇದರೊಂದಿಗೆ, ಕೆನಡಾ ಪ್ರಧಾನಿ ಬದಲಾಗುವುದು ನಿಶ್ಚಿತವಾಗಿದೆ. ಮಾರ್ಕ್ ಕಾರ್ನೆ ಬ್ಯಾಂಕ್ ಆಫ್ ಕೆನಡಾ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ನ ಮಾಜಿ ಗವರ್ನರ್ ಆಗಿದ್ದಾರೆ.
ಕೆನಡಾದ ಲಿಬರಲ್ ಪಾರ್ಟಿಯ ನಾಯಕನ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮಾರ್ಕ್ ಕಾರ್ನೆ ಪರ ಶೇ 86 ರಷ್ಟು, ಅಂದರೆ, 131,674 ಮತಗಳು ಚಲಾವಣೆಯಾಗಿದ್ದವು. ಅತ್ತ ಟ್ರುಡೊ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದ, ಮಾಜಿ ಹಣಕಾಸು ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ 11,134 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರು.
ಮಾರ್ಕ್ ಕಾರ್ನೆ ಯಾರು?
ಕೆನಡಾದ ವಾಯುವ್ಯ ಪ್ರಾಂತ್ಯಗಳಲ್ಲಿ ಜನಿಸಿದ ಮಾರ್ಕ್ ಕಾರ್ನೆ, ತಮ್ಮ ಬಾಲ್ಯವನ್ನು ಎಡ್ಮಂಟನ್ನಲ್ಲಿ ಕಳೆದರು. ಅವರು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದಾರೆ. ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು ಮತ್ತು ನಂತರ 1995 ರಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. 2008 ರಲ್ಲಿ, ಅವರನ್ನು ಬ್ಯಾಂಕ್ ಆಫ್ ಕೆನಡಾದ ಗವರ್ನರ್ ಆಗಿ ನೇಮಿಸಲಾಯಿತು. 2010 ರಲ್ಲಿ, ವಿಶ್ವದ 25 ಮಂದಿ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರೆಂದು ಜಾಗತಿಕ ನಿಯತಕಾಲಿಕೆಯೊಂದರಲ್ಲಿ ಪರಿಗಣಿಸಲ್ಪಟ್ಟಿದ್ದರು.
ಇತ್ತೀಚೆಗೆ, ಮಾರ್ಕ್ ಕಾರ್ನೆ ಹವಾಮಾನ ಮತ್ತು ಹಣಕಾಸಿಗೆ ಸಂಬಂಧಿಸಿ ವಿಶ್ವಸಂಸ್ಥೆಯ ವಿಶೇಷ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2012 ರಲ್ಲಿಯೇ ಮಾರ್ಕ್ ಕಾರ್ನೆಗೆ ಆಗಿನ ಪ್ರಧಾನಿ ಸ್ಟೀಫನ್ ಹಾರ್ಪರ್ ಹಣಕಾಸು ಸಚಿವರಾಗುವ ಅವಕಾಶ ನೀಡಿದ್ದರು. ಆದರೆ ಅವರು ಅದಕ್ಕೆ ಒಪ್ಪಿರಲಿಲ್ಲ. ಇದೀಗ ಪ್ರಧಾನಿ ಹುದ್ದೆಯೇ ಒಲಿದುಬಂದಿದೆ.
ಸುಧಾರಿಸಲಿದೆಯೇ ಭಾರತ – ಕೆನಡಾ ಸಂಬಂಧ?
ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನೆ ಅಧಿಕಾರ ವಹಿಸಿಕೊಂಡ ಬಳಿಕ ಭಾರತ ಹಾಗೂ ಕೆನಡಾ ನಡುವಣ ಸಂಬಂಧ ಸುಧಾರಿಸಲಿದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಈಗಾಗಲೇ ಕಾರ್ನೆ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ ಉಭಯ ದೇಶಗಳ ಬಾಂಧವ್ಯ ತುಸು ಸುಧಾರಿಸುವ ಲಕ್ಷಣಗಳಿವೆ.
ಇದನ್ನೂ ಓದಿ: ಕ್ಯಾಲಿಫೋರ್ನಿಯಾ: ಹಿಂದೂ ದೇವಾಲಯದ ಮೇಲೆ ಭಾರತ ವಿರೋಧಿ ಬರಹ, ಧ್ವಂಸ
ಲಿಬರಲ್ ಪಕ್ಷದ ನಾಯಕತ್ವದ ಸ್ಪರ್ಧೆಗೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ತಾನು ಪ್ರಧಾನಿಯಾದರೆ ಸಮಾನ ಮನಸ್ಕ ದೇಶಗಳೊಂದಿಗೆ ಕೆನಡಾದ ವ್ಯಾಪಾರ ಸಂಬಂಧಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು. ಭಾರತದೊಂದಿಗೆ ಆ ಸಂಬಂಧವನ್ನು ಪುನರ್ನಿರ್ಮಿಸಲು ಅವಕಾಶಗಳಿವೆ ಎಂದೂ ಹೇಳಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Mon, 10 March 25